ಬೇನಾಮಿದಾರರ ಮಾಹಿತಿ ಕೊಟ್ರೆ 1 ಕೋಟಿ ರೂ. ಬಹುಮಾನ!

Public TV
1 Min Read

ನವದೆಹಲಿ: ಕೇಂದ್ರ ಸರ್ಕಾರ ಕಾಳಧನಿಕರ ವಿರುದ್ಧ ತನ್ನ ಹೋರಾಟವನ್ನು ಮುಂದುವರೆಸುವ ಸೂಚನೆಯನ್ನು ನೀಡಿದೆ. ಸರ್ಕಾರವು ಈಗಾಗಲೇ ಕಾಳಧನಿಕರ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು ಪೂರ್ಣ ಪ್ರಮಾಣದಲ್ಲಿ ಬೇನಾಮಿ ಅಸ್ತಿಯ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿಲ್ಲ. ಸರ್ಕಾರ ಹೊಸ ಹೊಸ ಮಾರ್ಗಗಳ ಮೂಲಕ ಬೇನಾಮಿ ಅಸ್ತಿಯ ಮಾಹಿತಿಯನ್ನು ಸಂಗ್ರಹಿಸುವ ಯೋಜನೆಗಳನ್ನು ಸಿದ್ಧಪಡುಸುತ್ತಿದೆ. ಅದರಂತೆ ಬೇನಾಮಿ ಅಸ್ತಿ ಕುರಿತು ಮಾಹಿತಿ ನೀಡಿದವರಿಗೆ ನಗದು ರೂಪದ ಬಹುಮಾನವನ್ನು ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಲಭಿಸಿದೆ.

ಈ ನಗದು ಬಹುಮಾನ ಯೋಜನೆಯನ್ನು ಮುಂದಿನ ತಿಂಗಳು ಜಾರಿಗೆ ತರುವ ಸಾಧ್ಯತೆಗಳಿವೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(ಸಿಬಿಡಿಟಿ)ನ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಬೇನಾಮಿ ಅಸ್ತಿ ಕುರಿತ ಮಾಹಿತಿಯನ್ನು ನೀಡಿದ ವ್ಯಕ್ತಿಗೆ ಕನಿಷ್ಟ 15 ಲಕ್ಷ ರೂ. ನಿಂದ 1 ಕೋಟಿ ರೂ. ಗಳವರೆಗೆ ಬಹುಮಾನ ಸಿಗುತ್ತದೆ. ಅಲ್ಲದೇ ಬೇನಾಮಿ ಅಸ್ತಿಯ ಕುರಿತು ಮಾಹಿತಿ ನೀಡಿದ ವ್ಯಕ್ತಿಯ ಗುರುತನ್ನು ಇಲಾಖೆಯು ಗೌಪ್ಯವಾಗಿಡುತ್ತದೆ. ಆ ವ್ಯಕ್ತಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಮಾಹಿತಿ ನೀಡಿದ ವ್ಯಕ್ತಿಯ ಗುರುತು ಹೊರಬರುವುದಿಲ್ಲ ಎಂಬ ಆಶ್ವಾಸನೆಯನ್ನು ನೀಡಿದೆ.

2016ರಲ್ಲಿ ಪರಿಚಯಿಸಲಾದ ಬೇನಾಮಿ ಅಸ್ತಿ ಕಾಯ್ದೆ ಅಡಿಯಲ್ಲಿ ಈ ಅವಕಾಶ ಇರಲಿಲ್ಲ. ಆದರೂ ಬೇನಾಮಿ ಅಸ್ತಿ ಕುರಿತು ಮಾಹಿತಿ ನೀಡಿದವರಿಗೆ ಬಹುಮಾನ ನೀಡುವ ರೂಢಿಯನ್ನು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ ಪಾಲಿಸಿಕೊಂಡು ಬಂದಿದೆ. ಆದರೂ ಇದರಿಂದ ಅಷ್ಟೇನೂ ಲಾಭವಾಗಿಲ್ಲ.

ಆದಾಯ ತೆರಿಕೆ ಇಲಾಖೆಗೆ ಬೇನಾಮಿ ಆಸ್ತಿಯನ್ನು ಹೊಂದಿರುವವರ ಮಾಹಿತಿ ಸಂಗ್ರಹಿಸುವುದೇ ಬಹುದೊಡ್ಡ ಕಷ್ಟದ ಕೆಲಸವಾಗಿದೆ. ಹೀಗಾಗಿ ಮಾಹಿತಿದಾರರ ಸಹಾಯ ಪಡೆದರೆ ಮತ್ತಷ್ಟು ವೇಗವಾಗಿ, ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಬೇನಾಮಿದಾರರನ್ನು ಪತ್ತೆ ಮಾಡಬಹುದು ಎಂದು ಸಿಬಿಡಿಟಿ ಅಧಿಕಾರಿ ಹೇಳಿದ್ದಾರೆ.

ಈ ಯೋಜನೆಗೆ ಹಣಕಾಸು ಸಚಿವಾಲಯದದಿಂದ ಅನುಮತಿ ಸಿಗಬೇಕಿದೆ. ಹಣಕಾಸು ಸಚಿವರು ಒಪ್ಪಿಗೆ ಸೂಚಿಸಿದ ಕೂಡಲೇ ಸಿಬಿಡಿಟಿ ಇದನ್ನು ಘೋಷಸಿದಲಿದೆ. ಅಕ್ಟೋಬರ್ ಕೊನೆಗೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಘೋಷಣೆ ಮಾಡುವ ನಿರೀಕ್ಷೆಯಿದೆ.

Share This Article
Leave a Comment

Leave a Reply

Your email address will not be published. Required fields are marked *