ಸ್ವಪಕ್ಷಿಯರಿಂದ್ಲೇ ಸಂಕಷ್ಟಕ್ಕೆ ಗುರಿಯಾಗ್ತಾರಾ ಮಾಜಿ ಸಿಎಂ ಸಿದ್ದರಾಮಯ್ಯ?

Public TV
2 Min Read

ಬೆಂಗಳೂರು: ಹಾಲಿ ಸಿಎಂ ಸಹವಾಸ ಮಾಡಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂಕಷ್ಟಕ್ಕೆ ಸಿಲುಕಿದ್ರಾ ಅನ್ನೋ ಅನುಮಾನವೊಂದು ಎದ್ದಿದ್ದು, ಈ ಮೂಲಕ ಹಳೆ ದೋಸ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಸಿಎಂ ಈಗ ಸ್ವಪಕ್ಷಿಯರಿಂದಲೇ ಸಂಕಷ್ಟಕ್ಕೆ ಗುರಿಯಾಗ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.

ಹೌದು. ದೋಸ್ತಿ ಸರ್ಕಾರ ಕೆಡವಿದ ನಂತರ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ಸ್ನೇಹ ಹೆಚ್ಚಿರುವ ಬಗ್ಗೆ ರಾಜ್ಯ ಹಿರಿಯ ಕಾಂಗ್ರೆಸ್ ನಾಯಕರಿಂದ ಕಾಂಗ್ರೆಸ್ ಹೈಕಮಾಂಡ್‍ಗೆ ದೂರು ತಲುಪಿದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ದೂರಿನಲ್ಲೇನಿದೆ?
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಫೋನ್ ಟ್ಯಾಪಿಂಗ್ ಪ್ರಕರಣ ನಡೆದಿದ್ದು, ಅದನ್ನ ಸ್ವತಃ ಸಿದ್ದರಾಮಯ್ಯ ಅವರೇ ಸಿಬಿಐ ತನಿಖೆಗೆ ಕೊಡಿ ಎಂದು ಹೇಳಿದ್ದಾರೆ ಅನ್ನೋದು ದೂರಿನ ಪ್ರಮುಖ ಅಂಶವಾಗಿದೆ.

ಸಮ್ಮಿಶ್ರ ಸರ್ಕಾರದ ಪತನದ ನಂತರ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಸ್ನೇಹ ಇನ್ನೂ ಗಟ್ಟಿಯಾಗಿದ್ದು, ಸಿದ್ದರಾಮಯ್ಯ ಯಡಿಯೂರಪ್ಪ ಸ್ನೇಹದ ಫಲವಾಗಿಯೇ ಫೋನ್ ಟ್ಯಾಪಿಂಗ್ ಪ್ರಕರಣ ಸಿಬಿಐ ಅಂಗಳಕ್ಕೆ ಹೋಗಿದೆ. ಕಾಂಗ್ರೆಸ್ ಸರ್ಕಾರ ಹಾಗೂ ಸಮ್ಮಿಶ್ರ ಸರ್ಕಾರದ ಅವಧಿಯ ಕೆಲವು ಯೋಜನೆ ಕೈ ಬಿಡಲು ಯಡಿಯೂರಪ್ಪ ಮುಂದಾಗಿದ್ದರು. ಆದರೆ ಸಿದ್ದರಾಮಯ್ಯ ಒತ್ತಾಯಿಸುತ್ತಿದ್ದಂತೆ ಅರ್ಧಗಂಟೆಯಲ್ಲೇ ಅನ್ನಭಾಗ್ಯ ಹಾಗೂ ಇಂದಿರ ಕ್ಯಾಂಟಿನ್ ನಂತಹ ಯೋಜನೆ ಕೈ ಬಿಡಲ್ಲ ಎಂದು ಯಡಿಯೂರಪ್ಪ ಪ್ರಕಟಿಸುತ್ತಾರೆ.

ಈ ಮೂಲಕ ಸಿದ್ದರಾಮಯ್ಯ ಅವರು ಪಕ್ಷಕ್ಕಿಂತ ನಾನೇ ದೊಡ್ಡವನು ಎಂಬಂತೆ ವರ್ತಿಸುತ್ತಿದ್ದಾರೆ. ಪಕ್ಷದ ಸಾಧನೆಯು ನಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇದೆಲ್ಲಾ ಅವರಿಬ್ಬರ ಸ್ನೇಹದ ಸಂಕೇತವಾಗಿದೆ. ಈ ಸ್ನೇಹವೇ ಸಮ್ಮಿಶ್ರ ಸರ್ಕಾರವನ್ನ ಪತನ ಮಾಡಿತು ಎಂದು ಕೈ ನಾಯಕರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಸಮಯ ನೋಡಿ ದಾಳ ಉರುಳಿಸಿರುವ ವಿರೋಧಿ ಬಣ ಸಿದ್ದರಾಮಯ್ಯ ಅವರ ವಿಪಕ್ಷ ನಾಯಕನ ಕನಸಿಗೆ ಕಲ್ಲು ಹಾಕಲು ಮುಂದಾಗಿದೆ. ಇತ್ತ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಅನ್ನೋ ಸಿಟ್ಟಲ್ಲಿರುವ ಹೈಕಮಾಂಡ್‍ಗೆ ಈ ದೂರು ಮತ್ತಷ್ಟು ಪುಷ್ಠಿ ನೀಡಿದೆ.

ಯಡಿಯೂರಪ್ಪರ ಆತ್ಮೀಯರಾದ ಸಿದ್ದರಾಮಯ್ಯರನ್ನ ವಿಪಕ್ಷದಲ್ಲಿ ಕೂರಿಸಿದರೆ ಹೊಂದಾಣಿಕೆ ರಾಜಕಾರಣ ಫಿಕ್ಸ್ ಅನ್ನೋದು ಕೈ ಪಾಳಯದ ಹಿರಿಯ ನಾಯಕರ ಗುಮಾನಿಯಾಗಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯರನ್ನು ಹಣಿಯಲು ಸ್ವಪಕ್ಷಿಯರೇ ಸಮಯ ನೋಡಿ ದಾಳ ಉರುಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *