ಪರಮೇಶ್ವರ್ ಮನೆಯಲ್ಲಿ ಐಟಿ ಶೋಧ ಅಂತ್ಯ

Public TV
3 Min Read

– 89 ಲಕ್ಷ ನಗದು, ದಾಖಲೆ ವಶ

ಬೆಂಗಳೂರು: ಪರಮೈಶ್ವರ್ಯಕ್ಕಾಗಿ ಆದಾಯ ತೆರಿಗೆ ಅಧಿಕಾರಿಗಳು ಬಿಡುವಿಲ್ಲದೇ ಹುಡುಕಾಟ ನಡೆಸಿದ್ದು, ಸದ್ಯ ಐಟಿ ಶೋಧ ಅಂತ್ಯವಾಗಿದೆ. 2 ದಿನದಿಂದ ದಾಳಿ ನಡೆಸಿದ ಅಧಿಕಾರಿಗಳಿಗೆ ನಿಧಿ, ಸಂಪತ್ತೇ ಕಾಣಸಿದೆ. ‘ಪರಮ’ ಸಂಪತ್ತು ಕಂಡು ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಶುಕ್ರವಾರ ಮುಂಜಾನೆಯಿಂದ ಪರಮೇಶ್ವರ್ ಮನೆ, ಕಾಲೇಜು, ಆಪ್ತರ ಮೇಲೆ ದಾಳಿ ಮಾಡಿದ ಆದಾಯ ತೆರಿಗೆ ಅಧಿಕಾರಿಗಳು ನಿರಂತರ ಅಷ್ಟೈಶ್ವರ್ಯವನ್ನೇ ಬಗೆದಿದ್ದಾರೆ. ಆದರೆ ಬಗೆದಷ್ಟು ಕಂಡುಬರುತ್ತಿರೋ ಪರಮೈಶ್ವರ್ಯವನ್ನು ಕಂಡು ಸ್ವತಃ ಐಟಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ರಾತ್ರಿಯಾಯ್ತು ಎಂದು ಸುಮ್ಮನೆ ಕೂರಿಲ್ಲ. ನಿನ್ನೆ ರಾತ್ರಿ 12 ಗಂಟೆವರೆಗೂ ಶೋಧ ಕಾರ್ಯ ನಡೆಸಿದ್ದ ಅಧಿಕಾರಿಗಳು ಮುಂಜಾನೆ 3.30ರ ಸುಮಾರಿಗೆ ವಾಪಸ್ಸಾಗಿದ್ದಾರೆ.

ಬಗೆದಷ್ಟು ಪರಮೈಶ್ವರ್ಯ ಬಯಲು!
ಪರಮೇಶ್ವರ್ ಬರೋಬ್ಬರಿ 103 ಕೋಟಿ ಆಸ್ತಿಯನ್ನು ಬಹಿರಂಗಪಡಿಸಿಲ್ಲ. 100 ಕೋಟಿ ದಾಖಲೆ ಪತ್ರಗಳಿಗೆ ಉತ್ತರ ನೀಡಿಲ್ಲ. ಕಾಲೇಜಿನಲ್ಲಿ ದುಡಿದ ಹಣ ಪಂಚತಾರಾ ಹೋಟೆಲ್ ಮೇಲೆ ಹಾಗೂ ಕಾಲೇಜಿನ ಸಿಬ್ಬಂದಿಗೆ ಗೊತ್ತಾಗದ ರೀತಿಯಲ್ಲಿ ಅವರ ಹೆಸರಲ್ಲಿ 4.6 ಕೋಟಿ ಹೂಡಿಕೆ ಮಾಡಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ 89 ಲಕ್ಷ ರೂ., ನೆಲಮಂಗಲದ ಮನೆಯಲ್ಲಿ 1.8 ಕೋಟಿ ರೂ. ಹೀಗೆ ಪರಮೇಶ್ವರ್ ಗೆ ಸಂಬಂಧಿಸಿದ್ದ ಒಟ್ಟು 4.5 ಕೋಟಿ ರೂ. ನಗದು ದೊರಕಿದೆ. ಸಿದ್ದಾರ್ಥ ಶಿಕ್ಷಣ ಸಂಸ್ಥೆಯಿಂದ ಕೋಟಿ ಕೋಟಿ ತೆರಿಗೆ ವಂಚನೆ ಮಾಡಲಾಗಿದೆ. 2002 ರಿಂದಲೂ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ತೆರಿಗೆ ಕಟ್ಟಿಲ್ಲ. ಈ ಮೂಲಕ ಶಿಕ್ಷಣ ಸಂಸ್ಥೆ ಪಾಲಿಕೆಗೆ ಸುಮಾರು 2 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಪರಮೇಶ್ವರ್ ಅಣ್ಣನ ಮಗ ಆನಂದ್ ಸಿದ್ದಾರ್ಥ್ ಬಳಿ ಡೈರಿ ಪತ್ತೆಯಾಗಿದ್ದು, ಡೈರಿಯಲ್ಲಿ ಮೆಡಿಕಲ್ ಸೀಟು ಹಂಚಿಕೆ ಬಗ್ಗೆ ಉಲ್ಲೇಖ ಮಾಡಿರುವುದನ್ನು ಮಾಡಿದನ್ನು ಆದಾಯ ತೆರಿಗೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಪರಂಗೆ ಸಂಬಂಧಿಸಿದ 120 ಅಕೌಂಟ್ ಸೀಜ್..!
ಎರಡನೇ ದಿನವಾದ ನಿನ್ನೆ ಪರಮೇಶ್ವರ್, ಪತ್ನಿ ಕನ್ನಿಕಾ ಪರಮೇಶ್ವರ್ ಹಾಗೂ ಸಹೋದರನ ಪುತ್ರ ಆನಂದ್ ಸಿದ್ದಾರ್ಥ್ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸೇರಿದ 120ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಐಟಿ ಅಧಿಕಾರಿಗಳು ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ. ಪರಮೇಶ್ವರ್ ಮನೆಯ ಲಾಕರ್ ಓಪನ್ ಆಗದ ಹಿನ್ನೆಲೆಯಲ್ಲಿ ಕೀ ಮೇಕರ್ ಗಳನ್ನು ಕರೆಸಿ ಅಪಾರ ಪ್ರಮಾಣದ ಹಣ, ಚಿನ್ನಾಭರಣ ಹಾಗೂ ಹಲವು ದಾಖಲೆಗಳನ್ನೂ ಪತ್ತೆ ಹಚ್ಚಿದ್ದಾರೆ. ಪರಮೇಶ್ವರ್ ಅಣ್ಣನ ಮಗ ಆನಂದ್ ಬಳಿ ಸಿಕ್ಕ ಡೈರಿಯಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಸೀಟು ಹಂಚಿಕೆಯಲ್ಲಿ ಸಿಕ್ಕ ಹಣವನ್ನು ಸಿನಿಮಾಗಳ ಮೇಲೆ ಹೂಡಿಕೆ ಮಾಡಿರೋದು ಕೂಡ ಪತ್ತೆಯಾಗಿದೆ.

ಜಮೀನು ವಿಚಾರದಲ್ಲಿ ಆಪ್ತರಿಗೆ ಸೋಮವಾರ ವಿಚಾರಣೆಗೆ ಬರಲು ಸಮನ್ಸ್ ನೀಡಲಾಗಿದೆ. ಇತ್ತ ಪರಮೇಶ್ವರ್ ಆಪ್ತ, ಸಿದ್ದಾರ್ಥ ಕಾಲೇಜು ಸೇರಿದಂತೆ ರಿಯಲ್ ಎಸ್ಟೇಟ್ ವ್ಯವಹಾರ ನೋಡುತ್ತಿದ್ದ ರಂಗನಾಥ್ ಮನೆ ಮೇಲೆ ದಾಳಿಯಾಗಿದ್ದು ರಾತ್ರಿ 11 ಗಂಟೆವರೆಗೂ ಶೋಧ ಮುಂದುವರಿದಿತ್ತು. ಈ ವೇಳೆ ಹಣ ಮತ್ತು ಮಹತ್ವದ ದಾಖಲೆ ಸಿಕ್ಕಿದೆ ಎನ್ನಲಾಗಿದೆ. ಹಾಗಾಗಿ ಮಂಗಳವಾರ ಕಚೇರಿಗೆ ಬರುವಂತೆ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ಇನ್ನು ನೆಲಮಂಗಲ ತಾಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿ ಪರಮೇಶ್ವರ್ ಅಣ್ಣ ಶಿವಪ್ರಸಾದ್ ಮಾಡಿದ್ದ ಜಮೀನು ವ್ಯವಹಾರ ಕೂಡ ಪರಮೇಶ್ವರ್‍ಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.

ಇದೆಲ್ಲದರ ನಡುವೆ ಕೇಂದ್ರ ಮಾಜಿ ಸಚಿವ ಜಾಲಪ್ಪ ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿದೆ. ಕೋಲಾರ ಐಟಿ ದಾಳಿಯಲ್ಲಿ ಅಳಿಯ ನಾಗರಾಜ, ಮಗ ರಾಜೇಂದ್ರ, ಮುನಿರಾಮೇಗೌಡ ಮನೆಯಲ್ಲಿ 1 ಕೋಟಿ 9 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *