ಹೋಳಿ ಸಂಭ್ರಮಕ್ಕೂ ತಟ್ಟಿದ ಕೊರೊನಾ ವೈರಸ್ ಭೀತಿ

Public TV
1 Min Read

ಬೆಂಗಳೂರು: ಇಡೀ ವಿಶ್ವದೆಲ್ಲೆಡೆ ಮಹಾಮಾರಿ ಕೊರೊನಾ ವೈರಸ್ ಭೀತಿ ಆತಂಕ ಸೃಷ್ಟಿಸಿದೆ. ಈ ಮಹಾಮಾರಿ ಭಾರತಕ್ಕೂ ವಕ್ಕರಿಸಿದ್ದು, ಎಲ್ಲಾ ಕಡೆ ಆತಂಕದ ಛಾಯೆ ಮೂಡಿಸಿದೆ. ಸಿಲಿಕಾನ್ ಸಿಟಿಯ ಮಂದಿ ಕೂಡ ಕೊರೊನಾ ಅಂದರೆ ಬೆಚ್ಚಿ ಬೀಳುವಂತೆ ಮಾಡಿದೆ. ಜೊತೆಗೆ ಹೋಳಿ ಹಬ್ಬದ ಸಂಭ್ರಮಕ್ಕೂ ಕೊರೊನಾ ಬ್ರೇಕ್ ಹಾಕಿದೆ.

ಸದ್ಯ ಕೊರೊನಾ ಎಲ್ಲಾ ಕಡೆ ಕೇಳಿಬರುತ್ತಿರೋ ಭಯಾನಕ ಶಬ್ಧವಾಗಿದೆ. ಈ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಈಗ ಭಾರತಕ್ಕೂ ಕಾಳಿಟ್ಟಿದ್ದು, ದಿನೇ ದಿನೇ ವೈರಸ್ ಪೀಡಿತರ ಸಂಖ್ಯೆ ಹೆಚ್ಚಾಗ್ತಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬೇಡಿ, ಜನರ ಗುಂಪಿನಲ್ಲಿ ಯಾರಿಗಾದರೂ ಈ ವೈರಸ್ ಇದ್ದರೆ ಅದು ಹರಡತ್ತೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಕೊಟ್ಟಿದೆ. ಈ ಕೊರೊನಾ ವೈರಸ್ ಭೀತಿ ಹೋಳಿ ಹಬ್ಬಕ್ಕೂ ತಟ್ಟಿದ್ದು, ಸಾರ್ವಜನಿಕರು ಅದ್ಧೂರಿಯಾಗಿ ಹೋಳಿಯನ್ನ ಆಚಾರಿಸುತ್ತಿಲ್ಲ. ಅದರಲ್ಲೂ ಹೋಳಿ ಹಬ್ಬಕ್ಕಾಗಿಯೇ ಕಾದಿರುತ್ತಿದ್ದ ಕಾಲೇಜಿನ ವಿದ್ಯಾರ್ಥಿಗಳು ಕೂಡ ಕೊರೊನಾ ಭೀತಿಯಿಂದ ಹೋಳಿ ಹಬ್ಬ ಮಾಡುತ್ತಿಲ್ಲ. ಹೋಳಿ ಹಬ್ಬಕ್ಕಿಂತ ಆರೋಗ್ಯವೇ ಮುಖ್ಯ. ಹೋಳಿಯನ್ನ ಬೇಕಾದ್ರೇ ಮುಂದಿನ ವರ್ಷ ಮಾಡಬಹುದು ಎಂದು ವಿದ್ಯಾರ್ಥಿಗಳು ಹೋಳಿಯಿಂದ ದೂರ ಇದ್ದಾರೆ.

ಇತ್ತ ಸಿಲಿಕಾನ್ ಸಿಟಿಯ ಸ್ಟಾರ್ ಹೋಟಲ್‍ಗಳು ಹೋಳಿ ಹಬ್ಬವನ್ನ ಆಯೋಜನೆ ಮಾಡುತ್ತಿದ್ದವು. ಆದರೆ ಕೊರೊನಾ ವೈಸರ್ ನಿಂದಾಗಿ ಆ ಸಂಭ್ರಮಕ್ಕೂ ಬ್ರೇಕ್ ಬಿದ್ದಿದೆ. ಹೋಳಿ ಬಣ್ಣದ ವ್ಯಾಪಾರಿಗಳು ಮಾತ್ರ ಹಾಕಿದ ಬಂಡವಾಳವೇ ಸಿಗುತ್ತಿಲ್ಲ. ಈ ಭಾರಿ ತಂದಿದ್ದ ಹೋಳಿ ಬಣ್ಣಗಳು ಮಾರಾಟವಾಗುತ್ತಿಲ್ಲ. ಈ ಕೊರೊನಾ ವೈರಸ್ ಯಾಕಾದ್ರೂ ಬಂತೋ ಎನ್ನುತ್ತಿದ್ದಾರೆ.

ಮಹಾಮಾರಿ ಕೊರೊನಾ ವೈರಸ್ ದಿನೇ ದಿನೇ ಜನರಲ್ಲಿ ಭಯವನ್ನ ಹೆಚ್ಚು ಮಾಡ್ತಿದೆ. ಈಗಾಗಲೇ ಕರ್ನಾಟಕದಲ್ಲಿ 4 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಬೆಂಗಳೂರಿನಲ್ಲಿ ಮೂರು ಕೊರೊನಾ ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *