ಮುಖ್ಯಮಂತ್ರಿಯಿಂದ ಸನ್ಮಾನ ಮಾಡಿಸ್ಕೊಂಡ ಬಡ ವಿದ್ಯಾರ್ಥಿಗೆ ಡಾಕ್ಟರ್ ಆಗೋಕೆ ಬೇಕಿದೆ ಸಹಾಯ

Public TV
2 Min Read

ದಾವಣಗೆರೆ: ಒಂದೆಡೆ ಸಾಂಬಾರು ಪದಾರ್ಥ ಮಾರಾಟ ಮಾಡುತ್ತಿರುವ ತಂದೆ, ಮತ್ತೊಂದೆಡೆ ಮಗನನ್ನು ಡಾಕ್ಟರ್ ಮಾಡಬೇಕೆಂದು ಕೂಲಿ ಕೆಲಸ ಮಾಡುತ್ತಿರುವ ತಾಯಿ. ಈ ದಂಪತಿಯ ಪ್ರತಿಭಾವಂತ ಕಿಶೋರ್ ಇಂದು ಡಾಕ್ಟರ್ ಆಗೋದಕ್ಕೆ ಆರ್ಥಿಕ ಸಹಾಯದ ಅವಶ್ಯಕತೆಯಿದೆ.

ಕಿಶೋರ್ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಅತ್ಯುತ್ತಮ ಅಂಕ ಪಡೆದು ಮುಖ್ಯಮಂತ್ರಿಗಳಿಂದ ಸನ್ಮಾನವನ್ನು ಸಹ ಮಾಡಿಸಿಕೊಂಡಿದ್ದಾನೆ. ಓದಿನಲ್ಲಿ ಮುಂದಿರುವ ಈತನಿಗೆ ಬಡತನ ಎನ್ನುವುದು ಹೆಗಲೇರಿದೆ. ತಂದೆ ಕೃಷ್ಣಮೂರ್ತಿ ಚಿಕ್ಕ ಗಾಡಿಯಲ್ಲಿ ಸಾಂಬಾರು ಪದಾರ್ಥಗಳನ್ನು ಇಟ್ಟುಕೊಂಡು ಹಳ್ಳಿ ಹಳ್ಳಿಗೂ ಹೋಗಿ ಮಾರಾಟ ಮಾಡಿ ಬಂದ ಹಣದಲ್ಲಿ ಸಂಸಾರ ಸಾಗಿಸುತ್ತಿದ್ದಾರೆ. ಆದ್ರೆ ಎರಡನೇ ಮಗ ಕಿಶೋರ್ ಎಂಬಿಬಿಎಸ್ ಮಾಡಿ ಡಾಕ್ಟರ್ ಆಗಬೇಕು ಎನ್ನುವ ಕನಸನ್ನು ಇಟ್ಟುಕೊಂಡು ಚೆನ್ನಾಗಿ ಓದಿ ಮೆಡಿಕಲ್‍ನಲ್ಲಿ ಸರ್ಕಾರಿ ಸೀಟ್ ಪಡೆದು ದಾವಣಗೆರೆಯ ಜೆ ಜೆ ಮೆಡಿಕಲ್ ಕಾಲೇಜ್‍ಗೆ ಸೇರಿದ್ದಾನೆ.

ಮೆಡಿಕಲ್ ಮಾಡಿ ಡಾಕ್ಟರ್ ಆಗಬೇಕು ಎನ್ನುವ ಮಗನ ಕನಸನ್ನು ನಿರಾಸೆ ಮಾಡಬಾರದು ಎನ್ನುವ ನಿಟ್ಟಿನಲ್ಲಿ ಬ್ಯಾಂಕ್ ನಿಂದ ಲೋನ್ ಮಾಡಿಸಿಯಾದ್ರು ಓದಿಸೋಣ ಎಂದುಕೊಂಡಿದ್ರು. ಆದ್ರೆ ಜಾಮೀನು ನೀಡಲು ಯಾವುದೇ ಆಸ್ತಿ ಇಲ್ಲದಿರುವುದರಿಂದ ಲೋನ್ ಕ್ಯಾನ್ಸಲ್ ಅಗಿದೆ.

ಮೆಡಿಕಲ್ ಅಂದ್ರೆ ಏನ್ ಸುಮ್ನೆನಾ? ಲಕ್ಷಾಂತರ ರೂಪಾಯಿ ಡೊನೇಷನ್ ಕಟ್ಟಬೇಕು. ಕಾಲೇಜ್ ನಲ್ಲಿ ಹೈಫೈ ಲೈಫ್ ಲೀಡ್ ಮಾಡಬೇಕು. ಕೈಯಲ್ಲಿ ಒಂದು ಬೈಕ್ ಇರ್ಬೇಕು ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಆದ್ರೆ ಕಿಶೋರ್ ಮಾತ್ರ ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋ ಗಾದೆಯನ್ನು ಪಾಲಿಸುತ್ತಿದ್ದಾನೆ. ಹಾಸ್ಟಲ್ ನಲ್ಲಿ ಇದ್ರೆ ಎಲ್ಲಿ ಪೋಷಕರಿಗೆ ಹೊರೆಯಾಗುತ್ತೆ ಎಂದು ಆಲೋಚನೆ ಮಾಡಿ ಹಳ್ಳಿಯಿಂದಲೇ ಪ್ರತಿನಿತ್ಯ ಮೂರು ಕಿಲೋಮೀಟರ್ ನಡೆದುಕೊಂಡು ಹೋಗಿ ಬಸ್ ಹಿಡಿದು ಕಾಲೇಜ್ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಎಷ್ಟಾದ್ರೂ ಕಷ್ಟಪಟ್ಟು ಮೆಡಿಕಲ್ ಮುಗಿಸಿ ತಂದೆ-ತಾಯಿಗಳನ್ನು ಸುಖವಾಗಿ ನೋಡಿಕೊಳ್ಳುತ್ತೇನೆ. ಆದ್ರೆ ಕಾಲೇಜ್ ಶುಲ್ಕ ಕಟ್ಟಲು ಪೋಷಕರು ಕೂಲಿ ಮಾಡಿ ನನ್ನನ್ನು ಓದಿಸುತ್ತಿದ್ದಾರೆ. ನಮಗೆ ಅಸರೆಯ ಕೈಗಳು ಬೇಕಾಗಿವೆ ಎಂಬುದು ಇದೀಗ ವಿದ್ಯಾರ್ಥಿಯ ಮನವಿ.

ಹಳ್ಳಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಸರ್ಕಾರಿ ಮೆಡಿಕಲ್ ಸೀಟ್ ಪಡೆದಿರೋ ಈತನ ಡಾಕ್ಟರ್ ಕನಸು ನನಸು ಮಾಡಲು ಸಹಾಯ ಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *