ಬೆಳಗಾವಿ | ಭಾರೀ ಮಳೆಗೆ ಮುಳುಗಿತು ಹಬ್ಬಾನಟ್ಟಿ ಮಾರುತಿ ದೇವಸ್ಥಾನ – ಎಲ್ಲೆಲ್ಲಿ ಏನಾಗಿದೆ?

Public TV
1 Min Read

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಮತ್ತು ಬೆಳಗಾವಿಯ ಕಣಕುಂಬಿ ಭಾಗದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬರೆಯುತ್ತಿದ್ದಾನೆ. ಇದರಿಂದ ಬೆಳಗಾವಿ (Belagavi) ಜಿಲ್ಲೆಯಲ್ಲಿ ಹರಿಯುವ ಸಪ್ತ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಶುರುವಾಗಿದ್ದು, ಜಿಲ್ಲೆಯ ಜನರು ಆತಂಕದಲ್ಲಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಜನರ ಸ್ಥಿತಿ ಹೇಳತೀರದ್ದಾಗಿದೆ. ಅದರಲ್ಲೂ ಮಹಾರಾಷ್ಟ್ರ (Maharashtra) ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದ ಜಿಲ್ಲೆಯ ಏಳು ನದಿಗಳು ಅಪಾಯದ ಮಟ್ಟಮೀರಿ ಹರಿಯುತ್ತಿವೆ. ಇದನ್ನೂ ಓದಿ: ಮಾರನಹಳ್ಳಿಯಲ್ಲಿ ಗುಡ್ಡ ಕುಸಿತ | ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್

ಖಾನಾಪುರ ತಾಲೂಕಿನ ಕಣಕುಂಬಿ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗ್ತಿದ್ದು ಮಲಪ್ರಭಾ ನದಿಗೆ (Malaprabha River) ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ನದಿಗೆ ಒಳ ಹರಿವು ಹೆಚ್ಚಾಗಿರುವುದರಿಂದ ಹಬ್ಬಾನಟ್ಟಿ ಮಾರುತಿ ದೇವಸ್ಥಾನ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಹತ್ತೇ ದಿನದಲ್ಲಿ ಹತ್ತು ಅಡಿಗಳಷ್ಟು ನೀರು ಬಂದಿದ್ದು ಇಡೀ ದೇವಸ್ಥಾನವೇ ಮುಳುಗಿ ಕಲಶ ಮಾತ್ರ ಗೋಚರಿಸುತ್ತಿದೆ. ದೇವಸ್ಥಾನದ ಮುಂಭಾಗದಲ್ಲಿರುವ ಶಿವನ ದೇವಸ್ಥಾನಕ್ಕೂ ನೀರು ನುಗ್ಗಿದ್ದು ಇದರಿಂದ ಇಡೀ ದೇವಸ್ಥಾನವೇ ಮುಳುಗಿದೆ.

ಖಾನಾಪುರ ಹೊರವಲಯದಲ್ಲಿ ಹರಿಯುವ ಹಾಲಾತ್ರಿ ಹಳ್ಳ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮುಳುಗಡೆಯಾಗಿದೆ. ಹೆಮ್ಮಡಗಾ, ಗವಾಳಿ, ಪಾಸ್ತೋಳಿ ಸೇರಿ ಹತ್ತಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ.

 

ಗೋವಾಕ್ಕೆ ಸಂಪರ್ಕಿಸುವ ಇದ್ದ ಒಂದು ಸೇತುವೆ ಕೂಡ ಮುಳುಗಿದ್ದು, ಇದರಿಂದ ಧಾರವಾಡದ ಮೇಲೆ ಗೋವಾಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಮಲಪ್ರಭಾ ನದಿ ಅಕ್ಕಪಕ್ಕದ ಜಮೀನುಗಳಿಗೂ ಹೊಕ್ಕಿದ್ದು ಇದರಿಂದ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ಜನರಿದ್ದಾರೆ.

ಬೆಳಗಾವಿ, ಖಾನಾಪುರ, ಕಿತ್ತೂರು ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ಇಂದು ಮೂರು ತಾಲೂಕಿನ ಶಾಲಾ ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ಡಿಸಿ ಮೊಹಮ್ಮದ್ ರೋಷನ್ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

Share This Article