ಬಿಜೆಪಿ ಮಾತು ಕೇಳಿ ರಾಜೀನಾಮೆ ಕೊಡುವಷ್ಟು ದಡ್ಡರು ನಾವಲ್ಲ: ಮುನಿರತ್ನ

Public TV
1 Min Read

ಬೆಂಗಳೂರು: ಬಿಜೆಪಿ ಅವರಿಗೂ ನಮಗೂ ಸಂಬಂಧ ಇಲ್ಲ. ಬಿಜೆಪಿ ಮಾತು ಕೇಳಿ ರಾಜೀನಾಮೆ ಕೊಡುವಷ್ಟು ದಡ್ಡರು ನಾವಲ್ಲ ಎಂದು ಅನರ್ಹ ಶಾಸಕರ ಮುನಿರತ್ನ ಅವರು ಹೇಳಿದ್ದಾರೆ.

ಪಬ್ಲಿಕ್ ಟಿವಿ ನಡೆಸಿದ ಸಂದರ್ಶನದ ವೇಳೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಕಾಂಗ್ರೆಸ್ಸಿನ ಎಲ್ಲರಿಗೂ ಬೇಡವಾಗಿತ್ತು. ರಾಮಲಿಂಗಾ ರೆಡ್ಡಿ ಅವರು ಒತ್ತಡದಿಂದ ರಾಜೀನಾಮೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ. ಅವರು ಹಿರಿಯರು, ಕಾಂಗ್ರೆಸ್ ಪಕ್ಷ ಕಟ್ಟಿದವರು ಅವರನ್ನೂ ಮೂಲೆಗುಂಪು ಮಾಡಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಇದು ನಮಗೆ ಬೇಸರವಾಗಿದೆ. ಜೊತೆಗೆ ನಮ್ಮ ಕ್ಷೇತ್ರದ ಯಾವುದೇ ಅಭಿವೃದ್ಧಿಯಾಗಿಲ್ಲ. ಹೀಗಾಗಿ ರಾಜೀನಾಮೆ ಕೊಟ್ಟಿರುವುದಾಗಿ ತಿಳಿಸಿದರು.

ಬಿಜೆಪಿ ಅವರಿಗೂ ನಮಗೂ ಸಂಬಂಧ ಇಲ್ಲ. ಬಿಜೆಪಿ ಮಾತು ಕೇಳಿ ರಾಜೀನಾಮೆ ಕೊಡುವಷ್ಟು ದಡ್ಡರು ನಾವಲ್ಲ. ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದಿತ್ತು. ಆದರೆ ನಾವು ಧರ್ಮಸ್ಥಳದಲ್ಲಿ ತಣ್ಣೀರು ಸ್ನಾನ ಮಾಡಿ ದೇವರ ಮುಂದೆ ಪ್ರಮಾಣ ಮಾಡುತ್ತೇವೆ. ಬಿಜೆಪಿಯಿಂದ ಒಂದು ರೂಪಾಯಿಯನ್ನು ತೆಗೆದುಕೊಂಡಿಲ್ಲ. ನಾವು ಯಾರ ಬಳಿಯೂ ಹಣ ಪಡೆದಿಲ್ಲ. ಅಂತಹ ಜೀವನಕ್ಕೆ ನಾನು ಹೋಗಿಲ್ಲ ಎಂದರು.

ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ನಾನು ಯಾವತ್ತೂ ಹೇಳಿಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿ ಮಾಡಿಕೊಡುತ್ತೇನೆ ಎಂದು ಹೇಳಿದವರ ಜೊತೆ ಹೋಗುತ್ತೇವೆ. ಮುನಿರತ್ನ ಶಾಶ್ವತ ಅಲ್ಲ. ಮುನಿರತ್ನ ಮಾಡುವ ಕೆಲಸದ ಹೆಜ್ಜೆ ಗುರುತು ಬಿಟ್ಟು ಹೋಗಬೇಕು. ನನಗೆ ದೇವರು ಯಾವುದೇ ಕೊರತೆಯನ್ನು ಕೊಟ್ಟಿಲ್ಲ. ಜನರು ಬಯಸಿದರೆ ನಾನು ಶಾಸಕನಾಗಿಯೇ ಇರುತ್ತೇನೆ. ಇಲ್ಲವಾದರೆ ನಿರ್ಮಾಪಕನಾಗಿ ನಾನು ನನ್ನ ಕೆಲಸ ಮುಂದುವರಿಸುತ್ತೇನೆ ಎಂದು ಮುನಿರತ್ನ ಹೇಳಿದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕಳೆದ ಭಾನುವಾರ ಬೆಳಗ್ಗೆ 11.30ಕ್ಕೆ ತುರ್ತು ಸುದ್ದಿಗೋಷ್ಠಿ ಕರೆದು 14 ಮಂದಿ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಈ ಬೆನ್ನಲ್ಲೇ ಮಧ್ಯರಾತ್ರಿ 12.50ರ ಸುಮಾರಿಗೆ ಬೈರತಿ ಬಸವರಾಜು, ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಮುನಿರತ್ನ ಹಾಗೂ ಎಂಟಿಬಿ ನಾಗರಾಜ್ ಮುಂಬೈಯಿಂದ ಬೆಂಗಳೂರಿಗೆ  ಆಗಮಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *