ತೀವ್ರ ಕುತೂಹಲ ಹುಟ್ಟಿಸಿದೆ ಆನಂದ್ ಸಿಂಗ್ ನಡೆ

Public TV
2 Min Read

ಬಳ್ಳಾರಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳದೇ ಇರುವ ಆನಂದ್ ಸಿಂಗ್ ಅವರು ಹೊಸಪೇಟೆಯಲ್ಲೇ ಉಳಿದುಕೊಂಡಿದ್ದು, ಅವರ ಈ ನಡೆ ಭಾರೀ ಕುತೂಹಲ ಹುಟ್ಟಿಸಿದೆ.

ಆನಂದ್ ಸಿಂಗ್ ಅವರು ಮಂಗಳವಾರ ನೇರವಾಗಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಬಗ್ಗೆ ವಿವರಣೆ ನೀಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟೀಂ, ಆನಂದ್ ಸಿಂಗ್ ಅವರನ್ನು ಸಮಾಧಾನ ಪಡಿಸಲು ಮುಂದಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಆದರೆ ಮುಖ್ಯಮಂತ್ರಿ ಹಾಗೂ ಸಿದ್ದರಾಮಯ್ಯ ಅವರ ಸಂಪರ್ಕಕ್ಕೆ ಸಿಗದೆ ಆನಂದ್ ಸಿಂಗ್ ಆಟವಾಡಿಸುತ್ತಿದ್ದು, ಇಂದು ಅತೃಪ್ತ ಶಾಸಕರ ಟೀಂ ಸೇರುವ ಸೇರೋ ಸಾಧ್ಯತೆ ಇದೆ.

ಇತ್ತ ಇಂದು ಬೆಳ್ಳಂಬೆಳಗ್ಗೆ ರಾಮಲಿಂಗಾರೆಡ್ಡಿ ಮನೆಬಿಟ್ಟಿದ್ದು, ತಮ್ಮ ಲಕ್ಕಸಂಧ್ರದ ನಿವಾಸದಲ್ಲಿ ಇಲ್ಲ. ಕಳೆದ ರಾತ್ರಿ ಕೈ ನಾಯಕ ಸಭೆಯಲ್ಲಿ ರಾಮಲಿಂಗಾ ರೆಡ್ಡಿ ಭಾಗಿಯಾಗಿದ್ದರು. ಈ ವೇಳೆ ಕಾಂಗ್ರೆಸ್ ನಾಯಕರ ಸಂಧಾನಕ್ಕೆ ರಾಮಲಿಂಗಾ ರೆಡ್ಡಿ ಒಪ್ಪಲಿಲ್ಲ. ಇಂದು ಮುಂಬೈನಲ್ಲಿರುವ ಅತೃಪ್ತರನ್ನ ಸೇರುತ್ತಾರೆ ಎನ್ನಲಾಗುತ್ತಿದೆ. ಹೀಗಾಗಿ ಮುಂಬೈಗೆ ಹೋಗದಂತೆ ರಾಮಲಿಂಗಾ ರೆಡ್ಡಿಯನ್ನ ದೋಸ್ತಿ ಸರ್ಕಾರದ ನಾಯಕರು ತಡೆಯುವ ಸಾಧ್ಯತೆ ಇದೆ.

ದೋಸ್ತಿಗಳು ಸರ್ಕಾರ ಉಳಿಸಿಕೊಳ್ಳುವತ್ತ ಪ್ರಯತ್ನ ಮಾಡುತ್ತಿದ್ದರೆ, ಇತ್ತ ಬಿಜೆಪಿ ಕೈಗೆ ಬಂದ ತುತ್ತು ಕೈಜಾರಿಕೊಳ್ಳದಂತೆ ನೋಡಿಕೊಳ್ಳಲು ಯತ್ನಿಸುತ್ತಿದೆ. ಈಗಾಗಲೇ 13 ಶಾಸಕರ ರಾಜೀನಾಮೆ ಕೊಡಿಸಿರುವ ಬಿಜೆಪಿ ನಾಯಕರು, ಮತ್ತಷ್ಟು ಶಾಸಕರ ರಾಜೀನಾಮೆ ಕೊಡಿಸುವ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಇಂದು ಅಥವಾ ನಾಳೆಯೊಳಗೆ ಕನಿಷ್ಠ 7ರಿಂದ 8 ಶಾಸಕರ ರಾಜೀನಾಮೆ ಕೊಡಿಸುವ ಗುರಿಯನ್ನು ಬಿಜೆಪಿ ಹೊಂದಿದೆ. ಜುಲೈ 12ರಿಂದ ವಿಧಾನಮಂಡಲ ಅಧಿವೇಶನ ಶುರುವಾಗಲಿದ್ದು, ಅಷ್ಟರೊಳಗೆ ಸಿಎಂ ರಾಜೀನಾಮೆ ನೀಡುವ ಸನ್ನಿವೇಶ ಸೃಷ್ಟಿಸಬೇಕು ಎಂಬ ಇರಾದೆ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಮತ್ತೆ ಯಾರೆಲ್ಲ ರಾಜೀನಾಮೆ ಕೊಡಬಹುದು?
* ಎಂಟಿಬಿ ನಾಗರಾಜ್, ಹೊಸಕೋಟೆ
* ರಹೀಂಖಾನ್, ಬೀದರ್
* ಅನಿಲ್ ಚಿಕ್ಕಮಾದು, ಎಚ್‍ಡಿ ಕೋಟೆ
* ಗಣೇಶ್ ಹುಕ್ಕೇರಿ, ಚಿಕ್ಕೋಡಿ
* ಅಂಜಲಿ ನಿಂಬಾಳ್ಕರ್, ಖಾನಾಪುರ
* ಶ್ರೀಮಂತ ಪಾಟೀಲ್, ಕಾಗವಾಡ
* ಸೌಮ್ಯ ರೆಡ್ಡಿ, ಜಯನಗರ
* ವಿ. ಮುನಿಯಪ್ಪ, ಶಿಡ್ಲಘಟ್ಟ

Share This Article
Leave a Comment

Leave a Reply

Your email address will not be published. Required fields are marked *