ಬೆಂಗಳೂರು: ಅಧಿವೇಶನ ಅಂದ ಮೇಲೆ ಒಂದಿಷ್ಟು ಹಾಸ್ಯ, ಹರಟೆ, ಕೋಪ, ತಾಪ ಇವೆಲ್ಲ ಕಾಮನ್. ಜಂಟಿ ಅಧಿವೇಶನದಲ್ಲೂ ಹಾಸ್ಯ, ನಗೆ ಚಟಾಕಿ ಬರವಿಲ್ಲ. ಎರಡನೇ ದಿನ ಸದನಕ್ಕೆ ಆಗಮಿಸಿದ ಸಚಿವ ಆನಂದ್ ತಮ್ಮ ಮಾತಿನ ಮೂಲಕ ನಗೆ ಪಾಟಲಿಗೆ ಒಳಗಾದ ಹಾಸ್ಯ ಘಟನೆ ನಡೆಯಿತು.
ಸದನ ಪ್ರಾರಂಭವಾದ ಮೇಲೆ ಸಭೆಯ ಮುಂದೆ ಕಾಗದ ಪತ್ರ ಮಂಡನೆ ಮಾಡೋ ಪ್ರಕ್ರಿಯೆ ನಡೆಯುತ್ತದೆ. ಯಾರೇ ಸಭೆ ಮುಂದೆ ಪತ್ರ ಮಂಡಿಸಬೇಕಾದ್ರೆ ತಮ್ಮ ಹೆಸರಿನ ಮುಂದಿನ ಕಾಗದ ಪತ್ರ ಅಂತ ಸೇರಿಸಬೇಕು. ಆದ್ರೆ ಸಚಿವರಾದ ಆನಂದ್ ಸಿಂಗ್ ಕಾಗದ ಪತ್ರಗಳನ್ನು ಮಂಡಿಸುತ್ತಿದ್ದೇನೆ ಅಂತ ಆತುರವಾಗಿ ಹೇಳಿ ಬಿಟ್ರು. ಕೂಡಲೇ ಸಭಾಪತಿಗಳು ‘ಯಾರ ಪತ್ರ ರೀ’ ಅಂತ ಹಾಸ್ಯ ಚಟಾಕಿ ಹಾರಿಸಿದ್ರು. ಸರಿಯಾಗಿ ಹೇಳಿ ಕೊಡಿ ಅಂತ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಕಾಲೆಳೆದ್ರು. ಬಳಿಕ ಎಚ್ಚೆತ್ತ ಸಚಿವ ಆನಂದ್ ಸಿಂಗ್ ನನ್ನ ಮುಂದಿರುವ ಕಾಗದ ಪತ್ರ ಸಭೆಯ ಮುಂದೆ ಮಂಡಿಸುತ್ತಿದ್ದೇನೆ ಅಂತ ಹೇಳಿದ್ರು. ಈ ಘಟನೆ ಸದನದಲ್ಲಿ ನಗೆಗಡಲಲ್ಲಿ ತೇಲುವಂತೆ ಮಾಡಿತು.
ತಾವೇ ಹಾಸ್ಯ ಚಟಾಕಿ ಹಾರಿಸಿದ ಇಬ್ರಾಹಿಂ:
ತಮ್ಮ ವಿಶಿಷ್ಟ ಮಾತುಗಾರಿಕೆ ಮೂಲಕ ಹೆಸರಾದ ಸಿಎಂ ಇಬ್ರಾಹಿಂ ತಮ್ಮ ಭಾಷಣದಲ್ಲಿ ಹಾಸ್ಯ ಚಟಾಕಿಗಳನ್ನ ಹಾರಿಸಿ ಸದನವನ್ನು ಹಾಸ್ಯದ ಕಡಲಲ್ಲಿ ತೇಲಿಸಿದ್ರು. ರಾಮಾಯಣ, ಮಹಾಭಾರತ, ಬಸವಣ್ಣ ತತ್ವಗಳನ್ನು ತಮ್ಮ ಭಾಷಣದಲ್ಲಿ ಸೇರಿಸಿ ಅದ್ಭುತ ಭಾಷಣ ಮಾಡಿದ್ರು. ಕಾನೂನು ಸುವ್ಯವಸ್ಥೆ ಬಗ್ಗೆ ಭಾಷಣ ಮಾಡುವಾಗ ದೇವದಾಸಿಯರ ಬಗ್ಗೆ ಇಬ್ರಾಹಿಂ ಪ್ರಸ್ತಾಪ ಮಾಡಿದರು.
ಈ ವೇಳೆ ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್, ಹೆಣ್ಣು ಮಕ್ಕಳ ಬಗ್ಗೆ ನಿಮಗೆ ಗೌರವ ಇಲ್ಲ. ದೇವದಾಸಿಯರ ಬಗ್ಗೆ ಮಾತಾಡಬೇಡಿ ಅಂತ ಕಿಡಿಕಾರಿದ್ರು. ಇದಕ್ಕೆ ಹಾಸ್ಯದ ರೂಪದಲ್ಲೇ ಉತ್ತರ ಕೊಟ್ಟ ಇಬ್ರಾಹಿಂ, ತಾಯಿ ತೇಜಸ್ವಿನಿ ನನಗೆ 8 ಜನ ಹೆಣ್ಣು ಮಕ್ಕಳು. ನನಗೆ ಗೌರವ ಇಲ್ಲ ಅಂತ ಅನ್ನಬೇಡಮ್ಮ ಅಂತ ಹಾಸ್ಯವಾಗಿ ಹೇಳಿದ್ರು. ಕೂಡಲೇ ಸದನದಲ್ಲಿ ಸದಸ್ಯರೊಬ್ಬರು ಎಷ್ಟು ಜನ ಮಕ್ಕಳು ಸಾರ್ ನಿಮಗೆ ಅಂತ ಮರು ಪ್ರಶ್ನೆ ಮಾಡಿದರು. ಇದಕ್ಕೂ ಹಾಸ್ಯದಿಂದಲೇ ಉತ್ತರ ಕೊಟ್ಟ ಇಬ್ರಾಹಿಂ ನನಗೆ 9 ಜನ ಮಕ್ಕಳು ಅಂದರು. ಇಬ್ರಾಹಿಂ ಮಾತು ಕೇಳಿ ಸದನ ನಗೆಗಡಲಲ್ಲಿ ತೇಲಾಡಿತು.