ಡಿ.29ಕ್ಕೆ ಬೆಂಗ್ಳೂರಲ್ಲಿ ಆಟೋ ಸಂಚಾರ ಬಂದ್ – ಸಾರಿಗೆ ಇಲಾಖೆ ವಿರುದ್ಧ ಸಿಡಿದ ಚಾಲಕರು

Public TV
2 Min Read

ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ವರ್ಷದ ಕೊನೆಯಲ್ಲಿ ಆಟೋ ಚಾಲಕರು (Auto Drivers) ಶಾಕ್ ನೀಡಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 29 ರಿಂದ ಆಟೋ ಚಾಲಕರು ಆಟೋ ಸಂಚಾರ ಬಂದ್ ಮಾಡಲು ತೀರ್ಮಾನಿಸಿದ್ದು, ಆಟೋ ಓಡಾಟ ಬಹುತೇಕ ಸ್ತಬ್ಧವಾಗುವ ಸಾಧ್ಯತೆ ಇದೆ.

ಬರುವ ಹೊಸ ವರ್ಷವನ್ನು ಅದ್ಧೂರಿಯಿಂದ ಸ್ವಾಗತಿಸುವ ಖುಷಿಯಲ್ಲಿದ್ದ ಜನರಿಗೆ ಆಟೋ ಚಾಲಕರು ಶಾಕ್ ಕೊಟ್ಟಿದ್ದಾರೆ. ಸಾರಿಗೆ ಇಲಾಖೆ ರ‍್ಯಾಪಿಡೊ ಬೈಕ್ (Rapido Bike), ಟ್ಯಾಕ್ಸಿ ಬ್ಯಾನ್ ಮಾಡಬೇಕು, ಬೌನ್ಸ್ ಎಲೆಕ್ಟ್ರಿಕ್‌ ಬೈಕ್‌ಗೆ (Electric Bike) ನೀಡಿರುವ ಅನುಮತಿ ತೆಗೆದುಹಾಕಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆಗೆ (Protest) ಕರೆ ನೀಡಲಾಗಿದೆ. ಡಿ.29ಕ್ಕೆ ಸಂಪೂರ್ಣ ಆಟೋ ಓಡಾಟ ಸ್ಥಗಿತಗೊಳಿಸಲು ತೀರ್ಮಾನಿಸಿದ್ದು, ಬರೊಬ್ಬರಿ ನಗರದ 2 ಲಕ್ಷ ಆಟೋ ಚಾಲಕರು ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ: ಈ ದೇಶಕ್ಕಾಗಿ BJP ನಾಯಕನ ಮನೆ ನಾಯಿಯೂ ಸತ್ತಿಲ್ಲ – ಕೋಲಾಹಲ ಎಬ್ಬಿಸಿದ ಖರ್ಗೆ ಹೇಳಿಕೆ

ಇತ್ತೀಚಿಗಷ್ಟೇ ಸಾರಿಗೆ ಇಲಾಖೆ ರಾಜ್ಯದಲ್ಲಿ ಕೆಲ ಖಾಸಗಿ ಕಂಪನಿಗಳ ಎಲೆಕ್ಟ್ರಿಕ್‌ ಬೈಕ್ (Electric Bike), ಟ್ಯಾಕ್ಸಿಗೆ ಅವಕಾಶ ನೀಡಿತ್ತು. ಸದ್ಯ ಈ ವಿಚಾರ ಆಟೋ ಚಾಲಕರ ಕೆಂಗೆಣ್ಣಿಗೆ ಗುರಿಯಾಗಿದೆ. ಹಲವು ವರ್ಷಗಳಿಂದ ನಗರದ ಜನರಿಗೆ ಸೇವೆ ಸಲ್ಲಿಸುತ್ತಿರೋ ಆಟೋ ಚಾಲಕರಿಗೆ ಆಗಬಹುದಾದ ಪರಿಣಾಮಗಳ ಬಗ್ಗೆ ಚಿಂತಿಸದೇ ಏಕಾಏಕಿ ಬೈಕ್ ಟ್ಯಾಕ್ಸಿಗೆ ಸಾರಿಗೆ ಇಲಾಖೆ ಅವಕಾಶ ನೀಡಿರೋದಕ್ಕೆ ಚಾಲಕ ಸಂಘಟನೆಗಳು ಆಕ್ರೋಶಗೊಂಡಿವೆ. ಇದನ್ನೂ ಓದಿ: ನೂಪೂರ್‌ಗೆ ಬೆಂಬಲ ನೀಡಿದ್ದಕ್ಕೆ ತಬ್ಲೀಘಿ ಜಮಾತ್‌ನ ಮೂಲಭೂತವಾದಿಗಳಿಂದ ಔಷಧ ವ್ಯಾಪಾರಿಯ ಹತ್ಯೆ: ಎನ್‌ಐಎ

ಮೊದಲ ಹಂತದಲ್ಲಿ 100 ಎಲೆಕ್ಟ್ರಿಕ್‌ ಬೈಕ್‌ಗಳನ್ನ (E-Bike) ರಸ್ತೆಗಿಳಿಸಲು ನಿರ್ಧರಿಸಿರುವ ಬೌನ್ಸ್ ಕಂಪನಿ, ನಂತರ ಹಂತ-ಹಂತವಾಗಿ ಸಾವಿರ ಇ- ಬೈಕ್‌ಗಳನ್ನ ರಸ್ತೆಗಿಳಿಸಲು ನಿರ್ಧಾರ ಮಾಡಿದೆ. ಈ ಹಿಂದೆ ಬೌನ್ಸ್ ಕಂಪನಿ ಬೈಕ್ ಸೇವೆ ನೀಡುತ್ತಿತ್ತು. ಆದ್ರೆ ಕೊರೊನಾ ಸಮಯದಲ್ಲಿ ಬೈಕ್ ಸೇವೆಯನ್ನ ಸ್ಥಗಿತಗೊಳಿಸಿತ್ತು. ಈಗ ಮತ್ತೆ ಇ-ಬೈಕ್ ಸೇವೆ ನೀಡಲು ಮುಂದಾಗಿರೋದು ಚಾಲಕರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಈಗಾಗಲೇ ಕೊರೊನಾ ಸಂಕಷ್ಟದಿಂದ ಬೇಸತ್ತಿರುವ ಚಾಲಕರಿಗೆ ಎಲೆಕ್ಟ್ರಿಕ್‌ ಬೈಕ್ ಟ್ಯಾಕ್ಸಿ ಗಾಯದ ಮೇಲೆ ಬರೆ ಎಳೆದಂತೆ ಆಗಲಿದೆ ಎಂದು ಸಾರಿಗೆ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.

ಇನ್ನೂ ಸಾರಿಗೆ ಇಲಾಖೆ ನಿರ್ಧಾರವನ್ನು ಹಿಂಪಡೆಯುವಂತೆ ಒತ್ತಾಯಿಸಿ ಡಿ.29 ರಂದು ಬೆಂಗಳೂರಿನಾದ್ಯಂತ ಆಟೋ ಸಂಚಾರ ಸ್ಥಗಿತಗೊಳಿಸಲು ಆಟೋ ಚಾಲಕರು ಮುಂದಾಗಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ (ಮೆಜೆಸ್ಟಿಕ್) ದಿಂದ ಬೃಹತ್ ಆಟೋ ರ‍್ಯಾಲಿ ಮೂಲಕ ವಿಧಾನಸೌಧಕ್ಕೆ ತೆರಳಿ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಈ ಆಟೋ ಮುಷ್ಕರಕ್ಕೆ ಈಗಾಗಲೇ 21 ಆಟೋ ಸಂಘಟನೆಗಳು ಸಾಥ್ ನೀಡಿವೆ. ರಾಜಧಾನಿಯ 2.10 ಲಕ್ಷ ಆಟೋ ಚಾಲಕರು ಮುಷ್ಕರಕ್ಕೆ ಬೆಂಬಲ ನೀಡಿದ್ದು 29ರ ಗುರುವಾರದಂದು ರಾಜಧಾನಿಯಲ್ಲಿ ಸಂಪೂರ್ಣ ಆಟೋ ಸಂಚಾರ ಸ್ತಬ್ಧವಾಗಲಿದೆ ಎಂದು ಆದರ್ಶ ಅಟೋ ಚಾಲಕರ ಸಂಘದ ಪ್ರಮುಖ ಮಂಜುನಾಥ್ ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *