ಕುಮಾರಸ್ವಾಮಿ ಕೆಟ್ಟ ಮುಖ್ಯಮಂತ್ರಿಯಾಗಿದ್ದರು, ಬಿಎಸ್‍ವೈ ಸಿಎಂ ಆದ ಮೇಲೆ ಶನಿ ಹರಿದಿದೆ – ಬಿ.ಸಿ.ಪಾಟೀಲ್

Public TV
1 Min Read

ಹಾವೇರಿ: ಕುಮಾರಸ್ವಾಮಿ ಒಬ್ಬ ಕೆಟ್ಟ ಮುಖ್ಯಮಂತ್ರಿ. ಬಿಎಸ್‍ವೈ ಸಿಎಂ ಆದ ನಂತರ ರಾಜ್ಯದ ಶನಿ ಹರಿದುಹೋಗಿದೆ ಎಂದು ಹೇಳುವ ಮೂಲಕ ಎಚ್‍ಡಿಕೆಯವರನ್ನು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಪರೋಕ್ಷವಾಗಿ ಶನಿ ಎಂದು ಕಿಡಿ ಕಾರಿದ್ದಾರೆ.

ಹಿರೇಕೆರೂರಿನ ರಟ್ಟಿಹಳ್ಳಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರ ಬಳಿ ಕ್ಷೇತ್ರದ ನೀರಾವರಿ ಯೋಜನೆಗೆ ಅನುದಾನ ಕೇಳಿದರೆ 14 ತಿಂಗಳಾದರೂ ಹಣ ಕೊಡಲಿಲ್ಲ. ಆದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದಾಗ ಮಂಡ್ಯ ಜಿಲ್ಲೆ ಅಭಿವೃದ್ಧಿಗೆ 8 ಸಾವಿರ ಕೋಟಿ ರೂ. ಕೊಡುತ್ತೇನೆ ಅಂತ ಹೇಳಿದ್ದರು ಎಂದು ವಾಗ್ದಾಳಿ ನಡೆಸಿದರು.

ಹಾವೇರಿ ಜಿಲ್ಲೆಗೆ 1 ಸಾವಿರ ಕೋಟಿ ರೂ. ಅನುದಾನ ನೀಡಲು ಸಹ ಹಣ ಇಲ್ಲ ಎಂದರು. ಹೀಗಾಗಿ ನಾನು ಮೈತ್ರಿ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ನಾನು ರಾಜೀನಾಮೆ ಕೊಟ್ಟಿದ್ದು ಸರಿಯೇ ಎಂದು ಇದೇ ಸಂದರ್ಭದಲ್ಲಿ ನೆರೆದಿದ್ದ ಜನರನ್ನು ಕೇಳಿದರು.

ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಹಾಡಿ ಹೊಗಳಿದ ಬಿ.ಸಿ.ಪಾಟೀಲ್, ಬಿಎಸ್‍ವೈ ನಮಗೆ ಕಾಮಧೇನು ಆಗಿದ್ದಾರೆ. ಅವರು ಈ ಹಿಂದೆ ಹಿರೇಕೆರೂರಿಗೆ ಬಂದಾಗ ಅಂದು ನಾನು ಬಿಜೆಪಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡೆ. ಕಳೆದ 14ರಂದು ನಾನು ಬಿಜೆಪಿ ಸೇರಿದ್ದೇನೆ. ಇಂದು 10ನೇ ದಿನದ ಸಂಸಾರ ನನ್ನದು. ಯುದ್ಧ ಪ್ರಾರಂಭವಾಗಿದೆ. ಹೀಗಾಗಿ ನಾನು ಎಲ್ಲರನ್ನೂ ಭೇಟಿಯಾಗಲು ಆಗುತ್ತಿಲ್ಲ. ಇದೊಂದು ಮಹಾಪರ್ವ. ನಾನು ಯು.ಬಿ ಬಣಕಾರ ಒಂದೇ ವೇದಿಕೆಯಲ್ಲಿ ಬರುತ್ತೇವೆ ಎಂದುಕೊಂಡಿರಲಿಲ್ಲ. ಕಳೆದ 16 ತಿಂಗಳಿನಲ್ಲಿ ನಮ್ಮ ತಾಲೂಕಿಗೆ ವಿಪರೀತ ತಾರತಮ್ಯ ಆಯಿತು. ಸಮ್ಮಿಶ್ರ ಸರ್ಕಾರ 6-8 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *