– ದೊಡ್ಡವರ ಶಕ್ತಿ ಕಡಿಮೆಯಾಗಿ ಚಿಕ್ಕವರು ಮುಂದೆ ಬರುತ್ತಾರೆ
ಬಳ್ಳಾರಿ: ಕಬ್ಬಿಣದ ಸರಪಳಿ ಹರಿತಲೇ ಪರಾಕ್ ಎಂದು ಮೈಲಾರ ಕಾರಣಿಕ ನುಡಿಯಾಗಿದ್ದು, ಅದನ್ನು `ಅಧಿಕಾರ ಹೋಗುತ್ತೆ’ ಅಂತ ವಿಶ್ಲೇಷಣೆ ಮಾಡಲಾಗಿದೆ.
ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಇಂದು ಕಾರಣಿಕ ನುಡಿ ಮಹೋತ್ಸವ ನಡೆಯಿತು. ಗೋರವಯ್ಯ ರಾಮಣ್ಣ ಅವರು ಕಾರಣಿಕ ನುಡಿದರು. ಕಾರಣಿಕ ಕೇಳಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಸೇರಿದ್ದರು.
ಕಾರಣಿಕಕ್ಕೂ ಮೊದಲೇ 10 ದಿನಗಳ ಕಾಲ ಗೊರವಯ್ಯ ಅವರು ಉಪವಾಸ ಇರುತ್ತಾರೆ. ಕಾರಣಿಕದ ನುಡಿ ಸತ್ಯವಾಗುತ್ತಾ ಬಂದಿದೆ. ಇದು ರಾಜ್ಯ ರಾಜಕಾರಣ, ಮಳೆ, ಬೆಳೆಯ ದಿಕ್ಸೂಚಿ ಎಂದೇ ಭಕ್ತರು ವಿಶ್ಲೇಷಿಸುತ್ತಾರೆ.
ಕಾರಣಿಕ ವ್ಯಾಖ್ಯಾನ:
ಕಬ್ಬಿಣ ಅಂದರೆ ಗಟ್ಟಿ. ಅದರ ಅರ್ಥ ದೊಡ್ಡವರು, ಬಲವಾಗಿರುವ. ದೊಡ್ಡವಲ್ಲಿರುವ ಶಕ್ತಿ ಕಡಿಮೆಯಾಗಿ ಚಿಕ್ಕವರು ಮುಂದೆ ಬರುತ್ತಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಸಮಸ್ಯೆ ಇತ್ಯರ್ಥವಾಗಬಹುದು, ರಾಜ್ಯವು ಬರದ ಸಂಕಷ್ಟದಿಂದ ಹೊರಬಹುದು. ಒಟ್ಟಾರೆ ಇಲ್ಲಿಯವರೆಗೆ ಗಟ್ಟಿಯಾಗಿ ಉಳಿದಿದ್ದು, ಟೊಳ್ಳು ಆಗುತ್ತಾರೆ ಎಂದು ವ್ಯಾಖ್ಯಾನ ಮಾಡಲಾಗಿದೆ.
ರಾಜಕೀಯ ವಿಶ್ಲೇಷಣೆ ಏನು?
ಈ ಬಾರಿ ಲೋಕಸಭಾ ಚುನಾವಣೆ ನಡೆಯಲಿದೆ. ಇದರ ಜೊತೆಯಲ್ಲಿ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಹೀಗಾಗಿ ಮೈಲಾರ ಕಾರಣಿಕ ನುಡಿಯನ್ನು ರಾಜಕೀಯ ದೃಷ್ಟಿಯಿಂದ ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿಯವರು ಎಷ್ಟೇ ಪ್ರಯತ್ನಿಸಿದರೂ ಮೈತ್ರಿ ಸರ್ಕಾರವನ್ನು ಉರುಳಿಸಲು ಸಾಧ್ಯವಾಗುತ್ತಿಲ್ಲ. ಅದು ಗಟ್ಟಿ ಕಬ್ಬಿನದಂತಿದೆ. ಹೀಗಾಗಿ ಈ ಬಾರಿಯ ಕಾರಣಿಕದ ನುಡಿಯಂತೆ ಗಟ್ಟಿಯಾಗಿರುವ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಮೈಲಾರ ಕಾರಣಿಕದ ಧರ್ಮದರ್ಶಿ ವೆಂಕಪ್ಪ ಒಡೆಯರ್ ಹೇಳಿದ್ದಾರೆ.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 5 ವರ್ಷಗಳಿಂದ ಸುಭದ್ರವಾಗಿ ಅಧಿಕಾರ ನಡೆಸಿಕೊಂಡು ಬಂದಿದ್ದಾರೆ. ಹೀಗಾಗಿ ಅವರಿಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಗದೇ ಇರಬಹುದು ಎಂದು ವೆಂಕಪ್ಪ ಒಡೆಯರ್ ಕಾರಣಿಕವನ್ನು ವಿವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv