ಜನೌಷಧಿ ಕೇಂದ್ರಗಳಲ್ಲಿ ಮಾಸ್ಕ್ ವಿತರಣೆ: ಶ್ರೀರಾಮುಲು

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯ ವ್ಯಕ್ತಿಗೆ ಕೊರೊನಾ ವೈರಸ್ ಪತ್ತೆಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಫುಲ್ ಆಲರ್ಟ್ ಆಗಿದೆ.

ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಫೀಲ್ಡಿಗಿಳಿದು ಪರಿಶೀಲನೆ ನಡೆಸುತ್ತಿದ್ದಾರೆ. ಮಾಸ್ಕ್ ಗೆ ಹೆಚ್ಚಿನ ದರ ವಿಧಿಸುತ್ತಿರುವ ಬಗ್ಗೆಯೂ ಮಾಹಿತಿ ಪಡೆದಿರುವ ಸಚಿವ ಶ್ರೀರಾಮುಲು ಜನೌಷಧಿ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಸ್ಕ್ ವಿತರಿಸಲಾಗುವುದು ಎಂದು ಹೇಳಿದರು.

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಶ್ರೀರಾಮುಲು ದಿಢೀರ್ ಪರಿಶೀಲನೆ ನಡೆಸಿದ್ರು. ಕೊರೊನಾ ವೈರಸ್ ಪತ್ತೆ ಹಚ್ಚುವ ಕೇಂದ್ರಗಳನ್ನ ಪರಿಶೀಲನೆ ಮಾಡಿದ್ರು. ಇದೇ ವೇಳೆ ವಿಮಾನ ಪ್ರಯಾಣಿಕರ ತಪಾಸಣೆ ಕಾರ್ಯವನ್ನು ಖುದ್ದು ಪರಿಶೀಲನೆ ನಡೆಸಿದ್ರು.

ಬಳಿಕ ವಿಧಾನಸೌಧಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕೊರೊನಾ ವೈರಸ್ ಬಗ್ಗೆ ಯಾರೂ ಭಯ ಭೀತರಾಗೋದು ಬೇಡ. ಈಗಾಗಲೇ ಏರ್‌ಪೋರ್ಟಿನಲ್ಲಿ ಮಾಸ್ಕ್ ವಿತರಣೆ ಮಾಡುತ್ತಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ, ಜನೌಷಧಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

450 ಶಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕಿನ ವ್ಯಕ್ತಿಯು ಅಮೆರಿಕದಿಂದ ಬಂದಿದ್ದು, ಅವರು ಓಡಾಡಿದ ಟ್ಯಾಕ್ಸಿ, ಅವರ ಅಕ್ಕಪಕ್ಕದವರು ಹಾಗೂ ಕುಟುಂಬದವರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ರಾಜ್ಯ ಸರ್ಕಾರ ಈ ವೈರಸ್ ಅನ್ನು ಎದುರಿಸಲು ಸಮರ್ಥವಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *