ಡಬಲ್ ಬ್ಯಾರೆಲ್ ಗನ್‌ನಿಂದ ಶೂಟ್ ಮಾಡಿಕೊಂಡು BE ವಿದ್ಯಾರ್ಥಿ ಆತ್ಮಹತ್ಯೆ‌

Public TV
2 Min Read

ಬೆಂಗಳೂರು: ಮಗನಿಗೆ ಒಳ್ಳೆ‌ಯ ಭವಿಷ್ಯ ಕಲ್ಪಿಸಬೇಕು ಅಂತಾ ಆ ತಂದೆ-ತಾಯಿ ಹಗಲಿರುಳು ದುಡಿದು ಮಗನನ್ನ ಎಂಜಿನಿಯರಿಂಗ್ ಗೆ ಸೇರಿಸಿದ್ರು. ಹುಷಾರಿಲ್ಲ ಅಂತಾ ಎರಡು ದಿನ ಕಾಲೇಜಿಗೆ (College) ರಜೆ ಹಾಕಿದ್ದವನು ತಂದೆಯ ಡಬಲ್‌ ಬ್ಯಾರೆಲ್ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ರಿಶಿ ಉತ್ತಪ್ಪ (Rishi Uttappa) ಎಂದು ಗುರುತಿಸಲಾಗಿದ್ದು, ಈತ ಆರ್ ವಿ ಕಾಲೇಜಿನ ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ. ಬುಧವಾರ ಸಂಜೆ 6.30 ರ ಸುಮಾರಿಗೆ ತನ್ನ ತಾಯಿಗೆ ಕರೆ ಮಾಡಿದ್ದ ರಿಶಿ ಉತ್ತಪ್ಪ, ಸಾರಿ ಅಂತೇಳಿ ಕಾಲ್ ಕಟ್ ಮಾಡಿದ್ದ. ಟ್ರಾಫಿಕ್ ನಲ್ಲಿ ಮಾದನಾಯಕನಹಳ್ಳಿಯ ತಿರುಮಲಾಪುರದ ಮನೆ ಬಳಿ ಬರುವಷ್ಟರಲ್ಲಿ 9 ಗಂಟೆ ಆಗೋಗಿತ್ತು. ಬೆಲ್ ಮಾಡಿದಾಗ ಮನೆಯಿಂದ ಬಾಗಿಲು ತೆಗೆದಿದ್ದ ಮಗನ ನೋಡಿ ಕುಸಿದು ಹೋಗಿದ್ರು. ಮಗನ ಮೈಯಿಂದ ಸುರಿದ ರಕ್ತ ಇಡೀ ಮನೆಯಲ್ಲಿ ತೊಯ್ದುಹೋಗಿತ್ತು. ಅಯ್ಯೋ ದೇವ್ರೆ ಅಂತಾ ಹತ್ತಿರದ ಖಾಸಗಿ ಆಸ್ಪತ್ರೆಗೆ ತಂದೆ-ತಾಯಿಯೇ ಮಗನನ್ನ ಸೇರಿಸಿದ್ರು.

ಆಗಿದ್ದೇನು..?: ರಿಶಿ ಉತ್ತಪ್ಪ ತಂದೆ ರವಿ ತಿಮ್ಮಯ್ಯ ನೈಸ್ ಕಂಪನಿಯಲ್ಲಿ ಸೆಕ್ಯುರಿಟಿ ಕೆಲಸ ಮಾಡ್ತಿದ್ದಾರೆ. 20 ವರ್ಷಗಳ ಹಿಂದೆ ಕೊಡಗಿನಿಂದ ಬೆಂಗಳೂರಿಗೆ ಬಂದು ದುಡಿಯೋಕೆ ಶುರು ಮಾಡಿದ್ರು. ಸಹಜವಾಗೆ ಸೆಕ್ಯುರಿಟಿ ಕೆಲಸ ಆದ್ರಿಂದ ಇವರಿಗೆ ಲೈಸೆನ್ಸ್ಡ್ ಡಬಲ್ ಬ್ಯಾರೆಲ್ ಗನ್ ನೀಡಲಾಗಿತ್ತು. ಬುಧವಾರ ಸಂಜೆ ತಂದೆಯ ಡಬಲ್ ಬ್ಯಾರೆಲ್ ಗನ್ ನಿಂದ ರಿಶಿ ಉತ್ತಪ್ಪ ಎದೆಗೆ ಶೂಟ್ ಮಾಡಿಕೊಂಡಿದ್ದಾನೆ. ಸುಮಾರು 2 ಗಂಟೆ ರಕ್ತಸ್ರಾವವಾಗಿ ಆಸ್ಪತ್ರೆಗೆ ಕರೆತಂದ 10 ನಿಮಿಷದಲ್ಲೇ ಸಾವನ್ನಪ್ಪಿದ್ದಾನೆ.

ಸರಿಯಾಗಿ ಓದುತ್ತಿಲ್ಲ: ಇನ್ನೂ ಹೆಚ್ಚಿನ ಮಾರ್ಕ್ಸ್ ತೆಗಿ ಅಂತಾ ತಂದೆ ರವಿ ತಿಮ್ಮಯ್ಯ ಮಗನಿಗೆ ಬುದ್ದಿವಾದ ಹೇಳ್ತಿದ್ರಂತೆ. ಕಳೆದ ಎರಡು ದಿನ ಹುಷಾರಿಲ್ಲ ಅಂತಾ ರಜೆ ಹಾಕಿದ್ದವನು ಇದ್ದಕ್ಕಿದ್ದಂತೆ ಶೂಟ್ ಮಾಡಿಕೊಂಡಿದ್ದಾನೆ. ಮಗನ ಭವಿಷ್ಯ ಚೆನ್ನಾಗಿರಲಿ ಅಂತಾ ಬುದ್ಧಿವಾದ ಹೇಳಿದ ತಂದೆ-ತಾಯಿ, ಇದ್ದ ಒಬ್ಬ ಮಗನನ್ನ ಕಳೆದುಕೊಂಡು ಅನಾಥವಾಗಿದ್ದಾರೆ. ಸದ್ಯ ಈ ಬಗ್ಗೆ ಘಟನೆಯ ಮರುಸೃಷ್ಟಿ ನಡೆಸಿರುವ ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಅದೆಂತದ್ದೇ ಕಷ್ಟವಿರಲಿ. ಯಾವ ಮಕ್ಕಳೂ ಕೂಡ ಇಂಥ ದುಸ್ಸಾಹಸಕ್ಕೆ ಕೈ ಹಾಕಬೇಡಿ.

Share This Article