ವರದಿಗಾರ ಹನುಮಂತು ಪತ್ನಿಗೆ ಕೆಎಂಎಫ್‍ನಲ್ಲಿ ಉದ್ಯೋಗ: ಅಶ್ವಥ್ ನಾರಾಯಣ್

Public TV
1 Min Read

ಬೆಂಗಳೂರು: ಅಕಾಲಿಕ ಮರಣವೊಂದಿದ ಪಬ್ಲಿಕ್ ಟಿವಿ ರಾಮನಗರದ ವರದಿಗಾರ ಹನುಮಂತು ಅವರ ಪತ್ನಿಗೆ ಕೆಎಂಎಫ್‍ನಲ್ಲಿ ಉದ್ಯೋಗ ನೀಡಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ.

ರಾಮನಗರ ಜಿಲ್ಲಾ ಕಾರಾಗೃಹದ ಬಳಿ ವರದಿ ಮಾಡಿ ಮರಳುತ್ತಿದ್ದಾಗ ಪತ್ರಕರ್ತ ಹನುಮಂತು ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮನೆಗೆ ಮೂಲ ಅಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬ ನೋವಿನಲ್ಲಿತ್ತು. ಹೀಗಾಗಿ ಅವರಿಗೆ ನೆರವಾಗಲಿ ಎಂದು 5 ಲಕ್ಷ ನೀಡಿರುವ ಅಶ್ವಥ್ ನಾರಾಯಣ್ ಅವರು, ಹನುಮಂತು ಪತ್ನಿಗೆ ಕೆಎಂಎಫ್‍ನಲ್ಲಿ ಉದ್ಯೋಗ ಕೊಡಿಸುವುದಾಗಿ ತಿಳಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಶ್ವಥ್ ನಾರಾಯಣ್ ಅವರು, ಅಕಾಲಿಕ ನಿಧನ ಹೊಂದಿದ್ದ ರಾಮನಗರದ ಪಬ್ಲಿಕ್ ಟಿವಿಯ ವರದಿಗಾರ ಹನುಮಂತು ಅವರ ಮನೆಗೆ ತೆರಳಿ ಅವರ ಧರ್ಮಪತ್ನಿ ಶಶಿಕಲಾ ಅವರಿಗೆ ಡಾ|ಅಶ್ವಥ್ ನಾರಾಯಣ್ ಫೌಂಡೇಶನ್ ವತಿಯಿಂದ 5 ಲಕ್ಷ ರೂ. ಗಳನ್ನು ನೀಡಿದೆ. ಇವರಿಗೆ ಕೆಎಂಎಫ್‍ನಲ್ಲಿ ಉದ್ಯೋಗ ಕೊಡಿಸಲಾಗುವುದು. ಕುಟುಂಬದ ಈ ಸಂಕಷ್ಟದ ದಿನಗಳಲ್ಲಿ ನಮ್ಮ ಪ್ರಾರ್ಥನೆ ನಿಮ್ಮೊಂದಿಗಿದೆ ಎಂದು ಬೆರೆದುಕೊಂಡಿದ್ದಾರೆ.

ಪಬ್ಲಿಕ್ ಟಿವಿಯ ಅರಂಭದ ದಿನದಿಂದಲೂ ಕೆಲಸ ಮಾಡುತ್ತಿದ್ದ ಹುನುಮಂತು ಅವರಿಗೆ, ಕಚೇರಿ ಕಡೆಯಿಂದ ಅವರ ಕುಟುಂಬಕ್ಕೆ 10 ಲಕ್ಷ ರೂ. ಹಣವನ್ನು ನೀಡಲಾಗಿದೆ. ಇದರ ಜೊತೆಗೆ ಪಬ್ಲಿಕ್ ಟಿವಿ ಸಿಬ್ಬಂದಿಯ ಒಂದು ದಿನದ ವೇತನವನ್ನು ಹನುಮಂತು ಕುಟುಂಬಕ್ಕೆ ನೀಡಲಾಗಿದೆ. ಇದರ ಜೊತೆಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಹನುಮಂತು ಅವರು ಮನೆಗೆ ಹೋಗಿ ಅವರ ಪತ್ನಿಗೆ 5 ಲಕ್ಷ ರೂ. ಗಳ ಚೆಕ್ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದ್ದರು.

ಏಪ್ರಿಲ್ 21ರಂದು ರಾಮನಗರದ ಜಿಲ್ಲಾ ಕಾರಾಗೃಹದ ಬಳಿ ವರದಿ ಮಾಡಿ ಹಿಂದಿರುಗುತ್ತಿದ್ದ ವೇಳೆ ಹನುಮಂತು ಅವರಿಗೆ ಅಪಘಾತವಾಗಿತ್ತು. ಬೈಕಿನಲ್ಲಿ ತೆರೆಳುತ್ತಿದ್ದ ಹನುಮಂತು ಅವರಿಗೆ ಹಿಂದಿನಿಂದ ಬಂದ ಎಟಿಎಂಗೆ ಹಣ ತುಂಬುವ ವಾಹನ ಡಿಕ್ಕಿ ಹೊಡೆದಿತ್ತು. ಪರಿಣಾಮ ಹನುಮಂತು ಅವರು ಸಾವನ್ನಪ್ಪಿದ್ದರು.

Share This Article
Leave a Comment

Leave a Reply

Your email address will not be published. Required fields are marked *