ಬೆಳಕು ಇಂಪ್ಯಾಕ್ಟ್: ಬಯಲು ಶೌಚಾಲಯ ಪದ್ಧತಿಗೆ ಬಿತ್ತು ಬ್ರೇಕ್

Public TV
1 Min Read

ಕೋಲಾರ: ಜಿಲ್ಲೆಯ ಕೆಜಿಎಫ್ ನಗರ ಸಭೆ ವ್ಯಾಪ್ತಿಗೆ ಬರುವ ಬಿಜಿಎಂಎಲ್ ಕಾರ್ಮಿಕ ಕುಟುಂಬಗಳು ಬೆಳಗಾಗುವ ಮುನ್ನ ತಮ್ಮ ನಿತ್ಯ ಕರ್ಮಗಳನ್ನ ಮುಗಿಸಿಕೊಳ್ಳಬೇಕಾದ್ರೆ ಮುಜುಗರದಿಂದಲೇ ತಂಬಿಗೆ ಹಿಡಿದುಕೊಂಡು ಮಹಿಳೆಯರು, ಮಕ್ಕಳು, ಯುವಕರು, ಹಿರಿಯರು ಪೊದೆ ಹಾಗೂ ಗುಡ್ಡಗಳನ್ನ ಅವಲಂಬಿಸಿ ಕತ್ತಲು ಕವಿಯುವವರೆಗೂ ಕಾದು ನಿತ್ಯ ಕರ್ಮಗಳನ್ನು ಮಾಡುತ್ತಿದ್ದರು. ಆದರೆ ಈ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳಾಗಲಿ, ನಗರಸಭೆಯಾಗಲಿ ಯಾರು ತಲೆಕೆಡಿಸಿಕೊಂಡಿರಲಿಲ್ಲ.

ಇಲ್ಲಿನ ಸ್ಥಳೀಯರು ‘ನಮ್ಮನ್ನು ಬಯಲು ಬಹಿರ್ದೆಸೆ ಮುಕ್ತರನ್ನಾಗಿಸಿ’ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು. ಬೆಳಕು ಕಾರ್ಯಕ್ರಮದಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು. ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಶೌಚಾಲಯ ನಿರ್ಮಾಣ ಮಾಡಿಕೊಡುವುದಾಗಿ ಮಾತು ಕೊಟ್ಟಿದ್ದರು. ಈಗ ಸಾವಿರಾರು ಶೌಚಾಲಯಗಳನ್ನ ನಗರದಲ್ಲಿ ನಿರ್ಮಾಣ ಮಾಡಿ ಇಲ್ಲಿನ ನಿವಾಸಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಅಷ್ಟೇ ಅಲ್ಲ ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳು ಹಾಳಾಗಿತ್ತು. ಪಬ್ಲಿಕ್ ಟಿವಿ ವರದಿಯ ಬಳಿಕ ಎಚ್ಚೆತ್ತ ಜಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ನಗರಸಭೆ ಸಾರ್ವಜನಿಕ ಶೌಚಾಲಯಗಳನ್ನ ನಿರ್ಮಿಸಿದ್ದಾರೆ. ಸದ್ಯ ಕೋಲಾರ ಜಿಲ್ಲೆ ಶೇ.100 ರಷ್ಟು ಬಯಲು ಶೌಚಾಲಯ ಮುಕ್ತವಾಗಿದೆ. ಅದಕ್ಕೆ ಸ್ಥಳೀಯರು ಬೆಳಕು ಕಾರ್ಯಕ್ರಮಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಒಟ್ಟಿನಲ್ಲಿ ಕೆಜಿಎಫ್ ನಗರದ ಅರ್ಧದಷ್ಟು ಜನರು ನಿತ್ಯ ಕರ್ಮಕ್ಕಾಗಿ ವಿಧಿ ಇಲ್ಲದೆ ಬಯಲು ಶೌಚಾಲಯವನ್ನೆ ಅವಲಂಭಿಸಿದ್ದ ಪದ್ದತಿಗೆ ಬ್ರೇಕ್ ಬಿದ್ದಿದೆ. ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿರೋದು ಇಲ್ಲಿನ ನಿವಾಸಿಗಳಿಗೆ ಸಂತಸ ತಂದಿದೆ.

Share This Article
Leave a Comment

Leave a Reply

Your email address will not be published. Required fields are marked *