ಬೆಳಗಾವಿ ಮನೆ ಗೋಡೆ ಕುಸಿದು 7 ಮಂದಿ ಸಾವು- 2 ಲಕ್ಷ ರೂ. ಪರಿಹಾರ ಘೋಷಿಸಿದ ಮೋದಿ

Public TV
1 Min Read

ನವದೆಹಲಿ: ಕರ್ನಾಟಕ ರಾಜ್ಯದ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಮಳೆಗೆ ಹಳೆ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಆರು ಮಂದಿ ಮತ್ತು ಪಕ್ಕದ ಮನೆಯ ಬಾಲಕಿ ಸೇರಿ ಏಳು ಮಂದಿ ಮೃತಪಟ್ಟ ಘಟನೆ ನಿನ್ನೆ ನಡೆದಿತ್ತು. ಘಟನೆ ಸಂಬಂಧಿಸಿದಂತೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು 2ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಬೆಳಗಾವಿಯಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ಹಳೆ ಗೋಡೆ ಒದ್ದೆ ಆಗಿತ್ತು. ಆ ಗೋಡೆ ಬೀಳುವುದನ್ನು ನೋಡಲು ಹೋಗಿದ್ದಾಗ ಈ ದುರಂತ ಸಂಭವಿಸಿತ್ತು. ಸುರೇಶ್ ಖಾನಗಾವಿ ಕುಟುಂಬದ ಲಕ್ಷ್ಮಿ ಅರ್ಜುನ್ ಖಾನಗಾವಿ(15), ಶಾಂತವ್ವ ಭೀಮಪ್ಪ ಖಾನಗಾವಿ(50), ಅರ್ಜುನ್ ಹನಮಂತ ಖಾನಗಾವಿ, ಸತ್ಯವ್ವ ಅರ್ಜುನ್ ಖಾನಗಾವಿ(45), ಪೂಜಾ ಅರ್ಜುನ್ ಖಾನಗಾವಿ(8), ಸವಿತಾ ಭೀಮಪ್ಪ ಖಾನಗಾವಿ(28) ಮತ್ತು ಪಕ್ಕದ ಮನೆಯ ಬಾಲಕಿ ಕಾಶವ್ವ ವಿಠ್ಠಲ ಕೊಳೆಪ್ಪನವರ(8) ಸಾವನ್ನಪ್ಪಿದ್ದರು. ಈ ಘಟನೆ ಬಗ್ಗೆ ಟ್ವಿಟ್ಟರ್‍ ನಲ್ಲಿ ಸಂತಾಪ ಸೂಚಿಸಿ 2 ಲಕ್ಷ ರೂ. ಪರಿಹಾರವನ್ನು ಮೋದಿ ಘೋಷಿಸಿದ್ದಾರೆ. ಇದನ್ನೂ ಓದಿ: ಗೋಡೆ ಕುಸಿಯೋದನ್ನು ನೋಡಲು ಹೋಗಿ 7 ಮಂದಿ ಸಾವು

ಸುರೇಶ್ ಖಾನಗಾವಿ ಕುಟುಂಬ ತಮ್ಮ ಹಳೆಯ ಮನೆಯನ್ನು ಬೀಳಿಸಿ ಹೊಸ ಮನೆ ಕಟ್ಟುವ ಸಿದ್ಧತೆಯಲ್ಲಿದ್ದರು. ಅದಕ್ಕಾಗಿಯೇ ಪಕ್ಕದಲ್ಲಿ ಶೆಡ್ ನಿರ್ಮಿಸಿಕೊಂಡು ಅಲ್ಲೇ ವಾಸವಾಗಿದ್ದರು. ಗೋಡೆ ಕುಸಿಯುತ್ತಿದ್ದಂತೆ ಪ್ರಾಣ ರಕ್ಷಣೆಗೆ ಓಡಿದರೂ ಪ್ರಾಣ ಉಳಿಯಲಿಲ್ಲ. ಅಂಗಡಿಗೆ ಹೋಗಿದ್ದ ಮನೆಯ ಯಜಮಾನ ಸುರೇಶ್ ಖಾನಗಾವಿ ಮತ್ತು ಇನ್ನೊಬ್ಬ ಪುತ್ರ ಮಾತ್ರ ಬದುಕುಳಿದಿದ್ದಾರೆ. ಘಟನೆ ಬಳಿಕ ಸುರೇಶ್ ಖಾನಗಾವಿಗೆ ದೂರವಾಣಿ ಕರೆ ಮಾಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ, ದುರಂತದ ಬಗ್ಗೆ ಮಾಹಿತಿ ಪಡೆದು ಸಂತಾಪ ತಿಳಿಸಿ ಧೈರ್ಯ ತುಂಬಿದರು. ಅಲ್ಲದೆ ಮೃತರ ಕುಟುಂಬಕ್ಕೆ ಬೊಮ್ಮಾಯಿ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು. ಇದನ್ನೂ ಓದಿ: ಲಖಿಂಪುರ್ ಖೇರಿ ಘಟನೆ ತನಿಖೆಗೆ ಏಕ ಸದಸ್ಯ ಆಯೋಗ ರಚನೆ

Share This Article
Leave a Comment

Leave a Reply

Your email address will not be published. Required fields are marked *