ಸರ ಕದ್ದು ಕತ್ತನ್ನೂ ಸೀಳ್ತಾರೆ- ಬೆಂಗ್ಳೂರಿಗೆ ಎಂಟ್ರಿ ಕೊಟ್ಟಿದೆ ರಕ್ತಪಿಪಾಸು ಗ್ಯಾಂಗ್

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಸರಗಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಮಹಿಳೆಯರ ಸರ ಕದ್ದು ಕತ್ತನ್ನೂ ಸೀಳುವ ರಕ್ತಪಿಪಾಸು ಗ್ಯಾಂಗ್ ಪೊಲೀಸರ ನಿದ್ದೆಗೆಡಿಸಿದೆ.

ಪೊಲೀಸರು ಸರಗಳ್ಳತನ ತಡೆಯಲು ಎಷ್ಟೇ ಸರ್ಕಸ್ ಮಾಡುತ್ತಿದ್ದರೂ ಸರಗಳ್ಳರ ಹಾವಳಿ ಮಾತ್ರ ಕಡಿಮೆ ಆಗುತ್ತಿಲ್ಲ. ಈಗ ಪೊಲೀಸರಿಗೆ ತಲೆನೋವಾಗಿ ಬೆಂಗಳೂರಿಗೆ ಸರಗಳ್ಳತನ ಮಾಡಿ ಕತ್ತನ್ನೇ ಸೀಳುವ ರಕ್ತಪಿಪಾಸು ಗ್ಯಾಂಗ್ ಎಂಟ್ರಿಕೊಟ್ಟಿದ್ದು, ಈ ಖದೀಮರು ಮಹಿಳೆಯರ ಸರಗಳ್ಳತನ ಮಾಡಿ, ಅವರ ಕತ್ತನ್ನು ಸೀಳಿ ಕೊಲೆ ಮಾಡುತ್ತಾರೆ.

ತುಮಕೂರಿನ ಕ್ಯಾಂತಸಂದ್ರದಲ್ಲಿ ಇಂತಹದ್ದೆ ಒಂದು ಘಟನೆ ನಡೆದಿದೆ. ಕ್ಯಾತಸಂದ್ರದ ನಿವಾಸಿ ಭಾಗ್ಯಮ್ಮ ಅವರ ಹತ್ಯೆ ನಡೆದಿದ್ದು, ಕೊಲೆಗಾರರು ಯಾರು ಅನ್ನೋದು ಇನ್ನೂ ಪತ್ತೆಯಾಗಿಲ್ಲ. ಆದರೆ ಈ ಕೊಲೆ ಮಾಡಿದ್ದ ಹಂತಕರ ಚಹರೆಯನ್ನು ಹೋಲುವ ವ್ಯಕ್ತಿಗಳು ಬೆಂಗಳೂರಿನ ಹೆಸರುಘಟ್ಟ, ಪೀಣ್ಯ, ಸೋಲದೇವನಹಳ್ಳಿಯ ಕಡೆ ಕಂಡುಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕ್ಯಾತಸಂದ್ರದಲ್ಲಿ ಕೃತ್ಯವೆಸೆಗಿದ್ದ ಗ್ಯಾಂಗ್ ಬೆಂಗಳೂರಿಗೂ ಎಂಟ್ರಿ ಕೊಟ್ಟಿದೆ ಎನ್ನುವ ಅನುಮಾನ ಕಾಡುತ್ತಿದೆ.

ಸದ್ಯ ಸಿಸಿಟಿವಿ ದೃಶ್ಯಾವಳಿಗಳನ್ನು ಬೆಂಗಳೂರಿನ ಉತ್ತರ ವಿಭಾಗದ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಾರಂಭಿಸಿದ್ದಾರೆ. ಆದರೆ ಇಷ್ಟು ದಿನ ಸರಗಳ್ಳರ ಕಾಟದಿಂದ ಹೆದರುತ್ತಿದ್ದ ಗಾರ್ಡನ್ ಸಿಟಿ ಮಂದಿ ಈಗ ರಕ್ತಪಿಪಾಸು ಗ್ಯಾಂಗ್ ಬಗ್ಗೆ ತಿಳಿದು ಆತಂಕಕ್ಕೊಳಗಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *