ನನ್ನ ಕಾಲು ಕಟ್ ಮಾಡಿದ್ರೂ ಪರ್ವಾಗಿಲ್ಲ, ದಯವಿಟ್ಟು ಓದಿಸಿ ಅಂತಿರೋ ಗದಗದ ಕರಿಬಸಪ್ಪನಿಗೆ ಬೇಕಿದೆ ನೆರವು

Public TV
1 Min Read

ಗದಗ: ಎದ್ದು ನಿಲ್ಲಲಾಗದಂತಹ ಸ್ಥಿತಿಯಲ್ಲಿರುವ ಈತನ ಹೆಸರು ಕರಿಬಸಪ್ಪ. ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ನಿವಾಸಿಯಾಗಿರೋ ಈತ ವರ್ಷದ ಹಿಂದೆ ಕಬ್ಬಡ್ಡಿ ಆಡುವ ವೇಳೆ ಬಿದ್ದು ಮೊಣಕಾಲಿಗೆ ಏಟಾಗಿತ್ತು. ಚಿಕಿತ್ಸೆ ಕೊಡಿಸಿದ್ರೂ ಗುಣವಾಗಲಿಲ್ಲ. ಆಪರೇಷನ್ ಕೂಡಾ ಮಾಡಿಸಿದ್ರು. ಆದ್ರೆ ಯಾವುದೇ ಬದಲಾವಣೆಯಾಗಿಲ್ಲ. ವೈದ್ಯರು ಮೂಳೆ ಕ್ಯಾನ್ಸರ್ ಆಗಿದೆ ಅಂತಾ ಹೇಳಿದ್ದಾರೆ.

ಸಾಕಷ್ಟು ನೋವಿನಿಂದ ಬಳಲುತ್ತಿರುವ ಕರಿಬಸಪ್ಪ 10 ನೇ ತರಗತಿಗೆ ಶಾಲೆಗೆ ಹೋಗಲಾಗಲಿಲ್ಲ. ಆದ್ರೆ ಛಲ ಬಿಡದೆ ನೋವಿನಲ್ಲೂ ಮನೆಯಲ್ಲಿಯೇ ಓದಿ ಶೇಕಡಾ 90 ರಷ್ಟು ಫಲಿತಾಂಶ ಗಳಿಸಿದ್ದಾನೆ. ಮುಂದೆ ಓದಿ ವೈದ್ಯನಾಗಬೇಕೆಂಬ ಛಲವಿರೋ ಕರಿಬಸಪ್ಪನಿಗೆ ಇದೀಗ ಬಡತನ ಅಡ್ಡಿಯಾಗಿದೆ.

ಐದು ಜನರಿರೋ ಈ ಕುಟುಂಬಕ್ಕೆ ಇರೋದು ಕೇವಲ ಎರಡು ಎಕರೆ ಜಮೀನು ಮಾತ್ರ. ಬರಗಾಲದಿಂದಾಗಿ ಕೃಷಿಯಿಂದ ಯಾವುದೇ ಗಳಿಕೆಯಿಲ್ಲ. ಕರಿಬಸಪ್ಪನ ಕ್ಯಾನ್ಸರ್ ಚಿಕಿತ್ಸೆಗೆ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾರೆ. ಆದ್ರೂ ಗುಣಮುಖವಾಗಿಲ್ಲ. ಬೊನ್ ಕ್ಯಾನ್ಸರ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶೀಘ್ರದಲ್ಲೇ ಬಲಗಾಲನ್ನ ತೊಡೆಯ ಭಾಗಕ್ಕೆ ಕಟ್ ಮಾಡಬೇಕೆಂದು ವೈದ್ಯರು ಹೇಳಿದ್ದಾರೆ. ಆದ್ರೆ ಕರಿಬಸಪ್ಪ ಮಾತ್ರ ನನ್ನ ಕಾಲು ಹೊದ್ರೂ ಪರವಾಗಿಲ್ಲ ನನ್ನ ದಯವಿಟ್ಟು ಓದಿಸಿ ಅಂತಿದ್ದಾನೆ.

ಆಟ ಪಾಠದಲ್ಲಿ ಹೆಚ್ಚಿನ ಆಸಕ್ತಿ ತೊರೋದ್ರಿಂದ ಶಿಕ್ಷಕರಿಗೆ ಈತ ನೆಚ್ಚಿನ ವಿದ್ಯಾರ್ಥಿ. ಓದಿನಲ್ಲೂ ಮುಂದಿರೋ ಕರಿಬಸಪ್ಪ ಮುಂದೊಂದು ದಿನ ಮಿನುಗುವ ನಕ್ಷತ್ರದಂತಾಗಲಿ ಅಂತಾ ಜನರು ಬಾಯಿತುಂಬ ಹಾರೈಸುತ್ತಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಚೆನ್ನಾಗಿ ಓದಿ ವೈದ್ಯನಾಗಿ ಬಡವರ ಸೇವೆ ಮಾಡುವ ಬಹುದೊಡ್ಡ ಹೆಬ್ಬಯಕೆ ಇವನದ್ದು. ಉಳ್ಳವರ ಸಹಾಯದಿಂದ ಈ ಪ್ರತಿಭಾವಂತನ ಕನಸು ನನಸಾಗಲಿ ಎಂಬುದು ನಮ್ಮ ಆಶಯ.

https://www.youtube.com/watch?v=rBQ4Z2CmHoU

 

Share This Article
Leave a Comment

Leave a Reply

Your email address will not be published. Required fields are marked *