ಸಂತ್ರಸ್ತೆ ಅಪಹರಣ ಪ್ರಕರಣ; ಭವಾನಿ ರೇವಣ್ಣಗೆ ಬಂಧನ ಭೀತಿ

Public TV
1 Min Read

– ಯಾವುದೇ ಕ್ಷಣದಲ್ಲಿ ಹೆಚ್‌.ಡಿ.ರೇವಣ್ಣ ಪತ್ನಿ ಬಂಧನ ಸಾಧ್ಯತೆ

ಹಾಸನ: ಸಂತ್ರಸ್ತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಭವಾನಿ ರೇವಣ್ಣ (Bhavani Revanna) ಬಂಧನ ಸಾಧ್ಯತೆ ಇದೆ.

ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ಅವರಿಗಾಗಿ ಎಸ್‌ಐಟಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ನಿರೀಕ್ಷಣಾ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಾದರೂ ರೇವಣ್ಣ ಪತ್ನಿ ಭವಾನಿ ಅವರನ್ನು ಬಂಧಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಭವಾನಿ ರೇವಣ್ಣಗೆ ಎಸ್‌ಐಟಿಯಿಂದ ಮತ್ತೊಂದು ನೋಟಿಸ್

ಬಂಧನ ಭೀತಿ ನಡುವೆ ಇಂದು ಎಸ್ಐಟಿ ಎದುರು ಹಾಜರಾಗ್ತಾರಾ ಭವಾನಿ ಎಂಬುದು ಕುತೂಹಲ ಮೂಡಿಸಿದೆ. ಇಂದು ಭವಾನಿ ರೇವಣ್ಣ ವಿಚಾರಣೆಗಾಗಿ ಹೊಳೆನರಸೀಪುರಕ್ಕೆ ಎಸ್‌ಐಟಿ ತಂಡ ಆಗಮಿಸಲಿದೆ.

ಭವಾನಿ ರೇವಣ್ಣ ಮೇ 15 ರಂದು ಎಸ್ಐಟಿಗೆ ಲಿಖಿತ ಪತ್ರ ನೀಡಿದ್ದರು. ಕಿಡ್ನ್ಯಾಪ್ ಆರೋಪ ಪ್ರಕರಣದಲ್ಲಿ ತಮ್ಮ ತನಿಖೆ ಅವಶ್ಯಕತೆ ಇದ್ದರೆ ತಾವು ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಇರುವುದಾಗಿ ಹೇಳಿದ್ದರು. ಇದನ್ನೂ ಓದಿ: ‘ವಿಕೃತ ಕಾಮಿ, ಕೊನೆಯ ಉಸಿರಿರೋವರೆಗೂ ಶಿಕ್ಷೆ ನೀಡೋ ಕೇಸ್’- ಕೋರ್ಟ್‍ನಲ್ಲಿ ವಾದ, ಪ್ರತಿವಾದ ಹೇಗಿತ್ತು?

ಭವಾನಿ ಅವರ ಪತ್ರವನ್ನೇ ಉಲ್ಲೇಖಿಸಿ ಎಸ್‌ಐಟಿ ಶುಕ್ರವಾರ ಮತ್ತೊಂದು ನೋಟಿಸ್‌ ನೀಡಿದೆ. ಪ್ರಕರಣ ಸಂಬಂಧ ತಮ್ಮ ವಿಚಾರಣೆ ಅಗತ್ಯ ಇದೆ. ಹಾಗಾಗಿ ಜೂ.1 ರಂದು ವಿಚಾರಣೆಗೆ ಬರುವುದಾಗಿ ತಿಳಿಸಿತ್ತು. ಇಂದು ಮಹಿಳಾ ಅಧಿಕಾರಿಗಳ ಜೊತೆ ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸಕ್ಕೆ ವಿಚಾರಣೆಗೆ ಆಗಮಿಸುವ ಬಗ್ಗೆ ನೋಟಿಸ್‌ನಲ್ಲಿ ತಿಳಿಸಿತ್ತು.

ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ನಡುವೆ ನೀವು ತಿಳಿಸಿದ ವಿಳಾಸಕ್ಕೆ ಬರುತ್ತೇವೆ. ಈ ಸಮಯದಲ್ಲಿ ನೀವು ಖುದ್ದು ಹಾಜರಿರಬೇಕು ಎಂದು ಎಸ್‌ಐಟಿ ಸೂಚಿಸಿತ್ತು. ಎಸ್‌ಐಟಿ ಮುಂದೆ ಹಾಜರಾದರೆ ಬಹುತೇಕ ಬಂಧನ ಖಚಿತ ಎನ್ನಲಾಗುತ್ತಿದೆ. ಇದನ್ನೂ ಓದಿ: ಭವಾನಿ ರೇವಣ್ಣ ಕಾರು ಚಾಲಕನ ಬಂಧನ

Share This Article