ಬೆಳಗಾವಿ: ಗೌಂಡವಾಡದ ಯುವಕನ ಕೊಲೆ ಪ್ರಕರಣದ ಐವರು ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಬೆಳಗಾವಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.
ಗೌಂಡವಾಡ ಗ್ರಾಮದ ಭೈರವನಾಥ ದೇವಸ್ಥಾನ ಜಾಗ ಸಂಬಂಧ ಎರಡು ಗುಂಪುಗಳ ಮಧ್ಯೆ ಗಲಾಟೆಗಳು ನಡೆಯುತ್ತಿತ್ತು. ಭೈರವನಾಥ ದೇವಸ್ಥಾನ ಜಾಗದ ಪರ ಹೋರಾಟ ನಡೆಸುತ್ತಿದ್ದ ಸತೀಶ್ ಪಾಟೀಲನನ್ನು 18 ಸೆಪ್ಟೆಂಬರ್ 2022 ರಂದು ರಾತ್ರಿ ಮನೆ ಮುಂದೆ ಕೊಲೆ ಮಾಡಿದ್ದರು.
ಈ ಸಂಬಂಧ ಐವರಿಗೆ ಕಠಿಣ ಜೀವಾವಧಿ ಶಿಕ್ಷೆ, ಹಾಗೂ ತಲಾ ಎರಡು ಲಕ್ಷ ದಂಡವನ್ನು ಕೋರ್ಟ್ ವಿಧಿಸಿದ್ದು ಪ್ರಕರಣದ ನಾಲ್ವರು ಅಪರಾಧಿಗಳಿಗೆ ಸಾಮಾನ್ಯ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದೆ. ಮೂರು ವರ್ಷಗಳ ಕಾಲ ವಾದ ಪ್ರತಿವಾದ ಆಲಿಸಿ ಅಂತಿಮ ತೀರ್ಪುನ್ನು ಕೋರ್ಟ್ ಪ್ರಕಟಿಸಿದೆ. ಇದನ್ನೂ ಓದಿ: ಧರ್ಮಸ್ಥಳದ ಅಪಪ್ರಚಾರಕ್ಕೆ ಫಂಡಿಂಗ್ – ಸಮೀರ್ ವಿರುದ್ಧ ಐಟಿಗೆ ದೂರು ನೀಡಲು ಚಿಂತನೆ
ಬೆಳಗಾವಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರ ಕೆ.ಎನ್ ಅವರು ಈ ತೀರ್ಪು ಪ್ರಕಟಿಸಿದ್ದಾರೆ.
ಗೌಂಡವಾಡ ಗ್ರಾಮದ ಆನಂದ ರಾಮಾ ಕುಟ್ರೆ, ಅನರ್ವ್ ಕುಟ್ರೆ, ಜಾಯಪ್ಪ ನೀಲಜಕರ, ಮಹಾಂತೇಶ ನೀಲಜಕರ ಹಾಗೂ ಶಶಿಕಲಾ ಕುಟ್ರೆಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.