ರಾಜು ಕಾಗೆ ವಿರುದ್ಧ ತೊಡೆ ತಟ್ಟಿದ ವಿವೇಕ್ ಶೆಟ್ಟಿ

Public TV
1 Min Read

– ರಾಜು ಕುಟುಂಬದವ್ರಿಂದ ವಿವೇಕ್ ಮೇಲೆ ನಡೆದಿತ್ತು ಹಲ್ಲೆ

ಚಿಕ್ಕೋಡಿ(ಬೆಳಗಾವಿ): ಕಾಗವಾಡ ಮತಕ್ಷೇತ್ರದಲ್ಲಿ ಒಂದು ಕಡೆ ಚುನಾವಣಾ ಕಣ ರಂಗೇರುತ್ತಿದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳ ಸ್ಪರ್ಧೆ ಸಾಲದು ಅಂತ ಈಗ ದ್ವೇಷದ ರಾಜಕಾರಣಕ್ಕೂ ಈ ರಣಕಣ ಸಾಕ್ಷಿಯಾಗಲಿದೆ.

ಕಾಗವಾಡ ಕ್ಷೇತ್ರದ ಈಗಿನ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಕುಟುಂಬದವರಿಂದ ಹಲ್ಲೆ ನಡೆದು ಎರಡು ವರ್ಷಗಳೇ ಕಳೆದಿವೆ. ಅಂದು ಹಲ್ಲೆಗೊಳಗಾಗಿದ್ದ ಯುವಕ ವಿವೇಕ್ ಶೆಟ್ಟಿ ಈಗ ಉಪಚುನಾವಣೆಯಲ್ಲಿ ರಾಜು ಕಾಗೆ ಎದುರು ಸ್ಪರ್ಧೆಗಿಳಿದಿದ್ದಾರೆ. ಬಹುಜನ ವಂಚಿತ ಅಘಾಡಿ ಪಕ್ಷದಿಂದ ಸ್ಪರ್ಧೆಗಿಳಿದಿರುವ ವಿವೇಕ್ ಶೆಟ್ಟಿ, ರಾಜು ಕಾಗೆ ವಿರುದ್ಧ ತೊಡೆ ತಟ್ಟಿದ್ದಾರೆ.

ರಾಜು ಕಾಗೆ ಬಿಜೆಪಿ ಶಾಸಕರಾಗಿದ್ದ ಸಂದರ್ಭದಲ್ಲಿ ಕುಟುಂಬ ಸಮೇತ ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ಹಲ್ಲೆ ಮಾಡಿ ಜೈಲಿಗು ಕೂಡ ಹೋಗಿ ಬಂದಿದ್ದರು. ಇವರಿಂದ ಹಲ್ಲೆಗೊಳಗಾಗಿದ್ದ ಯುವಕ ಈಗ ರಾಜು ಕಾಗೆಯವರನ್ನು ಸೋಲಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಬಹುಜನ ವಂಚಿತ ಅಘಾಡಿ ಪಕ್ಷದಿಂದ ಸ್ಪರ್ಧೆ ಮಾಡಿ ದಲಿತ ಹಾಗೂ ಮುಸ್ಲಿಂ ಮತಗಳು ರಾಜು ಕಾಗೆ ಪಾಲಾಗದಂತೆ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ವಿವೇಕ್ ವಿರುದ್ಧ ರಾಜು ಕಾಗೆ ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ ಒಂದು ಕಡೆ ಕಾಂಗ್ರೆಸ್, ಬಿಜೆಪಿ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿದೆ. ಮತ್ತೊಂದು ಕಡೆ ಮತ್ತೆ ವಿವೇಕ್ ಶೆಟ್ಟಿ ಹಲ್ಲೆ ಪ್ರಕರಣ ಮೇಲೆ ಬಂದಿದೆ. ಶೆಟ್ಟಿ ಹಾಗೂ ಕಾಗೆ ಕುಟುಂಬದ ದ್ವೇಷದ ರಾಜಕಾರಣ ಮುಂದಿನ ದಿನಗಳಲ್ಲಿ ಯಾವ ಹಂತ ತಲುಪಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

https://www.youtube.com/watch?v=i9uLjb_O_5Y

Share This Article
Leave a Comment

Leave a Reply

Your email address will not be published. Required fields are marked *