ಭಿಕ್ಷಾಟನೆ ಮಾಡಿ ಮಕ್ಕಳನ್ನ ಸಾಕ್ತಿರೋ ತಂದೆ, ಸ್ಲಮ್‍ನಲ್ಲಿದ್ರೂ ಕೆಎಎಸ್ ಮಾಡ್ಬೇಕೆಂಬ ಬಿಕಾಂ ವಿದ್ಯಾರ್ಥಿಗೆ ಬೇಕಿದೆ ಸಹಾಯ

Public TV
1 Min Read

ಬೆಳಗಾವಿ: ಜಿಲ್ಲೆಯ ಸ್ಲಂವೊಂದರ ಯುವಕ ಕೆಎಎಸ್ ಅಧಿಕಾರಿ ಆಗಬೇಕೆಂಬ ಗುರಿ ಹೊಂದಿದ್ದಾರೆ. ಆದರೂ ಕಿತ್ತು ತಿನ್ನುವ ಬಡತನ ವಿದ್ಯಾಭ್ಯಾಸಕ್ಕೆ ಅಡ್ಡಗಾಲು ಹಾಕುತ್ತಿದೆ.

ಬಿಕಾಂ ವಿದ್ಯಾರ್ಥಿಯಾದ ಗಣೇಶ್ ವಿಭೂತಿ ಬೆಳಗಾವಿ ಮಹಾನಗರದ ಕಣಬರ್ಗಿ ಸ್ಲಂನಲ್ಲಿ ಹರಿದು ಹೋದ ಗುಡಿಸಲಿನಲ್ಲಿ ವಾಸವಿದ್ದಾರೆ. ಇವರ ತಂದೆ ಮನೆ ಮನೆಗೆ ತೆರಳಿ ಹಾಡು ಹೇಳಿ ಭಿಕ್ಷೆ ಬೇಡಿ ಬಂದ ಹಣದಿಂದ 5 ಮಕ್ಕಳನ್ನು ಸಾಕುತ್ತಿದ್ದಾರೆ. ತಾಯಿ ಬೇರೆಯವರ ಮನೆಗೆಲಸ, ಪಾತ್ರೆ ತೊಳೆಯುವ ಕೆಲಸ ಮಾಡುವುದರ ಜೊತೆಗೆ ಪೊರಕೆ ಮಾರಲು ಹೋಗುತ್ತಾರೆ. ಕಿತ್ತು ತಿನ್ನುವ ಬಡತನ, ಓದಲು ಆಸಕ್ತಿಯಿದ್ದರೂ ಹಣದ ಕೊರತೆ ಗಣೇಶ್‍ರನ್ನು ಕಾಡುತ್ತಿದೆ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅವರಿವರ ಸಹಾಯ ಪಡೆದು ಬಿಕಾಂ ಓದುತ್ತಿದ್ದಾರೆ.

ಐದು ಮಕ್ಕಳಿಗೂ ಊಟ ಕೊಡಿಸುವುದೇ ದೊಡ್ಡ ಸವಾಲಾಗಿರುವಾಗ ನಿನಗೆ ಓದಲು ಹಣ ಎಲ್ಲಿಂದ ತರಲಿ ಎಂದು ಪಾಲಕರು ಅಸಹಾಯಕರಾಗಿದ್ದಾರೆ. ಆದರೆ ನಾನು ಕಷ್ಟಪಟ್ಟು ಓದಿ ಮುಂದೆ ಬರಬೇಕು ಎಂದು ಗಣೇಶ್ ತನ್ನ ಕೆಎಎಸ್ ಗುರಿ ಬಗ್ಗೆ ಹೇಳಿಕೊಳ್ಳುತ್ತಾರೆ.

ನಮ್ಮ ತಂದೆ ನಮಗೆ ವಿದ್ಯಾಭ್ಯಾಸ ನೀಡಲಿಲ್ಲ. ಅದರ ಬದಲು ತಬಲಾ ,ಹಾರ್ಮೊನಿಯಂ ನೀಡಿದರು. ಆದರೆ ಮಗ ಗಣೇಶ್ ಓದುವಲ್ಲಿ ಆಸಕ್ತಿ ತೋರಿದ್ದಾನೆ ಎಂದು ಗಣೇಶ್ ಅವರ ತಂದೆ ಹೇಳುತ್ತಾರೆ. ಕಂದೀಲು ಬೆಳಕಿನಲ್ಲಿ ಓದಿದ ಗಣೇಶ್ ಹಠ ಮಾತ್ರ ಬಿಟ್ಟಿಲ್ಲ. ಕೆಎಎಸ್ ಮಾಡಿ ತಮ್ಮ ಜನರ ಬದುಕಿಗೆ ಆಸರೆಯಾಗಬೇಕೆಂಬುದೇ ಗಣೇಶ್ ಅವರ ಜೀವನದ ಮುಖ್ಯ ಗುರಿ.

 

Share This Article
Leave a Comment

Leave a Reply

Your email address will not be published. Required fields are marked *