ಮೋದಿ, ಶಾ ಕಾರ್ಯವೈಖರಿ ಮೆಚ್ಚಿ ಬಿಜೆಪಿಗೆ ಕೈ ನಾಯಕರಾದ ಗವಿಯಪ್ಪ, ಕಾರ್ತಿಕೇಯ ಸೇರ್ಪಡೆ

Public TV
2 Min Read

ನವದೆಹಲಿ/ಬಳ್ಳಾರಿ: ವಿಧಾನಸಭಾ ಚುನಾವಣೆ ಸಮಯ ಸಮೀಸುತ್ತಿದಂತೆ ಪಕ್ಷಾಂತರ ಪರ್ವ ಆರಂಭವಾಗಿದ್ದು, ಬಳ್ಳಾರಿ ಜಿಲ್ಲೆಯ ಗಣಿ ಉದ್ಯಮಿ, ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಗವಿಯಪ್ಪ, ಕಾರ್ತಿಕೇಯ ಘೋರ್ಪಡೆ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇಂದು ದೆಹಲಿಯಲ್ಲಿ ಸಂಸದ ಶ್ರೀರಾಮುಲು ಅವರ ಜೊತೆ ಪಕ್ಷದ ಕಚೇರಿಗೆ ಆಗಮಿಸಿದ ಗವಿಯಪ್ಪ ಹಾಗೂ ಮಾಜಿ ಸಚಿವ ಎಂ.ವೈ. ಘೋರ್ಪಡೆ ಪುತ್ರರಾಗಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಾರ್ತಿಕೇಯ ಅವರು ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್, ಕೇಂದ್ರ ಸಚಿವ ಅನಂತ್ ಕುಮಾರ್, ಸಚಿವ ಸದಾನಂದ ಗೌಡರ ಸಮಕ್ಷಮದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಪ್ರಕಾಶ ಜಾವೇಡ್ಕರ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು.

ಈ ವೇಳೆ ಮಾತನಾಡಿದ ಕಾರ್ತಿಕೇಯ ಘೋರ್ಪಡೆ, ಇತ್ತೀಚೆಗೆ ಕಾಂಗ್ರೆಸ್ ನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಬಳ್ಳಾರಿಯಲ್ಲಿ ಹಣದ ಬಲ ನಡೆಯುತ್ತಿದೆ. ಇದನ್ನು ಬದಲಾಯಿಸಲು ಬಿಜೆಪಿ ಸೇರಿದ್ದೇವೆ. ಮೋದಿ ಶಾ ಕಾರ್ಯವೈಖರಿಯನ್ನು ಮೆಚ್ಚಿ ಬಿಜೆಪಿಗೆ ಬಂದಿದ್ದೇವೆ. ಈ ಹಿಂದೆ ಬಳ್ಳಾರಿಯಲ್ಲಿ ಕಾಂಗ್ರೆಸಿಗೆ ಭದ್ರ ಬುನಾದಿ ನಿರ್ಮಿಸಿದ್ದೆವು. ಈ ಬಾರಿ ನಮ್ಮ ಬಲವನ್ನು ಫಲಿತಾಂಶದಲ್ಲಿ ಪ್ರದರ್ಶಿಸುತ್ತೇವೆ. ಬಳ್ಳಾರಿಯ 9 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದರು.

ಕಳೆದ ಕೆಲ ದಿನಗಳ ಹಿಂದೆ ಶಾಸಕ ಆನಂದ್ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಇದರಿಂದ ಬಳ್ಳಾರಿ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ಹೊಗೆ ಕಾಣಿಸಿಕೊಂಡಿತ್ತು. ಇದರ ಬೆಳವಣಿಗೆ ಎಂಬಂತೆ ಕಾಂಗ್ರೆಸ್ ನಾಯಕರಾದ ಗವಿಯಪ್ಪ ಮತ್ತು ಕಾರ್ತಿಕೇಯ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಶಾಸಕ ಆನಂದ್ ಸಿಂಗ್ ಅವರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವಿಚಾರದಲ್ಲಿ ಪಕ್ಷ ಹೈಕಮಾಂಡ್ ಸಂಪೂರ್ಣವಾಗಿ ಗವಿಯಪ್ಪ ಅವರ ಅಭಿಪ್ರಾಯವನ್ನು ಕಡೆಗಣಿಸಿದ ಕಾರಣ ಪಕ್ಷ ನಾಯಕರ ಕುರಿತು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳೆರಡು ಗವಿಯಪ್ಪ ಅವರಿಗೆ ಪಕ್ಷಕ್ಕೆ ಆಹ್ವಾನ ನೀಡಿತ್ತು.

ಮೊದಲ ಬಾರಿಗೆ ಎಸ್ ಎಂ ಕೃಷ್ಣ ಸಿಎಂ ಆಗಿದ್ದ ವೇಳೆ ಹೊಸಪೇಟೆ ಬಳ್ಳಾರಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಪಡೆದಿದ್ದ ಗವಿಯಪ್ಪ ಅವರು ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಬಳ್ಳಾರಿಯಲ್ಲಿ ಇವರ ಕುಟುಂಬ ಎಚ್‍ಆರ್ ಜಿ ಕುಟುಂಬ ಎಂದೇ ಹೆಸರು ಪಡೆದಿದ್ದು, ಗಣಿ ಉದ್ಯಮಿಗಳಾಗಿದ್ದಾರೆ. ಇವರ ಕುಟುಂಬದಿಂದ ಎಸ್‍ಜಿ ರಾಮುಲು ಅವರು ಐದು ಬಾರಿ ಕೊಪ್ಪಳ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಗವಿಯಪ್ಪ ಅವರ ತಾತ ಬಸವರಾಜು ಅವರು ರಾಜ್ಯಸಭಾ ಸದಸ್ಯರು, ಎಚ್ ಜಿ ಶ್ರೀನಾಥ್ ಎಂಎಲ್‍ಸಿ ಯಾಗಿದ್ದರು. ಗಂಗಾವತಿಯಲ್ಲಿ ನಾರಾಯಣಸ್ವಾಮಿ ಎಂಎಲ್‍ಎ ಆಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ ಕುಟುಂಬಕ್ಕೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಭದ್ರಬುನಾದಿ ನಿರ್ಮಿಸಿತ್ತು. ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರಿಗೆ ಸಿದ್ದರಾಮಯ್ಯ ಅವರನ್ನು ಗವಿಯಪ್ಪ ಪರಿಚಯಿಸಿದ್ದರು.

ಬಳ್ಳಾರಿ ಹೊಸಪೇಟೆ ಭಾಗದಲ್ಲಿ ಪ್ರಮುಖ ನಾಯಕರಾಗಿದ್ದ ಮಾಜಿ ಸಚಿವ ದಿವಂಗತ ಎಂ.ವೈ. ಘೋರ್ಪಡೆ ಪುತ್ರ, ಕಾರ್ತಿಕೇಯ ಅವರು ಸಂಡೂರು ಘೋರ್ಪಡೆ ರಾಜನಮನೆತನದವರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *