ಬಿಎಸ್‍ವೈ ಮೂಲಕ ಅಮಿತ್ ಶಾಗೆ ಷರತ್ತು ರವಾನಿಸಿದ ರೆಬೆಲ್ಸ್

Public TV
2 Min Read

– ಅನರ್ಹರಿಗೆ ಬಿಎಸ್‍ವೈ ಅಭಯ

ಬೆಂಗಳೂರು/ನವದೆಹಲಿ: ಉಪಚುನಾವಣೆ ಮುಹೂರ್ತ ಬೆನ್ನಲ್ಲೇ ರೆಬೆಲ್ಸ್ ಆಟ ಶುರು ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೂಲಕ ಅನರ್ಹರು ಗೃಹ ಸಚಿವ ಅಮಿತ್ ಶಾಗೆ ಷರತ್ತು ರವಾನಿಸಿದ್ದಾರೆ.

ಪ್ರವಾಹ ಪರಿಹಾರ ಹಿನ್ನೆಲೆಯಲ್ಲಿ ದೆಹಲಿಯ ಕೃಷ್ಣ ಮೆನನ್ ಮಾರ್ಗ್ ನಲ್ಲಿರುವ ಅಮಿತ್ ಶಾ ನಿವಾಸದಲ್ಲಿ ಭೇಟಿಯಾದ ಸಿಎಂ, ರೆಬೆಲ್ಸ್ ಗಳ 5 ಷರತ್ತುಗಳನ್ನು ಬಿಎಸ್‍ವೈ ಮುಂದಿಟ್ಟಿದ್ದಾರೆ. ಅನರ್ಹರ ಷರತ್ತು ನೋಡಿ ಅಮಿತ್ ಶಾ ಅವರು ಯಾವುದೇ ಭರವಸೆ ನೀಡದೇ ಪರಿಶೀಲಿಸೋದಾಗಿ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ರೆಬೆಲ್ಸ್ ಷರತ್ತೇನು..?
ಉಪಚುನಾವಣೆಗೆ ತಗಲುವ ಖರ್ಚನ್ನು ಬಿಜೆಪಿಯೇ ನೋಡಿಕೊಳ್ಳಬೇಕು. ಸುಪ್ರೀಂಕೋರ್ಟಿನಲ್ಲಿ ತೀರ್ಪು ವಿಳಂಬವಾದ್ರೆ ಪತ್ನಿ, ಮಕ್ಕಳು, ಸಂಬಂಧಿಗಳಿಗೆ ಟಿಕೆಟ್ ಕೊಡಬೇಕು. ಬೆಂಗಳೂರಲ್ಲಿ ಮೋದಿ, ಬೆಳಗಾವಿಯಲ್ಲಿ ಅಮಿತ್ ಶಾ ಚುನಾವಣಾ ರ‍್ಯಾಲಿ ನಡೆಸಬೇಕು. 15 ಕ್ಷೇತ್ರಗಳ ಚುನಾವಣೆಗೆ ಬಿಜೆಪಿ ಸಚಿವರು, ಶಾಸಕರನ್ನ ಉಸ್ತುವಾರಿಯಾಗಿ ನೇಮಿಸಬೇಕು. ಹಾಗೂ ಸಚಿವ ಸ್ಥಾನಗಳನ್ನ ಖಾಲಿಯಾಗಿಯೇ ಇಡಬೇಕು, ಉಪಚುನಾವಣೆ ಬಳಿಕವೂ ಕೊಟ್ಟ ಮಾತು ನೆರವೇರಿಸಬೇಕು ಎಂದು ಅನರ್ಹ ಶಾಸಕರು ಷರತ್ತು ವಿಧಿಸಿದ್ದಾರೆ.

ಆದರೆ ಅಮಿತ್ ಶಾ ಭೇಟಿ ಬಳಿಕ ಯಡಿಯೂರಪ್ಪ ಮಾತನಾಡಿ, ಅನರ್ಹ ಶಾಸಕರ ಬಗ್ಗೆ ಚರ್ಚೆ ಮಾಡಿಲ್ಲ. ಇದೂವರೆಗೂ ಮೊದಲ ಕಂತಿನ ಹಣ ಬಿಡುಗಡೆ ಆಗಿಲ್ಲ. ಪರಿಹಾರ ಕಾರ್ಯ ಆರಂಭಿಸಲು ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. 2000 ಕೋಟಿ ಹಣಕ್ಕೆ ಮನವಿ ಮಾಡಿದೆ. ಅವರೇ ಬಂದು ಖುದ್ದು ಪರಿಸ್ಥಿತಿ ನೋಡಿದ್ದಾರೆ. ಪರಿಶೀಲನೆ ನಡೆಸಿ ಎರಡು-ಮೂರು ದಿನದಲ್ಲಿ ಬಿಡುಗಡೆ ಆಗಲಿದೆ. ಪ್ರವಾಹ ಸ್ಥಳಗಳಿಗೆ ಹಣ ಬಿಡುಗಡೆಗೆ ಚುನಾವಣಾ ನೀತಿ ಸಂಹಿತಿ ಅಡ್ಡಿಯಾಗಲ್ಲ. ಪ್ರಧಾನಿ ಬಂದ ಬಳಿಕ ಚರ್ಚೆ ಮಾಡಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದರು.

ನಾಳೆ ನಿಮ್ಮ ಪರ ತೀರ್ಪು ಬರಲಿದೆ ಚಿಂತೆ ಮಾಡಬೇಡಿ. ಸ್ಪೀಕರ್ ನ್ಯಾಚುರಲ್ ಜಸ್ಟೀಸ್ ಫಾಲೋ ಮಾಡಿಲ್ಲ. ಕಳೆದ ವಾರ ನ್ಯಾಯಮೂರ್ತಿ ವಿಚಾರಣೆಯಿಂದ ಹಿಂದೆ ಸರಿದರು. ಇಲ್ಲದಿದ್ದರೆ ಕಳೆದ ವಾರವೇ ವಿವಾದ ಇತ್ಯರ್ಥ ಆಗುತ್ತಿತ್ತು. ನಾಳೆ ಸುಪ್ರೀಂ ಕೋರ್ಟಿನಲ್ಲಿ ರಿಲೀಫ್ ಸಿಗುತ್ತದೆ. ಚುನಾವಣಾ ಘೋಷಣೆ ಆಗಿರೊದರಿಂದ ಸುಪ್ರೀಂಕೋರ್ಟ್ ಒಂದು ನಿರ್ಧಾರಕ್ಕೆ ಬರಲಿದೆ. ಅನರ್ಹರ ಶಾಸಕರು ಆತಂಕಪಡಬೇಕಾದ ಅಗತ್ಯ ಇಲ್ಲ ಎಂದು ಅಮಿತ್ ಶಾ, ಯಡಿಯೂರಪ್ಪ ಸಭೆ ವೇಳೆ ಉಪಸ್ಥಿತರಿದ್ದ ರಮೇಶ್ ಜಾರಕಿಹೊಳಿ ಪಿಎ ಭರತ್‍ಗೆ ಹೇಳಿದ್ದಾರೆ ಎನ್ನಲಾಗಿದೆ.

ಶಾ ಭೇಟಿ ವೇಳೆ ಸಿಎಂಗೆ ಅಶ್ವಥ್ ನಾರಾಯಣ್ ಹಾಗೂ ಲಕ್ಷ್ಮಣ್ ಸವದಿ ಸಾಥ್ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *