ಕಿಕ್ ಬಾಕ್ಸರ್ ಆಗ್ಬೇಕೆಂಬ ಆಸೆ ಹೊತ್ತ ತಂಗಿಯರ ಶಿಕ್ಷಣಕ್ಕಾಗಿ ಸಹಾಯ ಹಸ್ತ ಚಾಚಿದ ಅಣ್ಣ

Public TV
3 Min Read

ಬಾಗಲಕೋಟೆ: ಅವರಿಬ್ಬರೂ ಪ್ರತಿಭಾವಂತ ಯುವತಿಯರು, ಅವರಿಗೆ ಇರಲಿಕ್ಕೆ ಒಂದು ಸ್ವಂತ ಮನೆಯೂ ಇಲ್ಲ. ಸದ್ಯ ಅಜ್ಜಿಯ ಮನೆಯಲ್ಲೇ ವಾಸಿಸ್ತಿರೋ ಆ ಯುವತಿಯರು, ಫೇಮಸ್ ಕಿಕ್ ಬಾಕ್ಸರ್ ಆಗಬೇಕು, ನಂತ್ರ ಒಳ್ಳೆಯ ಕೆಲಸ ಹಿಡಿದು ತಮ್ಮ ಬದುಕಿಗಾಗಿ ಜೀವನ ಸವೆಸುತ್ತಿರೋ ಅಣ್ಣ, ಅಜ್ಜಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕನಸು ಹೊಂದಿದ್ದಾರೆ. ಆದ್ರೆ ಸದ್ಯ ಆ ಯುವತಿಯರ ಸಾಧನೆಗೆ ಬಡತನ ಮುಳುವಾಗಿದೆ. ತಂಗಿಯರ ಓದಿಗಾಗಿ ಕಲಿಕೆ ಬಿಟ್ಟ ಅಣ್ಣ, ಕೂಲಿ ಮಾಡ್ತಾ ಇಬ್ಬರು ತಂಗಿಯರಿಗೆ ಶಿಕ್ಷಣ ಕೊಡಿಸುತ್ತಾ ಸ್ವಾಭಿಮಾನದ ಜೀವನ ಸಾಗಿಸ್ತಿದ್ದಾರೆ. ತಂಗಿಯರ ಮುಂದಿನ ಶಿಕ್ಷಣಕ್ಕೆ ಕೊಡುವಷ್ಟು ಅಣ್ಣನ ಬಳಿ ದುಡ್ಡಿಲ್ಲ. ತಂಗಿಯರಿಬ್ಬರ ಶಿಕ್ಷಣಕ್ಕಾಗಿ ಅಣ್ಣ ಸಹಾಯ ಬೇಡ್ತಿದ್ದಾರೆ.

ಸಾಧನೆಯ ಕನಸ್ಸುಗಳನ್ನೇ ಹೊತ್ತ ಸೋದರಿಯರಿಬ್ಬರ ಶಿಕ್ಷಣಕ್ಕಾಗಿ ಅಣ್ಣ ಕಲಿಕೆ ಬಿಟ್ಟು ಕೂಲಿ ಮಾಡಲು ಮುಂದಾಗಿದ್ದಾರೆ. ಎಳೆಯ ವಯಸ್ಸಿನಲ್ಲೇ ತಂದೆ-ತಾಯಿ ಕಳೆದುಕೊಂಡು ಅಣ್ಣ-ತಂಗಿಯರು ಅಜ್ಜಿಯ ಮನೆಯಲ್ಲೇ ವಾಸಿಸುತ್ತಿದ್ದಾರೆ. ಅಂದಹಾಗೆ ಸಾಧನೆಯ ಮೆಡಲ್ ಹಾಗೂ ಸರ್ಟಿಫೀಕೆಟ್ ಹಿಡಿದ ಈ ಸೋದರಿಯರ ಹೆಸರು ಶಿಲ್ಪಾ ಹಾಗೂ ಲಕ್ಷ್ಮಿ. ಇವರ ಸಾಧನೆಯ ಹಿಂದಿರುವ ಶಕ್ತಿಯೇ ಅಣ್ಣ ವಿಠ್ಠಲ್ ಹಣಮರ್. ಈ ಮೂವರು ಒಡಹುಟ್ಟಿದ್ದ ಅಣ್ಣ, ತಂಗಿಯರು. ಸದ್ಯ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ತುಮ್ಮರಮಟ್ಟಿ ಗ್ರಾಮದ ಅಜ್ಜಿ ಮಲ್ಲಮ್ಮ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಹತ್ತು ವರ್ಷದ ಹಿಂದೆ ವಿಠ್ಠಲ್ ಹನಮರ್ ತಂದೆ ತಾಯಿ ತೀರಿ ಹೋದ್ರು. ಆಗ ಸಂಸಾರದ ನೊಗ ಹೊತ್ತ ವಿಠ್ಠಲ್, ಸೆಕೆಂಡ್ ಪಿಯುಸಿಯಲ್ಲಿ ತನ್ನ ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟು, ತಮ್ಮ ತಂಗಿಯರಾದ ಶಿಲ್ಪಾ ಹಾಗೂ ಲಕ್ಷ್ಮಿಗೆ ಶಿಕ್ಷಣ ಕೊಡಿಸಲು, ಕೂಲಿ ಕೆಲ್ಸಕ್ಕೆ ಇಳಿದ್ರು. ಸ್ವಂತ ಮನೆಯೂ ಇಲ್ಲದ ಈ ಬಡಪಾಯಿಗಳಿಗೆ ಅಜ್ಜಿಯ ಮನೆಯೇ ಜೀವನಾಧಾರ. ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ 3ನೇ ವರ್ಷದಲ್ಲಿ ವ್ಯಾಸಂಗ ಮಾಡ್ತಿರೋ ಶಿಲ್ಪಾ ಹಾಗೂ ಲಕ್ಷ್ಮಿ, ಕಿಕ್ ಬಾಕ್ಸಿಂಗ್‍ನಲ್ಲಿ ರಾಜ್ಯ ಮಟ್ಟದಲ್ಲಿ ಸಾಕಷ್ಟು ಮೆಡಲ್ ಗಳಿಸಿ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಭಾಗವಹಿಸಿ ಸಾಧನೆ ಮಾಡಿದ್ದಾರೆ. ಆದ್ರೆ ಇದೀಗ ತಂಗಿಯರ ಮುಂದಿನ ಶಿಕ್ಷಣಕ್ಕೆ ಅಣ್ಣನ ಬಳಿ ದುಡ್ಡಿಲ್ಲ.

ಹೌದು. ಒಂದು ಕಡೆ ಬೆಂಬಿಡದೇ ಕಾಡ್ತಿರೋ ಬಡತನ, ಮತ್ತೊಂದೆಡೆ ಫೇಮಸ್ ಕಿಕ್ ಬಾಕ್ಸರ್ ಆಗಬೇಕು ನಂತ್ರ ಒಳ್ಳೆಯ ಕೆಲಸ ಹಿಡಿಯಬೇಕೆಂಬ ಕನಸು ಹೊಂದಿರುವ ತಂಗಿಯರ ಸಾಧನೆಗೆ ಹೆಗಲಾಗಬೇಕೆಂಬ ಮಹಾದಾಸೆ ಹೊಂದಿರುವ ವಿಠ್ಠಲ್, ಮದುವೆಯಾಗದೇ ಕೂಲಿ ಮಾಡಿ ಜೀವ ಸಾಗಿಸ್ತಿದ್ದಾರೆ. ಕಲಾ ವಿಭಾದ ಮೂರನೇಯ ವರ್ಷದಲ್ಲಿ ವ್ಯಾಸಂಗ ಮಾಡ್ತಿರೋ ಶಿಲ್ಪಾ ಹಾಗೂ ಲಕ್ಷ್ಮಿ ಮುಂದೆ ಬಿಪಿಎಡ್ಡ್ ಮಾಡಿ, ದೈಹಿಕ ಶಿಕ್ಷಕಿಯರಾಗಬೇಕು ಅಥವಾ ಯಾವುದಾದರೂ ಒಳ್ಳೆಯ ಕೆಲಸ ಹಿಡಿದು, ಅಣ್ಣ ಹಾಗೂ ಅಜ್ಜಿಯನ್ನ ಚೆನ್ನಾಗಿ ನೋಡಿಕೊಳ್ಬೇಕೆಂಬ ಬೆಟ್ಟದಷ್ಟು ಆಸೆ ಹೊಂದಿದ್ದಾರೆ.

ಆದ್ರೆ ಅಣ್ಣ ವಿಠ್ಠಲ್ ಹನಮರ್ ಬಳಿ ದುಡ್ಡಿಲ್ಲ. ಹಾಗಾಗಿ ತಂಗಿಯರಿಬ್ಬರ ಮುಂದಿನ ವಿದ್ಯಾಭ್ಯಾಕ್ಕಾಗಿ ಸಹಾಯ ಮಾಡಿ ಎಂದು ಗೋಗರೆಯುತ್ತಿದ್ದಾರೆ. ಇತ್ತ ಅಜ್ಜಿ ಇರೋವರೆಗೂ ಅವರ ಮನೆಯಲ್ಲಿದ್ದೇವೆ. ಒಂದು ವೇಳೆ ಅಜ್ಜಿ ತೀರಿ ಹೋದ್ರೆ ನಾವು ಅನಾಥರಾಗುತ್ತೇವೆ. ಹಾಗಾಗಿ ಸರ್ಕಾರ ಅಥವಾ ಸಂಘ ಸಂಸ್ಥೆಯವರು ಸಹಾಯದಿಂದ ನಮಗೆ ಒಂದು ಆಶ್ರಯ ಮನೆಯನ್ನು ಒದಗಿಸಿ ಎಂದು ಮನವಿ ಮಾಡಿಕೊಳ್ತಿದ್ದಾರೆ. ಇನ್ನು ಇದೇ ತಿಂಗಳು 20ರಂದು ಶಿವಮೊಗ್ಗಾದಲ್ಲಿ ನಡೆಯೋ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಲು ಶಿಲ್ಪಾ ಹಾಗೂ ಲಕ್ಷ್ಮಿಗೆ ಆರ್ಥಿಕ ಸಹಾಯ ಮಾಡಿ ಅಂತ ಊರಿನ ಜನ ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಸಾಧನೆಯ ಕನಸುಗಳನ್ನೇ ಹೊತ್ತ ಸೋದರಿಯರು, ಈ ಸೋದರಿಯರಿಬ್ಬರ ಸಾಧನೆಗೆ ಹೆಗಲಾಬೇಕೆಂಬ ಅಣ್ಣ. ಒಟ್ಟಿನಲ್ಲಿ ಈ ಮಾದರಿ ಅಣ್ಣ ತಂಗಿಯರ ಸ್ಥಿತಿಗೆ ಯಾರಾದ್ರೂ ತಕ್ಕಮಟ್ಟಿನ ಸಹಾಯಹಸ್ತ ಚಾಚಲಿ ಅನ್ನೋದು ನಮ್ಮ ಮನವಿ.

https://www.youtube.com/watch?v=IrNmFWFRj5M

Share This Article
Leave a Comment

Leave a Reply

Your email address will not be published. Required fields are marked *