ಬೈಕ್ ಸವಾರನನ್ನು ಕೊಲೆಗೈದು 15 ಲಕ್ಷ ರೂ. ದೋಚಿದ್ದ ಆರೋಪಿಗಳು ಅಂದರ್

Public TV
1 Min Read

ಬೆಂಗಳೂರು: ಬೈಕ್ ಅಡ್ಡಗಟ್ಟಿ ಸವಾರನನ್ನು ಬರ್ಬರವಾಗಿ ಕೊಲೆ ಮಾಡಿ 15 ಲಕ್ಷ ರೂ. ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಬೊಮ್ಮನಹಳ್ಳಿಯ ಮೊಹಮ್ಮದ್ ತೌಸಿಫ್, ಕಾಡುಗೋಡಿಯ ಮೊಹಮ್ಮದ್ ಅಕ್ಯೂಬ್ ಹಾಗೂ ಅಸ್ಮತ್ ಖಾನ್ ಬಂಧಿತ ಆರೋಪಿಗಳು. ಗೋದ್ರೆಜ್ ಚಿಕನ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿದ್ದ ಬೈರೇಗೌಡ ಕೊಲೆಯಾಗಿದ್ದ ವ್ಯಕ್ತಿ. ಘಟನೆಯು ಜೂನ್ 30ರಂದು ರಾತ್ರಿ ನಡೆದಿದ್ದು, ಸದ್ಯ ಆರೋಪಿಗಳನ್ನು ನಂದಗುಡಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?
ಗೋದ್ರೆಜ್ ಚಿಕನ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿದ್ದ ಬೈರೇಗೌಡ ಜೂನ್ 29ರಂದು ರಾತ್ರಿ ಬಾವಾಪುರ ಬಳಿಯ ಕೋಳಿ ಫಾರ್ಮ್ ಗೆ ಬಂದಿದ್ದರು. ವ್ಯವಹಾರಕ್ಕಾಗಿ ತನ್ನ ಬಳಿ 15 ಲಕ್ಷ ರೂ. ನಗದು ಇಟ್ಟುಕೊಂಡಿದ್ದರು. ಜೂನ್ 30ರಂದು 8 ಗಂಟೆ ಸುಮಾರಿಗೆ ಬೈಕ್ ನಲ್ಲಿ ಹೊಸಕೋಟೆಯ ಬ್ಯಾಂಕ್‍ಗೆ ಹಣ ಜಮಾ ಮಾಡಲು ಹೊರಟಿದ್ದರು. ಈ ವೇಳೆ ಬೈರೇಗೌಡರನ್ನು ಹಿಂಬಾಲಿಸಿ ಬಂದ ಆರೋಪಿಗಳು ಶಿವನಾಪುರ ಕ್ರಾಸ್ ಬಳಿಯ ನಿರ್ಜನ ಪ್ರದೇಶದಲ್ಲಿ ಅಡ್ಡ ಹಾಕಿ, ಹಣ ನೀಡುವಂತೆ ಕೇಳಿದ್ದರು.

ಬೈರೇಗೌಡ ಹಣ ನೀಡಲು ಒಪ್ಪದಿದ್ದಾಗ ಚಾಕುವಿನಿಂದ ಇರಿದು ಹಣ ಕಸಿದುಕೊಂಡು ಪರಾರಿಯಾಗಿದ್ದರು. ಚಾಕು ಇರಿತದಿಂದ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಒದ್ದಾಡ್ತಿದ್ದ ಬೈರೇಗೌಡರನ್ನು ಕಂಡ ಸ್ಥಳೀಯರು ಆಸ್ವತ್ರೆಗೆ ಸಾಗಿಸಲು ಮುಂದಾಗಿದ್ದರು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಮಾರ್ಗ ಮಧ್ಯೆಯೇ ಬೈರೇಗೌಡ ಅಸುನೀಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *