ಹಾಲು ಒಕ್ಕೂಟದ ಪಟ್ಟಕ್ಕೆ ಶಾಸಕರು-ಸಚಿವರ ಫೈಟ್!

Public TV
1 Min Read

-ಮಗನನ್ನು ಕಣಕ್ಕಿಳಿಸಲು ಎಲೆಕ್ಷನ್ ಪೋಸ್ಟ್ ಪೋನ್!

ಬಳ್ಳಾರಿ: ದೇಶದಲ್ಲೀಗ ಲೋಕಸಭೆ ಚುನಾವಣೆಯದ್ದೇ ಮಾತು. ಆದ್ರೆ ಗಣಿನಾಡು ಬಳ್ಳಾರಿಯಲ್ಲಿ ಮಾತ್ರ ರಾಜಕಾರಣಿಗಳು ಬೇರೆಯದ್ದೇ ಚುನಾವಣೆ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ವಿಚಿತ್ರ ಅಂದ್ರೆ ಸಚಿವರೊಬ್ಬರು ತಮ್ಮ ಪ್ರಭಾವ ಬಳಸಿ ತಮ್ಮ ಮಗನಿಗಾಗಿ ಚುನಾವಣೆಯನ್ನೇ ಮುಂದೂಡುವಂತೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಮುಜುರಾಯಿ ಇಲಾಖೆ ಸಚಿವ ಪರಮೇಶ್ವರ್ ನಾಯ್ಕ್ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಗೆ ಸಖತ್ ತಲೆಕೆಡಿಸಿಕೊಂಡಿದ್ದಾರೆ. ಬಳ್ಳಾರಿ, ರಾಯಚೂರು, ಕೊಪ್ಪಳ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಗೆ ತಮ್ಮ ಮಗನನ್ನು ಕಣಕ್ಕಿಳಿಸಬೇಕು ಅನ್ನೋದು ಸಚಿವ ಪರಮೇಶ್ವರ್ ನಾಯ್ಕ್ ಆಸೆ. ಈ ಸ್ಥಾನಕ್ಕೆ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ, ಶಾಸಕ ಭೀಮಾನಾಯ್ಕ್ ಕೂಡಾ ತಮ್ಮವರನ್ನೇ ಆಯ್ಕೆ ಮಾಡಲು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸಚಿವ ಪರಮೇಶ್ವರ್ ನಾಯ್ಕ್ ತಮ್ಮ ಪ್ರಭಾವ ಬಳಸಿ, ಡಿಸಿ ಮೇಲೆ ಒತ್ತಡ ಹೇರಿ ಏಪ್ರಿಲ್ 3ರ ಬದಲು ಮೇ 5ಕ್ಕೆ ಚುನಾವಣೆ ಮುಂದೂಡಿದ್ದಾರೆ.

ಹರಪನಹಳ್ಳಿ ತಾಲೂಕು ಇತ್ತೀಚಿಗೆ ಬಳ್ಳಾರಿಗೆ ಸೇರ್ಪಡೆಯಾಗಿದೆ. ಹೀಗಾಗಿ ಶಿವಮೊಗ್ಗ ಒಕ್ಕೂಟದಲ್ಲಿರೋ ತಮ್ಮ ಪುತ್ರ ಭರತ್ ಸದಸ್ಯತ್ವವನ್ನು ಬಳ್ಳಾರಿ ಒಕ್ಕೂಟಕ್ಕೆ ವರ್ಗಾವಣೆ ಮಾಡಿಸಿ ಕಣಕ್ಕಿಳಿಸಲು ಪರಮೇಶ್ವರ್ ತಂತ್ರ ಹೂಡಿದ್ದಾರೆ. ಜೊತೆಗೆ ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಸಹ ರಾಯಚೂರಿನ ಸಿಂಧನೂರಲ್ಲಿ ತಮ್ಮವರನ್ನೇ ನಿರ್ದೇಶಕರನ್ನಾಗಿ ಮಾಡಲು ಪ್ಲಾನ್ ಮಾಡಿದ್ದಾರೆ. ಹೀಗಾಗಿ ಇಬ್ಬರೂ ಸೇರಿ ಚುನಾವಣೆ ಮುಂದೂಡಿದ್ದಾರೆ ಎಂದು ಹಾಲು ಉತ್ಪಾದಕರು ಆರೋಪಿಸುತ್ತಿದ್ದಾರೆ.

ಹಾಸನ, ವಿಜಯಪುರ, ಶಿವಮೊಗ್ಗ, ಧಾರವಾಡ, ಮಂಗಳೂರು ಸೇರಿದಂತೆ ವಿವಿಧ ಹಾಲು ಒಕ್ಕೂಟಗಳ ಚುನಾವಣೆಗಳು ನಿಗದಿತ ದಿನಾಂಕಕ್ಕೆ ನಡೆಯುತ್ತಿವೆ. ಲೋಕಸಭೆ ಚುನಾವಣೆ ನೆಪವೊಡ್ಡಿ ತಮ್ಮವರನ್ನು ಗೆಲ್ಲಿಸಲು ಸಚಿವರು ಹೀಗೆ ಲಾಬಿ ನಡೆಸಿರೋದು ಕೆಎಂಎಫ್ ವಲಯದಲ್ಲಿ ಭಾರಿ ವಿರೋಧಕ್ಕೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *