ಬೆಂಗ್ಳೂರಿನ ಕುಡಿಯುವ ನೀರನ್ನು ಮಗನಿಗಾಗಿ ಮಂಡ್ಯಕ್ಕೆ ಧಾರೆಯೆರೆದ ಸಿಎಂ!

Public TV
1 Min Read

ಬೆಂಗಳೂರು: ಈ ಬೇಸಿಗೆಯಲ್ಲಿ ಸಿಲಿಕಾನ್ ಸಿಟಿ ಮಂದಿಗೆ ಕಾವೇರಿ ನೀರು ಸಿಗಲ್ಲ. ಹನಿ ಹನಿ ನೀರಿಗೂ ತತ್ವಾರ ಬರಲಿದ್ದು, ಬೆಂಗಳೂರಿಗೆ ಬರುವ ಕಾವೇರಿ ಈ ಬಾರಿ ಫುಲ್ ಟೈಂ ಮಂಡ್ಯಗೆ ಮೀಸಲಾಗಿದ್ದಾಳೆ.

ಹೌದು, ಮಂಡ್ಯ ಕ್ಷೇತ್ರದಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ಹಾಗೂ ಸುಮಲತಾ ಅಂಬರೀಶ್ ಮುಖಾಮುಖಿ ಆಗಿರುವುದು ಈಗ ಬೆಂಗಳೂರಿಗೆ ಮಹಾನ್ ಕಂಟಕ ತಂದೊಡ್ಡಿದೆ. ಮಂಡ್ಯವ್ಯೂಹ ಭೇದಿಸಲು, ಮಗನ ಗೆಲುವಿಗಾಗಿ ಪಣ ತೊಟ್ಟಿರುವ ಸಿಎಂ ಕುಡಿಯೋದಕ್ಕೆಂದು ಬೆಂಗಳೂರಿಗೆ ಮೀಸಲಾಗಿಟ್ಟ ನೀರನ್ನು ಕೂಡ ಮಂಡ್ಯದ ಜನರ ಕೃಷಿ ಹಾಗೂ ಕುಡಿಯಲು ಕಾಲುವೆಗೆ ಹರಿಸಲು ಸೂಚನೆ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಾಮಾನ್ಯವಾಗಿ ಬೇಸಿಗೆ ಬಂದರೆ ಮಂಡ್ಯ ಭಾಗದಲ್ಲಿ ಕೃಷಿಗೆ ನೀರನ್ನು ಕಡಿಮೆ ಪ್ರಮಾಣದಲ್ಲಿ ಬಿಡಲಾಗುತ್ತದೆ. ಯಾಕೆಂದರೆ ಮೈಸೂರು-ಬೆಂಗಳೂರು ಸೇರಿದಂತೆ ಒಟ್ಟು 13 ಟಿಎಂಸಿ ನೀರು ಕುಡಿಯೋದಕ್ಕೆ ಬೇಕಾಗುತ್ತದೆ. ಆದ್ದರಿಂದ ಸರ್ಕಾರವೇ ಭತ್ತ ಬೆಳೆಯಬೇಡಿ ಎಂದು ಮಂಡ್ಯದ ರೈತರಿಗೆ ಸೂಚನೆ ಕೊಡುತ್ತದೆ. ಆದ್ರೆ ಈ ಬಾರಿ ಮಾತ್ರ ದಿನದ 24 ಗಂಟೆಯೂ ಮಂಡ್ಯ ಕಾಲುವೆಯಲ್ಲಿ ಭರಪೂರ ನೀರು ಹರಿಯುತ್ತದೆ. ಬೆಂಗಳೂರಿಗೆ ಬಿಡುತ್ತಿದ್ದ ನೀರನ್ನು ಮಂಡ್ಯಕ್ಕೆ ಬಿಡಲು ಸಿಎಂ ಜಲಮಂಡಳಿಗೆ ಸೂಚಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಸಿಎಂ ಅವರ ಈ ನಿರ್ಧಾರದಿಂದ ಜಲಮಂಡಳಿ, ಜಲತಜ್ಞರು ಕಂಗಾಲಾಗಿದ್ದಾರೆ. ಅಲ್ಲದೆ 13 ಟಿಎಂಸಿ ಕುಡಿಯೋದಕ್ಕೆ ಬೇಕಾಗುತ್ತದೆ, ಕೃಷಿ ಉದ್ದೇಶಕ್ಕೆ ಕಡಿಮೆ ನೀರು ಬಿಡಿ ಎಂದು ಮುಖ್ಯಕಾರ್ಯದರ್ಶಿಗಳಿಗೆ ಸಭೆಯಲ್ಲಿ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಇದರ ಜೊತೆಗೆ ಈ ಬಾರಿ ಮುಂಗಾರು ವಿಳಂಬವಾಗಲಿದ್ದು ಜುಲೈವರೆಗೂ ಒಳಹರಿವು ಇಲ್ಲದೆ ಇರೋದು ಇನ್ನೊಂದು ಟೆನ್ಶನ್‍ಗೆ ಕಾರಣವಾಗಿದೆ. ಆದ್ರೆ ಸಿಎಂ ಇದನ್ನೆಲ್ಲ ಕಿವಿಗೆ ಹಾಕಿಕೊಳ್ಳುವ ಗೋಜಿಗೆ ಹೋಗೋದು ಅನುಮಾನವಾಗಿರೋದ್ರಿಂದ ಸಿಎಂ ಪುತ್ರ ವಾತ್ಸಲ್ಯಕ್ಕೆ ಈ ಬಾರಿ ಬೆಂಗಳೂರಿಗರಿಗೆ ನೀರಿನ ಸಮಸ್ಯೆ ಫಿಕ್ಸ್ ಆಗುವ ಎಲ್ಲಾ ಲಕ್ಷಣಗಳು ಕಾಣಸಿಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *