ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ- ಸಂತ್ರಸ್ತೆ ಭೇಟಿ ನಿಷೇಧಿಸಿದ ಹೈಕೋರ್ಟ್

By
2 Min Read

ಬೆಂಗಳೂರು/ ಬೆಳಗಾವಿ: ಮಹಿಳೆ (Belagavi Woman) ಮೇಲಿನ ದೌರ್ಜನ್ಯ ಪ್ರಕರಣ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಇದೇ ಹೊತ್ತಲ್ಲಿ ಸಂತ್ರಸ್ತೆಯ ಭೇಟಿಗೆ ಹೈಕೋರ್ಟ್ (High Court) ನಿರ್ಬಂಧ ವಿಧಿಸಿದೆ.

ರಾಜಕಾರಣಿಗಳು ಸೇರಿ ಯಾರೇ ಆಗಲಿ ವೈದ್ಯರ ಲಿಖಿತ ಅನುಮತಿ ಇಲ್ಲದೇ ಸಂತ್ರಸ್ತೆಯನ್ನು ಭೇಟಿ ಮಾಡುವಂತಿಲ್ಲ. ಇದು ಕುಟುಂಬಸ್ಥರು, ಶಾಸನಬದ್ಧ ಸಂಸ್ಥೆ, ತನಿಖಾಧಿಕಾರಿಗಳಿಗೆ ಅನ್ವಯಿಸಲ್ಲ. ಹೀಗಾಗಿ ವೈದ್ಯರು, ಕುಟುಂಬಸ್ಥರು ಹಾಗೂ ತನಿಖಾಧಿಕಾರಿಗಳು ಮಾತ್ರ ಭೇಟಿ ಮಾಡಬಹುದು ಎಂದು ಸಿಜೆ ವರಾಳೆ ನೇತೃತ್ವದ ವಿಭಾಗೀಯ ಪೀಠ ಆದೇಶ ನೀಡಿದೆ.

ಪ್ರಕರಣ ಸಂಬಂಧ ಶುಕ್ರವಾರ ದೆಹಲಿಯಲ್ಲಿ ದನಿ ಎತ್ತಿದ್ದ ಬಿಜೆಪಿಗರು (BJP) ಶನಿವಾರ ಬೆಳಗಾವಿಗೆ ಭೇಟಿ ನೀಡಿದ್ದಾರೆ. ಸಂಸದೆ ಅಪರಾಜಿತಾ ಸಿಂಗ್ ನೇತೃತ್ವದ ಬಿಜೆಪಿ ಸತ್ಯಶೋಧನಾ ಸಮಿತಿ ಸದಸ್ಯರು ಸಂತ್ರಸ್ತೆಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ರು. ಘಟನೆಯ ಬಗ್ಗೆ ಮಾಹಿತಿ ಪಡೆದ್ರು. ಘಟನಾ ಸ್ಥಳಕ್ಕೂ ತೆರಳಿ ಪರಿಶೀಲಿಸಿದ್ರು. ಇದು ನಿಜಕ್ಕೂ ತಲೆ ತಗ್ಗಿಸುವ ಘಟನೆ. ಬೆಳಗಾವಿಲಿದ್ರೂ ಸಿಎಂ ಸೇರಿ ಯಾರು ಕೂಡ ಸಂತ್ರಸ್ತೆಯನ್ನು ಏಕೆ ಭೇಟಿ ಮಾಡ್ಲಿಲ್ಲ ಎಂದು ಆಕ್ರೋಶ ಹೊರಹಾಕಿದ್ರು.

ಈ ಹಲ್ಲೆ ಹಿಂದೆ ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿಗರ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 43ಸಾವಿರ ಕ್ರಿಮಿನಲ್ ಕೇಸ್ ದಾಖಲಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಿಡಿಕಾರಿದ್ರು. ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ಕೂಡ ಸಂತ್ರಸ್ತೆಯನ್ನು ಭೇಟಿ ಮಾಡಿದ್ರು. ಅಂದ ಹಾಗೇ, ಬಿಜೆಪಿ ಸಮಿತಿ ಬರೋ ಮುನ್ನವೇ ಅಂದ್ರೆ, ಶುಕ್ರವಾರ ರಾತ್ರಿಯೇ ಸಚಿವ ಸತೀಶ್ ಜಾರಕಿಹೊಳಿ ಬೀಮ್ಸ್ ಆಸ್ಪತ್ರೆಗೆ ದೌಡಾಯಿಸಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಿ, ಐದು ಲಕ್ಷ ಪರಿಹಾರದ ಚೆಕ್ ವಿತರಿಸಿದ್ರು.

ಒಟ್ಟಿನಲ್ಲಿ ಘಟನೆ ಕುರಿತು ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಬೀದಿಗೆ ಇಳಿದಿದ್ದರು. ಬೆಂಗಳೂರಿನಲ್ಲಿ ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಬಿಜೆಪಿಗರು ಈ ವಿಚಾರದಲ್ಲಿ ರಾಜಕೀಯ ಮಾಡ್ತಿದ್ದಾರೆ ಎಂದು ಸಿಎಂ ಮತ್ತು ಡಿಸಿಎಂ ಕಿಡಿಕಾರಿದ್ರು. ಈ ನಡುವೆ ಮತ್ತೆ ಮೂವರನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಓರ್ವ ಬಾಲಾಪರಾಧಿಯೂ ಇದ್ದಾನೆ. ಈ ಮೂಲಕ ಬಂಧಿತರ ಸಂಖ್ಯೆ 11ಕ್ಕೆ ಏರಿದೆ.

Share This Article