ಅಣ್ಣಾವ್ರು ತಮ್ಮ ಪಾತ್ರ, ಆದರ್ಶಮಯ ಜೀವನದ ಮೂಲಕ ಚಿರಸ್ಥಾಯಿ: ದರ್ಶನ್

Public TV
1 Min Read

– ತರುಣ್ ಸುಧೀರ್, ಹರಿಪ್ರಿಯಾ ವಿಶ್

ಬೆಂಗಳೂರು: ಅಣ್ಣಾವ್ರು ತಮ್ಮ ಪಾತ್ರಗಳ ಹಾಗೂ ಆದರ್ಶಮಯ ಜೀವನದ ಮೂಲಕ ಕನ್ನಡ ನಾಡಿನ ಮನೆ ಮನೆಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟ್ವೀಟ್ ಮಾಡಿದ್ದಾರೆ.

ಇಂದು ಕನ್ನಡಿಗರ ಮೇಯರ್ ಮುತ್ತಣ್ಣ ಡಾ. ರಾಜ್‍ಕುಮಾರ್ ಅವರ 91ನೇ ವರ್ಷದ ಹುಟ್ಟುಹಬ್ಬ. ರಾಜ್‍ಕುಮಾರ್ ಅವರು ದೈಹಿಕವಾಗಿ ಕನ್ನಡಿಗರನ್ನು ಅಗಲಿದರೂ ಅವರ ಸಿನಿಮಾದ ಪಾತ್ರಗಳು ಮತ್ತು ಸರಳ ವ್ಯಕ್ತಿತ್ವ ಅವರು ನಮ್ಮ ಜೊತೆಯೇ ಇರುವಂತೆ ಮಾಡಿದೆ. ಅಣ್ಣಾವ್ರ ಹುಟ್ಟುಹಬ್ಬಕ್ಕೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶ್ ಮಾಡಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ದರ್ಶನ್ ಅವರು, ವರನಟ ಡಾ|| ರಾಜ್‍ಕುಮಾರ್ ರವರ ಹುಟ್ಟುಹಬ್ಬದ ಸವಿನೆನಪಿನಲ್ಲಿ. ಅಣ್ಣಾವ್ರು ತಮ್ಮ ಪಾತ್ರಗಳ ಹಾಗೂ ಆದರ್ಶಮಯ ಜೀವನದ ಮೂಲಕ ಕನ್ನಡ ನಾಡಿನ ಮನೆ ಮನೆಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ನಿಮ್ಮ ದಾಸ ದರ್ಶನ್ ಎಂದು ಬರೆದು ರಾಬರ್ಟ್ ಚಿತ್ರದ ಟೈಟಲ್‍ನೊಂದಿಗೆ ರಾಜ್‍ಕುಮಾರ್ ಅವರ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ರಾಜ್‍ಕುಮಾರ್ ಅವರ ಹುಟ್ಟುಹಬ್ಬಕ್ಕೆ ಹಲವಾರು ಸಿನಿಮಾ ನಟ-ನಟಿಯರು ಟ್ವೀಟ್ ಮಾಡುವ ಮೂಲಕ ಶುಭಕೋರಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿ, ಹೀರೋಗಳು ತುಂಬಾ ಜನ ಬಂದು ಹೋಗುತ್ತಾರೆ. ಆದರೆ ಲೆಜೆಂಡ್‍ಗಳು ಮಾತ್ರ ಶಾಶ್ವತವಾಗಿ ಉಳಿಯುತ್ತಾರೆ. ಅಂತಹ ಲೆಜೆಂಡ್ ರಾಜ್‍ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಪರದೆಯ ಮೇಲೆ ಮತ್ತು ಜೀವನದಲ್ಲೂ ಹೀರೋ ಆಗಿದ್ದ ವ್ಯಕ್ತಿ ಎಂದು ಟ್ವೀಟ್ ಮಾಡಿದ್ದಾರೆ.

ಸ್ಯಾಂಡಲ್‍ವುಡ್ ನಟಿ ಹರಿಪ್ರಿಯಾ ಕೂಡ ಟ್ವೀಟ್ ಮಾಡಿ, ತಾವು ಚಿಕ್ಕವರಾಗಿದ್ದಾಗ ಚಿಕ್ಕಬಳ್ಳಾಪುರದಲ್ಲಿ ರಾಜ್‍ಕುಮಾರ್ ಅವರ ಸಿನಿಮಾದ ಶೂಟಿಂಗ್ ನೋಡಿದ್ದ ಕಥೆಯನ್ನು ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಕೊರೊನಾ ಇರುವುದರಿಂದ ನಮಗೆ ಅವರ ಪುಣ್ಯಭೂಮಿಗೆ ಹೋಗಿ ಹತ್ತಿರದಿಂದ ಅವರಿಗೆ ಗೌರವ ಸಲ್ಲಿಸಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *