ಈ ಊರಿನ ತುಂಬೆಲ್ಲಾ ಕಿಡ್ನಿ ರೋಗಿಗಳು- ಶುದ್ಧ ಕುಡಿಯುವ ನೀರಿಗಾಗಿ ಬೇಕಿದೆ ಸಹಾಯ

Public TV
1 Min Read

ರಾಯಚೂರು: ಜಿಲ್ಲೆಯ ಈ ಗ್ರಾಮಗಳಲ್ಲಿ ಎಲ್ಲಾ ಇದೆ ಉತ್ತಮ ರಸ್ತೆ, ಪ್ರತಿ ಮನೆಗೂ ಶೌಚಾಲಯ, ಒಂದು ಗುಡಿಸಲನ್ನ ಹುಡಿಕಿದ್ರೂ ಇಲ್ಲಿ ಸಿಕ್ಕಲ್ಲ. ಆದ್ರೆ ಈ ಎಲ್ಲದರ ಜೊತೆ ಪ್ರತಿ ಮನೆಯಲ್ಲೂ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಬೇಸಿಗೆ ಬಂದರಂತೂ ಗ್ರಾಮದ ಬಹಳಷ್ಟು ಜನ ಆಸ್ಪತ್ರೆಯಲ್ಲೇ ಇರ್ತಾರೆ. ದುಡಿದ ಹಣವೆಲ್ಲಾ ಆಸ್ಪತ್ರೆಯ ಚಿಕಿತ್ಸಾ ವೆಚ್ಚಕ್ಕೆ ಸುರಿಯುತ್ತಿದ್ದಾರೆ.

ಹೀಗೇ ಕೈಯಲ್ಲಿ ವೈದ್ಯರ ಚಿಕಿತ್ಸಾ ವಿವರದ ಚೀಟಿಗಳನ್ನ ಹಿಡಿದು ನಿಂತಿರುವ ಇವರೆಲ್ಲಾ ರಾಯಚೂರಿನ ಮಾನ್ವಿ ತಾಲೂಕಿನ ಬೆಟ್ಟದೂರು ತಾಂಡ, ನೀರಮಾನ್ವಿ ತಾಂಡ, ಮುರಾನ್‍ಪುರ ತಾಂಡಗಳ ಜನ. ಇಲ್ಲಿನ ಸುಮಾರು ಒಂದು ಸಾವಿರ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ಮೂತ್ರಪಿಂಡ ಸಮಸ್ಯೆ ಹಾಗೂ ಕೀಲು ನೋವಿನ ಸಮಸ್ಯೆಗಳು ವಿಪರೀತವಾಗಿ ಕಾಡುತ್ತಿವೆ. ಬೇಸಿಗೆ ಕಾಲದಲ್ಲಿ ಸಮಸ್ಯೆ ಉಲ್ಬಣಗೊಂಡು ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈಗಾಗಲೇ ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾದವರು ಗ್ರಾಮಕ್ಕೆ ಮರಳಿದ್ದಾರೆ. ವಯಸ್ಸಿನ ಬೇಧವಿಲ್ಲದೆ ಪ್ರತಿಯೊಬ್ಬರಲ್ಲೂ ಮೂತ್ರಪಿಂಡ ಹರಳುಗಳು ಕಾಣಿಸಿಕೊಳ್ಳುತ್ತಿದ್ದು, ನಿತ್ಯ ನೋವು ಅನುಭವಿಸುತ್ತಿದ್ದಾರೆ. ಇದಕ್ಕೆ ಈ ಗ್ರಾಮಗಳ ಜನ ಕುಡಿಯುತ್ತಿರುವ ಬೋರ್‍ವೆಲ್ ನೀರೇ ಮುಖ್ಯ ಕಾರಣ.

ಪುಟ್ಟ ಗ್ರಾಮಗಳಾದ್ರೂ ರಸ್ತೆ, ಶೌಚಾಲಯ ಸೇರಿ ಎಲ್ಲಾ ವ್ಯವಸ್ಥೆಗಳನ್ನ ಹೊಂದಿರುವ ತಾಂಡಾದಲ್ಲಿ ಬೋರ್ ವೆಲ್ ನೀರು ಬಿಟ್ಟರೆ ಕುಡಿಯಲು ಬೇರೆ ನೀರಿಲ್ಲ. ಇಲ್ಲಿನ ಕೊಳವೆ ಬಾವಿ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಮೂತ್ರಪಿಂಡ ಹರಳು ಹಾಗೂ ಕೈಕಾಲಿನ ಕೀಲು ನೋವಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಕಾಯಿಲೆಗೆ ಹೆದರಿ ಕೆಲವರು ಗ್ರಾಮವನ್ನೇ ತೊರೆದಿದ್ದಾರೆ. ಇನ್ನೂ ಕೆಲವರು ಪಕ್ಕದ ಊರುಗಳಿಗೆ ತೆರಳಿ ಶುದ್ದ ಕುಡಿಯುವ ನೀರನ್ನ ತಂದುಕೊಳ್ಳುತ್ತಿದ್ದಾರೆ.

ಈ ಗ್ರಾಮಗಳ ಪಕ್ಕದಲ್ಲಿ ತುಂಗಭದ್ರಾ ಎಡದಂಡೆ ಉಪಕಾಲುವೆ ಹಾದು ಹೋಗಿದ್ದರೂ ಕಾಲುವೆಯ ಕೆಳಭಾಗವಾಗಿರುವುದರಿಂದ ನೀರು ಮರೀಚಿಕೆಯಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಮೂಲಕ ಈ ಗ್ರಾಮಗಳಿಗೆ ಕುಡಿಯುವ ನೀರನ್ನ ಒದಗಿಸುವುದು ಅವಶ್ಯಕವಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *