ಬಿಯರ್ ಕೊಡದಿದ್ದಕ್ಕೆ ಬಾಟಲಿಯಿಂದಲೇ ಯುವಕನ ಹತ್ಯೆಗೈದ ಗೆಳೆಯರು

Public TV
1 Min Read

ಬೆಳಗಾವಿ: ಎಣ್ಣೆ ಪಾರ್ಟಿ ಮಾಡುತ್ತಿದ್ದ ವೇಳೆ ಯುವಕ ಬಿಯರ್ ಕೇಳಿದಾಗ ಕೊಡಲಿಲ್ಲ ಎಂದು ಗೆಳೆಯರೇ ಆತನನ್ನು ಬಾಟಲಿಯಿಂದ ಹೊಡೆದು ಕೊಲೆ ಮಾಡಿದ ಅಮಾನುಷ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ನಗರದ ಆರ್.ಟಿ.ಒ ವೃತ್ತದ ಬಳಿ ಸಾಯಿ ಲಾಡ್ಜ್ ನಲ್ಲಿ ಈ ಘಟನೆ ನಡೆದಿದೆ. ಸಾಯಿ ಲಾಡ್ಜ್ ನಲ್ಲಿ ವೇಟರ್‍ ಗಳಾಗಿ ಕೆಲಸ ಮಾಡುತ್ತಿದ್ದ ಅಮಿತ್, ಶಶಿಕುಮಾರ್, ನವೀನ್ ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದ್ದು, ರೂಮ್ ಬಾಯ್ ವಿನಾಯಕ ಕಲಾಲ್ ಈ ಮೂವರು ಸೇರಿಕೊಂಡು ಕೊಲೆ ಮಾಡಿದ್ದಾರೆ. ಸಾಯಿ ಲಾಡ್ಜ್ ಮಾಲೀಕ ತಿಮ್ಮಪ್ಪ ಶೆಟ್ಟಿ ಭಾನುವಾರ ರಾತ್ರಿ ತಿರುಪತಿಗೆ ಹೋಗಿ ಬರುತ್ತೇನೆಂದು ಹೋಗಿದ್ದರು. ಹೀಗಾಗಿ ಮಾಲೀಕ ಹೋಗುತ್ತಿದ್ದ ಹಾಗೆ ಇತ್ತ ಫುಲ್ ಖುಷಿಯಲ್ಲಿ ಇಲ್ಲಿನ ಸಿಬ್ಬಂದಿ ಎಲ್ಲಾ ಸೇರಿಕೊಂಡು ಎಣ್ಣೆ ಪಾರ್ಟಿ ಶುರುಮಾಡಿದ್ದರು. ವಿನಾಯಕ, ಅಮಿತ್, ಶಶಿಕುಮಾರ್, ನವೀನ್ ನಾಲ್ಕು ಜನ ಸೇರಿಕೊಂಡು ಫುಲ್ ಟೈಟ್ ಆಗಿದ್ದರು.

ಈ ವೇಳೆ ವಿನಾಯಕ ಬಿಟ್ಟರೆ ಉಳಿದವರ ಮದ್ಯ ಖಾಲಿಯಾಯ್ತು. ಆಗ ವಿನಾಯಕನ ಬಳಿ ಶಶಿಕುಮಾರ್ ಬಿಯರ್‍ನ ಕೇಳಿದ್ದಾನೆ. ಆದರೆ ವಿನಾಯಕ ಕೊಡಲ್ಲ ಎಂದಿದ್ದೇ ತಡ ಮೂವರು ಸೇರಿ ಅವನ ಮೇಲೆ ಹಲ್ಲೆ ಮಾಡಿದ್ದಾರೆ. ನಶೆಯಲ್ಲಿ ಮದ್ಯದ ಬಾಟಲಿಯಿಂದಲೇ ಅವನನ್ನ ಹೊಡೆದು ಕೊಲೆ ಮಾಡಿದ್ದಾರೆ.

ಹತ್ಯೆ ಬಳಿಕ ರಾತ್ರಿ ಪೂರ್ತಿ ಲಾಡ್ಜ್ ನಲ್ಲಿಯೇ ಆರೋಪಿಗಳು ಮಲಗಿದ್ದು, ಸೋಮವಾರ ಬೆಳಗ್ಗೆ ನಶೆ ಇಳಿದ ಮೇಲೆ ತಮ್ಮ ತಪ್ಪಿನ ಅರಿವಾಗಿ ಅಮಿತ್ ಹಾಗೂ ನವೀನ್ ಪೊಲೀಸರಿಗೆ ಶರಣಾಗಿದ್ದಾರೆ. ಆದರೆ ಶಶಿಕುಮಾರ್ ಮಾತ್ರ ಎಸ್ಕೇಪ್ ಆಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಶಶಿಕುಮಾರ್‌ನನ್ನು ಬಂಧಿಸಲು ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *