ಸ್ಮಾರ್ಟ್ ಸಿಟಿ ಯೋಜನೆ ಟೆಂಡರ್ ಕೊಡಿಸುವುದಾಗಿ ವಂಚಿಸುತ್ತಿದ್ದ ಒಂದೇ ಕುಟುಂಬದ ಮೂವರು ಅರೆಸ್ಟ್

Public TV
1 Min Read

ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯ ಟೆಂಡರ್ ಕೊಡಿಸುವುದಾಗಿ ವಂಚಿಸುತ್ತಿದ್ದ ಒಂದೇ ಕುಟುಂಬ ಮೂವರ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ನಗರದ ಬನಶಂಕರಿ ನಿವಾಸಿಗಳಾದ ರಾಜೇಶ್(56), ಪತ್ನಿ ಸತ್ಯಭಾಮ (46) ಹಾಗೂ ಮಗ ಅನುರಾಗ್ (27) ಬಂಧಿತ ಆರೋಪಿಗಳು. ಭಾಸ್ಕರ್ ನಾಯಕ್ ಎಂಬವರಿಗೆ ಟೆಂಡರ್ ಕೊಡಿಸುವುದಾಗಿ ವಂಚಿಸಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ

ಆರೋಪಿ ರಾಜೇಶ್ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಮುಖ್ಯ ಇಂಜಿನಿಯರ್ ಎಂದು ಹೇಳಿಕೊಂಡಿದ್ದ. ಇದನ್ನು ನಂಬಿದ್ದ ಭಾಸ್ಕರ್ ನಾಯಕ್, ಸ್ಮಾರ್ಟ್ ಸಿಟಿ ಯೋಜನೆಯ ಟೆಂಡರ್ ಪಡೆಯಲು 8.12 ಲಕ್ಷ ರೂ. ನೀಡಿದ್ದರು. ಅಷ್ಟೇ ಅಲ್ಲದೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹಾಗೂ ವಿಧಾನಸೌಧದಲ್ಲಿ ಫೋಟೋ ಮತ್ತು ವೀಡಿಯೊ ತೆಗೆಯಲು ಟೆಂಡರ್ ಕೊಡಿಸುವುದಾಗಿ ಹೇಳಿ ಹಲವರಿಗೆ ವಂಚನೆ ಮಾಡಿದ್ದರು. ಆರೋಪಿ ಅನುರಾಗ್ ನಟಿಸುತ್ತಿದ್ದ 6 ದಿಕೂಟ ಸಿನಿಮಾಗೆ ಇತ್ತೀಚೆಗೆ ಮುಹೂರ್ತ ನೆರವೇರಿಸಲಾಗಿತ್ತು.

ಈ ಸಂಬಂಧ 12ಕ್ಕೂ ಹೆಚ್ಚು ಜನರು ಬನಶಂಕರಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರ ಆರೋಪಿಗಳನ್ನು ಬಂಧಿಸಿ, ವಿಚಾರಣೆ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *