ಏಕಾಂಗಿ ಸೈನಿಕನಿಗೆ ಮೂರು ದಿಕ್ಕಿನಿಂದ ಮುಹೂರ್ತವಿಟ್ರು!

Public TV
1 Min Read

ಬೆಂಗಳೂರು: ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಬೇಕಿದ್ದ ಸೈನಿಕ ಸಿ.ಪಿ  ಆಸೆಗೆ ಕೊನೆ ಗಳಿಗೆಯಲ್ಲಿ ಬ್ರೇಕ್ ಬಿದ್ದಿದೆ. ಆದರೆ ಯೋಗೇಶ್ವರ್ ಪಟ್ಟ ತಪ್ಪಿಸಲು ಮೂರು ದಿಕ್ಕಿನಿಂದ ಪ್ರಯತ್ನಿಸಿದ್ದ ಮೂವರು ಶತ್ರುಗಳು ಪಟ್ಟ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮದೇ ಆದ ಕಾರಣಕ್ಕೆ ಮೂವರು ಸಹ ಯೋಗೇಶ್ವರ್ ವಿರುದ್ಧ ಯುದ್ಧ ಸಾರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯೋಗೇಶ್ವರ್ ಗೆ ಮೊದಲ ಆಘಾತ ನೀಡಿದ್ದು ಸಚಿವ ಆರ್.ಅಶೋಕ್. ಒಕ್ಕಲಿಗ ಸಮುದಾಯದ ಇನ್ನೋರ್ವ ನಾಯಕ ಬಿಜೆಪಿ ಪ್ರಾಬಲ್ಯ ಇಲ್ಲದ ಪ್ರದೇಶದಿಂದ ಬಂದು ಸಚಿವರಾಗುವುದು ಅಶೋಕ್‍ಗೆ ಬೇಡವಾಗಿತ್ತು. ಡಿಕೆಶಿ ಮತ್ತು ಹೆಚ್‍ಡಿಕೆಯಂತವರ ವಿರುದ್ಧ ರಾಜಕಾರಣ ಮಾಡಿ ಸೈ ಎನ್ನಿಸಿಕೊಂಡ ಯೋಗೇಶ್ವರ್ ರಂತಹ ಪ್ರಭಾವಿ ಸಚಿವನಾಗವುದನ್ನು ತಪ್ಪಿಸಲು ಅಶೋಕ್ ತೆರೆಮರೆಯ ಆಟ ಆಡಿ ಗೆದ್ದಿದ್ದಾರೆ.

ಯೋಗೇಶ್ವರ್ ಪಾಲಿನ ಎರಡನೇ ಶತ್ರುವಾಗಿ ಕಾಡಿದ್ದು ಮೈಸೂರು ಸಂಸದ ಪ್ರತಾಪ ಸಿಂಹ. ಯೋಗೇಶ್ವರ್ ಸಚಿವರಾದರೆ ಹಳೆ ಮೈಸೂರು ಭಾಗದ ಬಿಜೆಪಿಯ ಪ್ರಶ್ನಾತೀತ ನಾಯಕರಾಗೋದು ಗ್ಯಾರಂಟಿ. ತಮ್ಮದೇ ಒಕ್ಕಲಿಗ ಸಮುದಾಯದ ಯೋಗೇಶ್ವರ್ ಹೀಗೆ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಭಾವಿಯಾಗಿ ಬೆಳೆಯೋದು ಪ್ರತಾಪ್ ಸಿಂಹಗೆ ಬೇಕಿಲ್ಲ. ಆದ್ದರಿಂದ ತೆರೆಮರೆಯ ಆಟ ಕಟ್ಟಿದ ಮೈಸೂರು ಸಂಸದ ಯೋಗೇಶ್ವರ್‍ಗೆ ಟಕ್ಕರ್ ನೀಡಿ ಒಳಗೊಳಗೆ ನಕ್ಕು ಸುಮ್ಮನಾಗಿದ್ದಾರೆ.

ಯೋಗೇಶ್ವರ್ ಹಿನ್ನಡೆಗೆ ಕಾರಣವಾದ ಮೂರನೇ ಶತ್ರು ಮಾಜಿ ಸಚಿವ ಹೆಚ್.ವಿಶ್ವನಾಥ್. ಹುಣಸೂರಿನಿಂದ ತಮಗೆ ಟಿಕೆಟ್ ತಪ್ಪಿಸಲು ಯತ್ನಿಸಿದ್ದರು ಎಂಬ ಕೋಪ ಒಂದೆಡೆಯಾದರೆ, ತಮ್ಮ ಸೋಲಿಗೆ ಯೋಗೇಶ್ವರ್ ಕಾರಣ ಅನ್ನೋ ಸಿಟ್ಟು ಸೇರಿ ಯೋಗೇಶ್ವರ್ ಪಟ್ಟಾಭಿಷೇಕಕ್ಕೆ ವಿಶ್ವನಾಥ್ ಒಳಗೊಳಗೆ ಅಡ್ಡಿ ಪಡಿಸಿದ್ದಾರೆ. ಹೀಗೆ ಏಕಾಂಗಿ ಯೋಗೇಶ್ವರ್ ಮೂವರು ಶತ್ರುಗಳ ಹೊಡೆತಕ್ಕೆ ಸಿಕ್ಕಿ ಪಟ್ಟಾಭಿಷೇಕದಿಂದ ವಂಚಿತರಾಗಿ ನಿರಾಸೆ ಅನುಭವಿಸುವಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *