ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ- ಬಳ್ಳಾರಿ ಐಜಿಯಿಂದ ಭಾವನಾತ್ಮಕ ಪತ್ರ

Public TV
3 Min Read

ಬಳ್ಳಾರಿ: ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ್ ಎಂದು ಬಳ್ಳಾರಿ ವಲಯದ ಐಜಿ ನಂಜುಂಡಸ್ವಾಮಿ ಅಗಲಿದ ಗೆಳೆಯನಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದು ಸಂತಾಪ ಸೂಚಿಸಿದ್ದಾರೆ.

ಈ ಪತ್ರದಲ್ಲಿ ಸಿದ್ಧಾರ್ಥ್ ಅವರನ್ನು ಭೇಟಿಯಾದ ದಿನಗಳು ಮತ್ತು ಅವರ ವ್ಯಕ್ತಿತ್ವದ ಬಗ್ಗೆ ಅಪಾರವಾಗಿ ಹೇಳಿಕೊಂಡಿರುವ ನಂಜುಂಡಸ್ವಾಮಿ ತನ್ನ ಗೆಳೆಯ ಆತ್ಮಹತ್ಯೆ ಮಾಡಿಕೊಳ್ಳವಂತಹ ವ್ಯಕ್ತಿಯಲ್ಲ ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಪತ್ರದಲ್ಲೇನಿದೆ?
ಸಿದ್ಧಾರ್ಥ ಅವರನ್ನು ನಾನು ಮೊದಲು ನೋಡಿದ್ದು ಅವರ ಮೊದಲ ಕಾಫಿ ಡೇ ಅಂಗಡಿಯಲ್ಲಿ. ನನ್ನ ಗೆಳೆಯ ಶಶಿಕುಮಾರ್ ಮತ್ತು ನಾನು ಒಂದು ರಾತ್ರಿ ಊಟ ಮಾಡಿದ ನಂತರ ಕಾಫಿ ಡೇಗೆ ಹೋದಾಗ, ಆಗ ಅದೊಂದೆ ಕಾಫಿ ಡೇ ಆಗಿತ್ತು. ಶಶಿ ಮೋಹನ್ ನನಗೆ ಸಿದ್ಧಾರ್ಥ ಅವರನ್ನು ಪರಿಚಯ ಮಾಡಿಸಿದ.

ನಾನು ಆಗ ತಾನೇ ಪೊಲೀಸ್ ಅಕಾಡೆಮಿಯಿಂದ ತರಬೇತಿ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದೆ. ಆಗ ನನಗೆ ಬೆಂಗಳೂರು ಜೀವನ ಹೊಸದಾಗಿತ್ತು. ಸಿದ್ಧಾರ್ಥ್ ಅಂದು ಕೆಫೆ ಡೇಯಲ್ಲಿ ಕೆಲಸ ಮಾಡುವ ಹುಡುಗರಂತೆ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಟೀ-ಶರ್ಟ್ ಧರಿಸಿದ್ದ. ಮೊದಲನೇ ಭೇಟಿಯಲ್ಲೇ ನಾವಿಬ್ಬರು ಬಹಳ ಮಾತನಾಡಿದ್ದೇವು. ಆಗ ಅವರ ಮಾವ ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿರಲಿಲ್ಲ. ಸಿದ್ಧಾರ್ಥ್ ಹಳೆಯ ಗೆಳೆಯನಂತೆ ನನ್ನ ಜೊತೆ ತುಂಬಾ ಹೊತ್ತು ಖುಷಿಯಾಗಿ ಮಾತನಾಡುತ್ತಿದ್ದರು. ಅವರು ತಮ್ಮ ಕಾಫಿ ಡೇಯನ್ನು ಪ್ರಪಂಚದ ಶ್ರೇಷ್ಠ ಕಾಫಿ ಅಂಗಡಿಯ ಸರಪಣಿ (chain of restaurant) ಮಾಡುವುದಾಗಿ ಹೇಳುತ್ತಿದ್ದರು. ಸಿದ್ಧಾರ್ಥ್ ಅಂದು ಕಂಡಿದ್ದ ಕನಸುಗಳ ನನಸು ಮಾಡುತ್ತಲೇ ಸಾಗಿದವರು. ಅವರು ಪರಿಚಯವಾದ ಮೇಲೆ ನಾವು ತುಂಬಾ ಸಲ ಬೇರೆ-ಬೇರೆ ಕಡೆ ಭೇಟಿ ಆಗಿದ್ದೇನೆ.

ಸಿದ್ಧಾರ್ಥ್ ಒಂದು ಬಾರಿ ಅವರ ಸ್ವಂತ ಊರಾದ ಚೇತನಹಳ್ಳಿಯಲ್ಲಿ ಒಂದು ಭವ್ಯವಾದ ಡಿನ್ನರ್ ವ್ಯವಸ್ಥೆ ಮಾಡಿದ್ದರು. ಆಗ ನಾನು ಹಾಸನದಲ್ಲಿ ಎಸ್‍ಪಿ ಆಗಿದ್ದೆ. ಆಗ ಸನ್ಮಾನ್ಯ ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಸಿದ್ಧಾರ್ಥ ಅವರು ಉತ್ತಮ ರೀತಿಯಲ್ಲಿ ತಮ್ಮ ಎಲ್ಲಾ ಅತಿಥಿಗಳನ್ನು ಸತ್ಕರಿಸುತ್ತಿದ್ದರು. ನನಗೆ ತಮ್ಮ ಹಳೆಯ ಭವ್ಯವಾದ ಬ್ರಿಟಿಷ್ ಕಾಲದ ಮನೆಯನ್ನು ಸುತ್ತಾಡಿಸಿ ತೋರಿಸಿದರು. ಬ್ರಿಟಿಷ್ ಕಾಫಿ ತೋಟ ಸ್ವಾತಂತ್ರ್ಯ ನಂತರ ತಮ್ಮ ಮನೆತನದ ಒಡೆತನಕ್ಕೆ ಹೇಗೆ ಬಂತು ಎಂದು ತಿಳಿಸಿದರು.

ಸಿದ್ಧಾರ್ಥ್ ಅವರಲ್ಲಿ ಅದಮ್ಯ ಸಾಹಸದ ಮನೋಭಾವನೆ ಇತ್ತು. ಅವರ ಕಂಡಾಗಲೆಲ್ಲ ನಾನು ಇವರರಂತೆ ಆಗಬೇಕು ನಾನು ತುಂಬಾ ಆಕ್ಟೀವ್ ಆಗಿ ಚೇತನ ಶೀಲನಾಗಿರಬೇಕು ಎಂದುಕೊಳ್ಳುತ್ತಿದ್ದೆ. ಅಂತಹ ವ್ಯಕ್ತಿ ನನ್ನ ಭಾಷಣ-ಬರಹಗಳ ಅಭಿಮಾನಿಯಾಗಿದ್ದರು. ಅವರ ತಂದೆ ಮತ್ತು ನಾನು ಒಂದು ಬಾರಿ ಪೂರ್ಣ ಪ್ರಜ್ಞಾ ಶಾಲೆಯ ಸಮಾರಂಭದಲ್ಲಿ ಭಾಗವಹಿಸಿದ್ದೇವು. ನನ್ನ ಭಾಷಣ ಮುಗಿದ ಮೇಲೆ ಅವರ ತಂದೆ ನಿಮ್ಮ ಮಾತು ಕೇಳಿದರೆ ನಾನು ಒಮ್ಮೆ ದ.ರಾ ಬೇಂದ್ರೆ ಅವರ ಭಾಷಣ ಕೇಳಿದ್ದೆ ಅವರಂತೆ ನೀವು ಮಾತನಾಡುತ್ತೀರಿ. ನಮ್ಮ ಸಿದ್ಧಾರ್ಥ ನಿಮ್ಮ ಭಾಷಣಗಳ ಅಭಿಮಾನಿ ಎಂದಿದ್ದರು. ಆಗ ನಾನು ನಿಮ್ಮೊಡನೆ ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಅದ್ದರಿಂದ ನನಗೆ ಒಳ್ಳೆಯ ಭಾಷಣ ಒಳ್ಳೆಯ ಮಾತುಗಾರರ ಕೇಳುವ ಭಾಗ್ಯ ಇವತ್ತು ನನಗಿದೆ ಎಂದಿದ್ದರು.

ಸಿದ್ಧಾರ್ಥ್ ನಿಜವಾಗಿಯೂ ಬುದ್ಧನಾಗುವ ಮೊದಲು ಆ ಸಿದ್ಧಾರ್ಥನಂತೆ ಮಾನವೀಯತೆ ರಾಜಕಳೆಯಿಂದ ಬದುಕಿದ. ಆದರೆ ಇಂದು ಕಳೆಬರವಾಗಿದ್ದಾನೆ. ಈ ಸಿದ್ಧಾರ್ಥ ಬುದ್ಧನಾಗಲು ಹೊರಟ್ಟಿದ್ದ ಆತನಲ್ಲಿ ಈ ಪ್ರಪಂಚದ ಸಾವಿರಾರು ಸತ್ಯಗಳು ಉಳಿದು ಬಿಟ್ಟಿದ್ದವು. ಆತನು ಸಹ ಆ ಸತ್ಯಗಳನ್ನು ಈ ಪ್ರಪಂಚಕ್ಕೆ ತಿಳಿಸಲು ಹಪಹಪಿಸುತ್ತಿದ್ದ. ತನ್ನ ಅರಿವಿಗೆ ಬಂದ ಸತ್ಯಗಳ ತಿಳಿಸುವ ಮೊದಲೇ ಬುದ್ಧನಾಗುವ ದಾರಿಯಲ್ಲಿ ನಡೆದು ಬಿಟ್ಟ.

ಆತನ ಮನದೊಳಗಿದ್ದ ಆ ಸತ್ಯಗಳೆಲ್ಲ ಹೊರಕ್ಕೆ ಬರಬೇಕು ಆತನ ಈ ಅಕಾಲಿಕ ಸಾವಿಗೆ ಕಾರಣಗಳ ಕಂಡುಹಿಡಿಯಲೇ ಬೇಕು ಯಾವ ವ್ಯಕ್ತಿ, ಸಂಘ, ಸಂಸ್ಥೆ, ಇಲಾಖೆಗಳಿಂದ ನೊಂದಿದ್ದ. ಆತ ಈ ನಿರ್ಧಾರ ತೆಗೆದುಕೊಳ್ಳಲು ಇದ್ದ ಕಾರಣ ಹೊರಬರಬೇಕಾಗಿದೆ. ನಮ್ಮ ಕಾಫಿ ಡೇ ಸಿದ್ಧಾರ್ಥ ಬುದ್ಧನಾಗಲೇ ಹೊರಟವನು. ತನ್ನ ತತ್ವ ಸಿದ್ಧಾಂತಗಳಿಗೆ ಅಂಟಿಕೊಂಡವನು. ಆತನೇ ಹೀಗಾದ ಎಂದರೆ ಆತನನ್ನು ನಂಬಿದ್ದವರಿಗೆ, ಆತನನ್ನು ಆದರ್ಶವಾಗಿ ಕಂಡವರಿಗೆ ನೋವಾಗಿದೆ. ಇದರ ಸಂಪೂರ್ಣ ತನಿಖೆ ಆಗಲಿ ಸತ್ಯ ಹೊರ ಬರಲಿ ಸಿದ್ಧಾರ್ಥ ಬುದ್ಧನಾಗಲು ಹೋದ ಆತ ನನಗೆ ಎಂದಿಗೂ ಬುದ್ಧನೇ.

Share This Article
Leave a Comment

Leave a Reply

Your email address will not be published. Required fields are marked *