ಬಿಬಿಎಂಪಿ ಹೊಸ ಮಾರ್ಗಸೂಚಿ – 10ಕ್ಕಿಂತ ಹೆಚ್ಚು ಕೇಸ್ ಬಂದ್ರೆ ಅಪಾರ್ಟ್‍ಮೆಂಟ್ ಸೀಲ್‍ಡೌನ್

Public TV
2 Min Read

ಬೆಂಗಳೂರು: ನಗರದಲ್ಲಿ ಕೊರೊನಾ ತನ್ನ ಕರಿ ನೆರಳನ್ನು ಮತ್ತೆ ಚಾಚುತ್ತಿದೆ. ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಾರ್ಟ್‍ಮೆಂಟ್ ಮತ್ತು ವಸತಿ ನಿಲಯಗಳಿಗೆ ಬಿಬಿಎಂಪಿ ಮಾರ್ಗಸೂಚಿ ಪ್ರಕಟಿಸಿದೆ.

ಇನ್ಮುಂದೆ ಅಪಾರ್ಟ್‍ಮೆಂಟ್‌ಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಗರಿಷ್ಠ 50 ಮಂದಿ ಭಾಗಿಯಾಗಬೇಕು ಎಂದು ತಿಳಿಸಿದೆ. ಅಪಾರ್ಟ್‍ಮೆಂಟ್‍ನ ಜಿಮ್, ಸ್ವಿಮ್ಮಿಂಗ್, ಮೈದಾನಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. ಪರಿಶೀಲನೆಗೆ ಮಾರ್ಷಲ್‍ಗಳು ಬರುತ್ತಾರೆ ಎಂದು ಸ್ಪಷ್ಟಪಡಿಸಿದೆ. 3ಕ್ಕಿಂತ ಹೆಚ್ಚು ಕೇಸ್ ಪತ್ತೆಯಾದ್ರೆ ಇಡೀ ಮಹಡಿ ಸೀಲ್‍ಡೌನ್ ಆಗಲಿದೆ. 10ಕ್ಕಿಂತ ಹೆಚ್ಚು ಕೇಸ್ ಬಂದ್ರೆ ಅಪಾರ್ಟ್‍ಮೆಂಟ್ ಲಾಕ್ ಆಗಲಿದ್ದು, ಟೆಂಪರೇಚರ್ ಟೆಸ್ಟ್, ಸ್ಯಾನಿಟೈಸೇಷನ್ ಕಡ್ಡಾಯಗೊಳಿಸಲಾಗಿದೆ. ಇದನ್ನೂ ಓದಿ: ಲೋಕಲ್ ಕಂಟೈನ್ಮೆಂಟ್‍ಗೆ ಮೋದಿ ಸಲಹೆ

ರಾಜ್ಯದಲ್ಲಿ ಕೊರೋನಾ ರಣಾರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪರಿಣಾಮ ಇಂದು ರಾಜ್ಯದಲ್ಲಿ ಹೊಸ ಕೇಸ್‍ಗಳ ಸಂಖ್ಯೆ 25 ಸಾವಿರ ದಾಟಿದೆ. ಇಂದು 25,005 ಹೊಸ ಕೇಸ್ ಬಂದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ ಒಂದು ಲಕ್ಷ ದಾಟಿದೆ. ಪಾಸಿಟಿವಿಟಿ ರೇಟ್ ಶೇಕಡಾ 12 ದಾಟಿದ್ದು ಕಳವಳಕ್ಕೆ ಕಾರಣವಾಗಿದೆ. ಬೆಂಗಳೂರಲ್ಲಿ 18,374 ಮಂದಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿಂದು 8 ಸೋಂಕಿತರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಸ್ಫೋಟ – ಒಂದೇ ದಿನ 25 ಸಾವಿರ ಮಂದಿಗೆ ಸೋಂಕು

ಸಿಎಂ ಬೊಮ್ಮಾಯಿ, ಸಚಿವರಾದ ಅಶೋಕ್, ಮಾಧುಸ್ವಾಮಿ, ಎಸ್‍ಟಿ ಸೋಮಶೇಖರ್ ಬಳಿಕ ಈಗ ಕ್ರೀಡಾ ಸಚಿವ ನಾರಾಯಣಗೌಡರಿಗೂ ಸೋಂಕು ವಕ್ಕರಿಸಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಯಚೂರಿನಲ್ಲಿ ಶಾಸಕ ಡಾ.ಶಿವರಾಜ್ ಪಾಟೀಲ್, ಎಂಎಲ್‍ಸಿ ಶರಣಗೌಡ ಬಯ್ಯಾಪುರಗೂ ಕೋವಿಡ್ ದೃಢಪಟ್ಟಿದೆ. ವೈದ್ಯಕೀಯ ಸಿಬ್ಬಂದಿಯಲ್ಲೂ ಸೋಂಕು ಕಾಣಿಸತೊಡಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ 10 ಕೇಸ್ ಬಂದಿವೆ. ಹೀಗಾಗಿ ಜಿಲ್ಲಾಸ್ಪತ್ರೆ ಪ್ರವೇಶಕ್ಕೆ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಇದನ್ನು ರೋಗಿಗಳ ಸಂಬಂಧಿಕರು ವಿರೋಧಿಸಿ ಗಲಾಟೆ ನಡೆಸಿದ್ದಾರೆ. ತುಮಕೂರು ಜಿಲ್ಲಾ ಸರ್ಜನ್‍ಗೆ ಕೋವಿಡ್ ಬಂದಿದೆ. ಕೆಂಪೇಗೌಡ ಏರ್ಪೋಟ್‍ನಲ್ಲಿ ಪ್ರಯಾಣಿಕರನ್ನು ಟೆಸ್ಟ್ ಮಾಡ್ತಿದ್ದ ನಾಲ್ವರು ಸಿಬ್ಬಂದಿಗೆ ಕೊರೊನಾ ಕಾಣಿಸಿಕೊಂಡಿದೆ. ಶಾಲೆಗಳಲ್ಲಿ ಸೋಂಕು ಸ್ಫೋಟ ಮುಂದುವರೆದಿದೆ. ಗದಗದ ಹುಲಕೋಟಿಯಲ್ಲಿ ವಸತಿ ಶಾಲೆ ಬಂದ್ ಆಗಿದೆ. ಹಂಪಿ ಸಮೀಪದ ಹೊಟೇಲ್ ಒಂದು ಸೀಲ್‍ಡೌನ್ ಆಗಿದೆ. ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ರದ್ದಾಗಿದೆ. 3 ದಿನಗಳ ಕಾಲ ಅಂಜನಾದ್ರಿ ಬೆಟ್ಟಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ. ಈ ಮಧ್ಯೆ, ಮುಂಜಾಗ್ರತಾ ಕ್ರಮವಾಗಿ ಹೋಂ ಕ್ವಾರಂಟೈನ್‍ನಲ್ಲಿದ್ದ ಸುಧಾಕರ್‌ಗೆ ನೆಗೆಟೀವ್ ರಿಪೋರ್ಟ್ ಬಂದಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಮಾಧ್ಯಮ ಪ್ರತಿನಿಧಿಗಳಿಗೂ ಬೂಸ್ಟರ್ ಡೋಸ್ ನೀಡೋದಾಗಿ ಆರೋಗ್ಯ ಸಚಿವರು ಘೋಷಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಪ್ರಕರಣ ಹೆಚ್ಚಲು ಕಾಂಗ್ರೆಸ್ ಪಾದಯಾತ್ರೆಯೂ ಕಾರಣ‌: ಸಚಿವ ಸುಧಾಕರ್

Share This Article
Leave a Comment

Leave a Reply

Your email address will not be published. Required fields are marked *