ಬೆಂಗಳೂರು: ಕಾಲೇಜು ಹುಡುಗರ ಮಧ್ಯೆ ನಡೆದ ಘರ್ಷಣೆಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ಬೆಂಗಳೂರಿನ ಅಂಜನಾ ನಗರದ ಬಳಿಯ ದೇವರಾಜ ಅರಸು ಸರ್ಕಾರಿ ಹಾಸ್ಟೆಲ್ನಲ್ಲಿ ನಡೆದಿದೆ.
ರೋಹಿತ್ ಮೃತ ವಿದ್ಯಾರ್ಥಿ. ಘರ್ಷಣೆಯಲ್ಲಿ ಅಮರೇಶಪ್ಪ ಎಂಬ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಡೆದಿದ್ದೇನು?: ಗುರುವಾರ ರಾತ್ರಿ 10.30 ರ ಸುಮಾರಿಗೆ ದೇವರಾಜ ಅರಸು ಸರ್ಕಾರಿ ಹಾಸ್ಟೆಲ್ ನಲ್ಲಿದ್ದ ರವೀಶ್ ಎಂಬಾತ ಕುಡಿದು ಬಂದು ಶೌಚಾಲಯದ ಬಾಗಿಲು ತೆರೆದೇ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದನ್ನು ರೋಹಿತ್ ಪ್ರಶ್ನಿಸಿದ್ದು ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಈ ವೇಳೆ ರವೀಶ್ ಕುಡಿದ ಮತ್ತಿನಲ್ಲಿ ರೋಹಿತ್ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ವೇಳೆ ತಡೆಯಲು ಬಂದ ಅಮರೇಶಪ್ಪನಿಗೂ ಚಾಕುವಿನಿಂದ ಇರಿದಿದ್ದಾನೆ. ಅದೃಷ್ಟವಶಾತ್ ಅಮರೇಶಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನೆಲಮಂಗಲದ ಸೋಲೂರು ಮೂಲದ ರೋಹಿತ್ ಹಾಗೂ ಅಮರೇಶಪ್ಪ ಇಬ್ರು ಸಹ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಆರೋಪಿ ರವೀಶ್ ವಿಜಯನಗರದ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದ ಎನ್ನಲಾಗಿದೆ. ಈ ಕುರಿತಂತೆ ಬ್ಯಾಡರಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರವೀಶ್ ಗಾಗಿ ಬಲೆ ಬೀಸಿದ್ದಾರೆ.