ಬೆಳಗಾವಿ, ಬಾಗಲಕೋಟೆ ಜೀವನಾಡಿ ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿ

Public TV
1 Min Read

ಚಿಕ್ಕೋಡಿ: ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜೀವನಾಡಿ ರಾಜಾ ಲಖಮಗೌಡ ಜಲಾಶಯ(ಹಿಡಕಲ್ ಡ್ಯಾಂ) ಸಂಪೂರ್ಣ ಭರ್ತಿಯಾಗಿದ್ದು, ಎರಡು ಜಿಲ್ಲೆಯ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ

ಘಟಪ್ರಭಾ ನದಿಗೆ ಅಡ್ಡಲಾಗಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದ ಬಳಿ ನಿರ್ಮಿಸಿರುವ ಈ ಡ್ಯಾಮ್ ಕಳೆದ 3 ವರ್ಷಗಳಿಂದ ಸಂಪೂರ್ಣವಾಗಿ ಭರ್ತಿಯಾಗಿರಲಿಲ್ಲ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ಭರ್ತಿ ಆಗುತ್ತಿದ್ದ ಜಲಾಶಯ ಎರಡು ತಿಂಗಳು ಅವಧಿಗೂ ಮುನ್ನವೇ ತನ್ನ ಒಡಲನ್ನು ತುಂಬಿಕೊಂಡಿದೆ.

ರಾಜಾ ಲಖಮಗೌಡ ಜಲಾಶಯ 51 ಟಿಎಂಸಿ ನೀರು ಸಂಗ್ರಹ ಹೊಂದಿದ್ದು, ಈಗ 50.70 ಟಿಎಂಸಿ ನೀರು ಸಂಗ್ರಹವಾಗಿದೆ. ಹೀಗಾಗಿ ಬುಧವಾರ ಸಂಜೆ 4 ಗಂಟೆಗೆ ಜಲಾಶಯದ 10 ಗೇಟ್‍ಗಳ ಮೂಲಕ ನೀರನ್ನು ಹರಿಬಿಡಲಾಗುತ್ತದೆ ಎಂದು ಅಧಿಕಾರಿಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಈಗಾಗಲೇ ಘಟಪ್ರಭಾ ನದಿ ಪಾತ್ರದ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರವಾಗುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಘಟಪ್ರಭಾ ನದಿ ಪಾತ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಕಾರಣ 10 ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಬೀಡುವ ಸಾಧ್ಯತೆಯಿದೆ. ಅಲ್ಲದೇ ಮುಖ್ಯ ಕಾಲುವೆ ಮೂಲಕ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಈಗಾಗಲೇ ನೀರು ಬೀಡಲಾಗಿದೆ. ಈ ವರ್ಷ ಹಿಡಕಲ್ ಜಲಾಶಯ ಭರ್ತಿ ಆಗಿರುವ ಹಿನ್ನೆಯಲ್ಲಿ ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿಗೆ ಬೇಸಿಗೆ ಕಾಲದವರೆಗೂ ಯಾವುದೇ ವ್ಯತ್ಯಯ ಆಗುವುದಿಲ್ಲ ಎನ್ನುವುದು ಸಂತಸ ತಂದಿದೆ.

Share This Article
Leave a Comment

Leave a Reply

Your email address will not be published. Required fields are marked *