ಸಂಜೆಯವರೆಗೂ ಚೆನ್ನಾಗಿದ್ದ ಅಂಬಿ ಮಂಡ್ಯ ಬಸ್ ದುರಂತಕ್ಕೆ ಮಮ್ಮಲ ಮರುಗಿ ಮೃತಪಟ್ಟರೇ?

Public TV
2 Min Read

ಬೆಂಗಳೂರು: ಮಂಡ್ಯದಲ್ಲಿ ನಡೆದ ಬಸ್ ಅಪಘಾತ ಸುದ್ದಿ ಕೇಳಿ ಆಘಾತವಾಗಿ ಬೇಸರಗೊಂಡು ಅಂಬರೀಶ್ ಮೃತಪಟ್ಟಿದ್ದಾರಾ ಎನ್ನುವ ಪ್ರಶ್ನೆಗೆ ಹೌದು ಎನ್ನುತ್ತಿದ್ದಾರೆ ಅಂಬಿ ಆಪ್ತರು.

ಮಂಡ್ಯದ ಗಂಡು ಎಂದೇ ಪ್ರಸಿದ್ಧವಾಗಿರುವ ಅಂಬರೀಶ್ ಅವರಿಗೆ ಜಿಲ್ಲೆಯ ಜನತೆಯ ಮೇಲೆ ಮೊದಲಿನಿಂದಲೂ ವಿಶೇಷ ಮಮತೆ. ಹೀಗಾಗಿ ಮಂಡ್ಯ ಕುರಿತ ಸುದ್ದಿ ಬಂದಾಗ ವಿಶೇಷವಾಗಿ ಗಮನಿಸುತ್ತಿದ್ದರು. ಶನಿವಾರ ಮಧ್ಯಾಹ್ನ ಬಸ್ ಅಪಘಾತಗೊಂಡು 30 ಮಂದಿ ಮೃತಪಟ್ಟದ್ದ ಸುದ್ದಿ ಕೇಳಿ ಅಂಬರೀಶ್ ಆಘಾತಗೊಂಡಿದ್ದಾರೆ.

ಅದರಲ್ಲೂ ಎಳೆಯ ಕಂದಮ್ಮಗಳು ಮೃತಪಟ್ಟಿದ್ದನ್ನು ನೋಡಿ ಮಮ್ಮಲ ಮರುಗಿದ್ದರು. ಈ ವಿಚಾರವಾಗಿ ಸಂಜೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡುವಾಗಲೂ ಅವರು ಗದ್ಗದಿತವಾಗಿ ಬೇಸರದಿಂದಲೇ ಪ್ರತಿಕ್ರಿಯಿಸಿದ್ದರು. ಮಂಡ್ಯ ಮಾತ್ರವಲ್ಲ, ಇಡಿ ಕರ್ನಾಟಕಕ್ಕೆ ಬೇಸರ ತರುವ ವಿಚಾರ. ಮನುಷ್ಯತ್ವ ಇರುವ ಯಾವುದೇ ವ್ಯಕ್ತಿಯಾದರೂ ಈ ದೃಶ್ಯಗಳನ್ನು ನೋಡಿದಾಗ ಮನಸ್ಸು ಕರಗುತ್ತದೆ ಎಂದು ಹೇಳಿದ್ದರು.

ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಮುಂದಾದರೆ ಕೆಲವರು ಪ್ರತಿಭಟನೆಗೆ ಇಳಿಯುತ್ತಾರೆ. ನೀರಾವರಿ ಭೂಮಿಯನ್ನು ರಸ್ತೆ ಕಾಮಗಾರಿಗೆ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಾರೆ. ಇಂತಹ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಚರ್ಚೆ ನಡೆಸಿ, ಮುಂದೆ ಇಂತಹ ಅನಾಹುತಗಳು ಆಗದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದ್ದರು.

ಅಪಘಾತದಲ್ಲಿ ಒಬ್ಬ ಬಾಲಕ ಹಾಗೂ ಯುವಕ ಬದುಕುಳಿದಿದ್ದಾರೆ. ಅಪಘಾತದ ಬಳಿಕ ಚಾಲಕ ಮತ್ತು ನಿರ್ವಾಹಕ ಬಸ್ ನಿಂದ ಹೊರ ಬಂದು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಚಾಲಕನ ತಪ್ಪಿದ್ದರೆ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಬೇಕು. ಹಳೇ ಬಸ್ ಗಳನ್ನು ಅಪಘಾತಕ್ಕೆ ಕಾರಣ ಎನ್ನುವುದು ಅವರಿಗೆ ಅರ್ಥ ಮಾಡಿಸಬೇಕು ಎಂದು ಅಂಬರೀಶ್ ಹೇಳಿದ್ದರು.

ರಾತ್ರಿಯ ಹೊತ್ತಿನಲ್ಲೂ ಆಪ್ತರ ಬಳಿ ಅಂಬರೀಶ್ ಅಪಘಾತದ ಸುದ್ದಿಯ ಬಗ್ಗೆ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದರು. ಮೊದಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಈ ಸುದ್ದಿ ಕೇಳಿ ಶಾಕ್ ಆಗಿದ್ದರಿಂದ ಅದು ನೇರ ದೇಹದ ಆರೋಗ್ಯದ ಮೇಲೆ ಪರಿಣಾಮ ಬಿದ್ದಿದೆ. ರಕ್ತದ ಒತ್ತಡ ಏರುಪೇರಾಗಿ ಹೃದಯಾಘಾತಕ್ಕೊಳಗಾಗಿ ಮನೆಯಲ್ಲೇ ಅಂಬರೀಶ್ ಕುಸಿದು ಬಿದ್ದಿದ್ದಾರೆ. ಕೂಡಲೇ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

ಆರೋಗ್ಯದಲ್ಲಿ ಏರುಪೇರು ಕಾಣುತ್ತಿದ್ದಂತೆ ಕೂಡಲೇ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅದು ಫಲ ನೀಡದೇ ಇದ್ದಾಗ ವಿಕ್ರಂ ಆಸ್ಪತ್ರೆಗೆ ರವಾನೆ. ಆಸ್ಪತ್ರೆಯ ವೈದ್ಯರು ಅಂಬರೀಶ್ ದೇಹವನ್ನು ನೋಡಿ ಪರೀಕ್ಷೆ ಮಾಡಿದ ಬಳಿಕ ಅಂಬಿ ಮನೆಯಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸುತ್ತಾರೆ.

ಪಬ್ಲಿಕ್ ಟಿವಿಯಲ್ಲಿ ಕೊನೆ ಮಾತು:
ನನಗೆ ಹುಷಾರಿಲ್ಲ.. ಇದೊಂದು ನಮಗೆ ತುಂಬಾ ವಿಷಾದದಾಯಕ ಘಟನೆ ನಡೆದಿರೋದು ಇಡೀ ಕರ್ನಾಟಕಕ್ಕೆ ಬೇಸರ ತಂದಿದೆ. ಬರೀ ಮಂಡ್ಯಕ್ಕೆ ಅಂತಾ ಮಾತ್ರ ಅಲ್ಲ ಇಡೀ ಕರ್ನಾಟಕಕ್ಕೆ. ಅಲ್ಲೆಲ್ಲಾ ನಾವು ನೀವು ಸೇರಿ, ಮೃತ ಕುಟುಂಬಕ್ಕೆ ಎಲ್ಲರೂ ಆ ದೇವರಲ್ಲಿ ಪ್ರಾರ್ಥನೆ ಮಾಡಿ, ಅವರಿಗೆಲ್ಲಾ ಕಳಕೊಂಡ ಅಣ್ಣ-ತಮ್ಮಂದಿರು ಇರಬಹುದು.. ಅಕ್ಕ-ತಂಗಿಯರು ಇರಬಹುದು.. ಅವರಿಗೆಲ್ಲಾ ಈ ದುಃಖ ತಡೆಯುವ ಶಕ್ತಿ ಕೊಟ್ಟು ಅವರಿಗೆಲ್ಲಾ ನಾಂದಿ ಹಾಡಲಿ.

https://www.youtube.com/watch?v=1-RXhwCH1KM

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *