ತಾಯಿ, ತಂಗಿಯ ಜವಾಬ್ದಾರಿ ಹೊತ್ತ ಕೊಪ್ಪಳದ ಅಂಗವಿಕಲ ಯುವಕನಿಗೆ ಬೇಕಿದೆ ಬೆಳಕು

Public TV
2 Min Read

ಕೊಪ್ಪಳ: ಅದು ಅತ್ಯಂತ ಕಡು ಬಡತನದ ಕುಟುಂಬ. ಆ ಕುಟುಂಬದ ಯಜಮಾನ ಮಗ ಅಂಗವಿಕಲ ಹುಟ್ಟಿದ್ದಾನೆಂಬ ಕಾರಣಕ್ಕೆ 17 ವರ್ಷಗಳ ಹಿಂದೆಯೇ ಮನೆ ಬಿಟ್ಟು ಪತ್ನಿ ಹಾಗೂ ಮಗನನ್ನು ಹೊರ ಹಾಕಿ ಬೇರೊಂದು ಮದುವೆಯಾಗಿದ್ದಾನೆ. ಅಂಗವಿಕಲ ಮಗನನ್ನೆ ತಂದು ಸಾಕಿದ ತಾಯಿ ಈಗ ವಯೋವೃದ್ಧೆಯಾಗಿದ್ದಾರೆ. ಇನ್ನು ಈಗ ಆ ಅಂಗವಿಕಲನೇ ತಾಯಿ ಹಾಗೂ ತನ್ನ ತಂಗಿಯನ್ನು ಚಿಕ್ಕ ಪಾನ್ ಶಾಪ್ ಒಂದನ್ನು ಇಟ್ಟುಕೊಂಡು ಸಂಸಾರದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆದ್ರೆ ತಾಯಿ ಹಾಗೂ ತಂಗಿಯನ್ನು ಸಾಕ್ತಿರೋ ಇವರಿಗೆ ಅಂಗಡಿ ಬಾಡಿಗೆ ಹಾಗೂ ಮನೆ ಬಾಡಿಗೆ ಕಟ್ಟಲಾಗುತ್ತಿಲ್ಲ.

ಹೌದು. ಇದು ಕೊಪ್ಪಳ ತಾಲೂಕಿನ ಹುಲಗಿಯಲ್ಲಿ ಕಳೆದ 25 ವರ್ಷಗಳ ಹಿಂದೆ ಗಂಗಾವತಿ ಮೂಲದ ಕೃಷ್ಣಾಚಾರಿ ಎಂಬಾತನೊಂದಿಗೆ ಹೊಸಪೇಟೆ ಮೂಲದ ರುಕ್ಮಿಣಿಗೆ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದೆ. ಆರಂಭಿಕ ಹಂತದಲ್ಲಿ ಇವರ ಸಂಸಾರ ಕೂಡಾ ಚೆನ್ನಾಗಿಯೇ ನಡೆಯುತ್ತಿತ್ತು. ಇವರ ಸಂಸಾರಕ್ಕೆ ಸಾಕ್ಷಿ ಎಂಬಂತೆ 3 ಮಕ್ಕಳು ಕೂಡಾ ಜನಿಸಿದರು. ಆದರೆ ಮೊದಲ ಮಗ ಉಮೇಶ್ ಅಂಗವಿಕಲನಾದ ಕಾರಣ ಮನೆಯಲ್ಲಿ ಪ್ರತಿ ದಿನ ಕಿರುಕುಳ ನೀಡಿ ರುಕ್ಮಿಣಿಯನ್ನು ಅಂಗವಿಕಲ ಮಗನ ಸಮೇತ ಕಳೆದ 17 ವಷಗಳ ಹಿಂದೆಯೇ ಕೃಷ್ಣಾಚಾರಿ ಹೊರ ಹಾಕಿದ್ದಾನೆ. ಇನ್ನಿಬ್ಬರು ಮಕ್ಕಳಾದ ರಾಜೇಶ್ ಹಾಗೂ ಗಾಯತ್ರಿಯನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ.

ಹೋಟೆಲ್‍ಗಳಲ್ಲಿ ಕೆಲಸ ಮಾಡುತ್ತಾ ಅಂಗವಿಕಲ ಮಗನನ್ನೆ ಸಾಕಿದಳು ಈ ಮಹಾತಾಯಿ. ಕಳೆದ ನಾಲ್ಕು ವರ್ಷಗಳ ಹಿಂದೆ ಇನ್ನೊಂದು ಮದೆವೆಯಾದ ಕೃಷ್ಣಾಚಾರಿ ಮಗಳಿಗೂ ಕೂಡಾ ಕಿರುಕುಳ ನೀಡಲು ಆರಂಭಿಸಿದ್ದಾನೆ. ಸದ್ಯ ತಂದೆಯ ಕಿರುಕುಳದಿಂದ ಬೇಸತ್ತು ಆಕೆ ಕೂಡಾ ಕಳೆದ 3 ವರ್ಷಗಳ ಹಿಂದೆ ಮನೆ ಬಿಟ್ಟು ಓಡಿ ಬಂದು ತಾಯಿ ಬಳಿ ಸೇರಿದ್ದಾಳೆ. ಆದ್ರೆ ಇನ್ನೊಬ್ಬ ಮಗ ರಾಜೇಶ್ ಮಾತ್ರ ತಂದೆಯೊಂದಿಗೆ ಇದ್ದಾನೆ. ತಾಯಿಗೆ ಪೋನ್ ಕರೆಯೂ ಆತ ಮಾಡಲ್ಲವಂತೆ.

ವಿಕಲಚೇತನ ಮಗ ಉಮೇಶ್ ಹಾಗೂ ಮಗಳು ಗಾಯತ್ರಿಯೊಂದಿಗೆ ಕೊಪ್ಪಳ ತಾಲೂಕಿನ ಹುಲಗಿಯಲ್ಲಿ ರುಕ್ಮಿಣಿ ವಾಸವಾಗಿದ್ದಾರೆ. ಉಮೇಶನಿಗೆ ಹುಲಗಿಯಲ್ಲಿಯೇ ಪಾನ್ ಶಾಪ್ ಹಾಕಿ ಕೊಡಲಾಗಿದ್ದು, ತಾಯಿಗೆ ವಯಸ್ಸಾದ ಕಾರಣ ಅವರೇ ಸಂಸಾರದ ನೇಗಿಲನ್ನು ಹೊತ್ತಿದ್ದಾರೆ. ಇನ್ನು ತಂಗಿ ಗಾಯತ್ರಿ ಕೂಡಾ ದ್ವಿತಿಯ ವರ್ಷದ ಪಿಯುಸಿಯನ್ನು ಓದುತ್ತಿದ್ದು ಆಕೆಯ ಓದಿನ ಜವಾಬ್ದಾರಿ ಕೂಡಾ ಇವರ ಹೆಗಲ ಮೇಲಿದೆ.

ಸದ್ಯ ಪ್ರತಿ ತಿಂಗಳು ಪಾನ್ ಶಾಪ್‍ಗೆ 1500 ರೂಪಾಯಿ ಬಾಡಿಗೆ ಹಾಗೂ ಮನೆಗೆ 1500 ಬಾಡಿಗೆ ಕಟ್ಟುವುದು ಇವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇವರು ಈಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಹೋಗಿದ್ದಾರೆ. ಬೆಳಕು ಕಾರ್ಯಕ್ರಮದ ಮೂಲಕ ತನಗೆ ಸ್ವಂತ ಪಾನ್ ಶಾಪ್ ಒಂದನ್ನು ಹಾಕಿಕೊಟ್ಟರೆ ಪಾನ್ ಶಾಪ್ ಅಂಗಡಿಯ ಬಾಡಿಗೆ ಕಟ್ಟೋದು ತಪ್ಪುತ್ತೆ. ಹಾಗೆಯೇ ತಂಗಿಯ ಓದಿಗೆ ಸ್ವಲ್ಪ ಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದಾರೆ.

ಸದ್ಯ ತಾಯಿಗೆ ಕೂಡಾ ವಯಸ್ಸಾಗಿದ್ದು ಸಂಪೂರ್ಣವಾಗಿ ತಾಯಿ ಮತ್ತು ತಂಗಿಯನ್ನೇ ಅವಲಂಬಿಸಿ ಬದುಕುತ್ತಿರುವ ಉಮೇಶ್ ಕುಟುಂಬಕ್ಕೆ ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಕೇಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *