400 ವರ್ಷಗಳ ಹಿಂದಿನ ಕಲ್ಯಾಣಿಯ ಸ್ವಚ್ಛತೆಗೆ ಮುಂದಾದ ನ್ಯಾಯಾಧೀಶರು

Public TV
1 Min Read

ಬೆಂಗಳೂರು: ನಗರಗಳ ಅಭಿವೃದ್ಧಿಯ ಹೆಸರಿನಲ್ಲಿ ಅದೆಷ್ಟೋ ಪುರಾತನ ಕಟ್ಟಡಗಳು, ಕೆರೆಗಳು, ಕಲ್ಯಾಣಿಗಳು ಮಣ್ಣಲ್ಲಿ ಮಣ್ಣಾಗಿ ಇತಿಹಾಸಗಳೇ ಮುಚ್ಚಿ ಹೋಗಿವೆ. ಅಳಿವಿನಂಚಿನ ಕಲ್ಯಾಣಿಯನ್ನು ಕಂಡ ನ್ಯಾಯಾಧೀಶರು ತಮ್ಮ ತಂಡವನ್ನು ಕಟ್ಟಿಕೊಂಡು ಸ್ವಚ್ಛತೆಗೆ ಮುಂದಾಗಿ ಮತ್ತೆ ಪುನರ್ಜಿವ ನೀಡಿದ್ದಾರೆ.

ಬೆಂಗಳೂರು ಹೊರವಲಯದ ಆನೇಕಲ್‍ನ ಸಿಡಿಹೊಸಕೋಟೆ ರಸ್ತೆಯಲ್ಲಿರುವು ಪುಷ್ಕರಾಣಿ ಕಲ್ಯಾಣಿಯಲ್ಲಿ ಬೆಳೆದಿರುವ ಗಿಡಗಳನ್ನು ಕಿತ್ತು ಸ್ವಚ್ಛತೆಗೆ ಮುಂದಾಗಿದ್ದಾರೆ. ಈ ಪುಷ್ಕರಾಣಿ ಕಲ್ಯಾಣಿಗೆ ಸುಮಾರು 400 ವರ್ಷಗಳ ಇತಿಹಾಸವಿದ್ದು, ಆನೇಕಲ್ ತಾಲೂಕಿಗೆ ಪ್ರಸಿದ್ಧಿಯಾಗಿತ್ತು. ಪಾಳೇಗಾರರು ಆಳ್ವಿಕೆ ಮಾಡುವ ಕಾಲದಲ್ಲಿ ಆನೇಕಲ್ ನ ದೊಡ್ಡಕೆರೆ ಹಾಗೂ ಈ ಕಲ್ಯಾಣಿಯನ್ನು ನಿರ್ಮಿಸಿದ್ದರು. ಕಲ್ಯಾಣಿಯಲ್ಲಿ ಜನ ನೀರು ಕುಡಿಯುವುದು ಬಟ್ಟೆ ತೊಳೆಯುವುದು ಹಾಗೂ ಜನ ಈಜಲು ಬಳಸುತ್ತಿದ್ದರು.

ಕಳೆದ 20 ವರ್ಷಗಳಿಂದ ಈ ಕಲ್ಯಾಣಿಯಲ್ಲಿ ಮಣ್ಣು ತುಂಬಿಕೊಂಡು ನೀರು ಸಹ ಇಂಗಿ ಹೋಗಿದ್ದು ಆಳಿವಿನಂಚಿಗೆ ತಲುಪಿತ್ತು. ಇದನ್ನು ಕಂಡ ಆನೇಕಲ್ ನ ನ್ಯಾಯಾಧೀಶರು ತಂಡ ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ಮುಂದಾಗಿದೆ. ಇಂದು ಮಣ್ಣನ್ನು ತೆಗೆಯುತ್ತಿದ್ದು, ಇನ್ನೆರಡು ವಾರಗಳಲ್ಲಿ ಸಂಪೂರ್ಣವಾಗಿ ಸ್ವಚ್ಛಗೊಳ್ಳಲಿದೆ.

ಆನೇಕಲ್ ನ ಜೆಎಂಎಪ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಗೋಕುಲ್ ಮತ್ತು ಪ್ರಶಾಂತ್ ಆನೇಕಲ್ ನಿಂದ ಸಿಡಿಹೊಸಕೋಟೆಯ ರಸ್ತೆಯಲ್ಲಿ ವಾಯುವಿಹರಕೆಂದು ಹೋಗುವ ವೇಳೆ ಈ ಕಲ್ಯಾಣಿಯನ್ನು ಕಂಡಿದ್ದಾರೆ. ನಂತರ ಆನೇಕಲ್ ನ ವಕೀಲರ ಸಂಘ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಈ ಪುಷ್ಕರಾಣಿ ಕಲ್ಯಾಣಿಯ ಸ್ವಚ್ಛತೆಯನ್ನು ಪ್ರತಿ ಭಾನುವಾರ ಮಾಡಲು ಮುಂದಾಗಿದ್ದಾರೆ.

ಕಲ್ಯಾಣಿ ಇನ್ನೊಂದು ವಾರಗಳಲ್ಲಿ ಕೊನೆಯ ಹಂತಕ್ಕೆ ಬರಲಿದೆ. ಈ ಸ್ವಚ್ಛತೆಯ ಕೆಲಸದಲ್ಲಿ ನ್ಯಾಯಾಲಯದಲ್ಲಿನ ಎಲ್ಲ ಸಿಬ್ಬಂದಿ ವಕೀಲರು ಭಾಗವಹಿಸಿದ್ದು, ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಶಾಲಾ ಮಕ್ಕಳು ನ್ಯಾಯಾಧೀಶರೊಂದಿಗೆ ಯಾವುದೇ ಬೇಧವಿಲ್ಲದೆ ಖುಷಿಯಿಂದ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಧೀಶರು ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *