ಬೆಂಗಳೂರು: ಹೈಕೋರ್ಟ್ ಆದೇಶವನ್ನು ಬಿಬಿಎಂಪಿ ಬಂಡವಾಳ ಮಾಡಿಕೊಂಡಿತೇ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈಗ ಬಿಬಿಎಂಪಿ ಅಧಿಕಾರಿಗಳು 10 ಕಿ.ಮೀ ರಸ್ತೆ ಗುಂಡಿಗಳನ್ನು ಮುಚ್ಚಲು 1,700 ಕೋಟಿ ರೂ. ಬೇಕಾಗುತ್ತದೆ ಎಂದಿದ್ದಾರಂತೆ.
ಬೆಂಗಳೂರು ನಗರದ ರಸ್ತೆಗುಂಡಿ ಮುಚ್ಚಿಸಲು ಮುಂದಿನ ಎರಡು ವರ್ಷಕ್ಕೆ 1,700 ಕೋಟಿ ರೂ. ಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಭಾರೀ ಬೇಡಿಕೆ ಇಟ್ಟಿದ್ದಾರಂತೆ. ಈ ಮೂಲಕ ರಸ್ತೆ ಗುಂಡಿ ಮುಚ್ಚುವ ನೆಪದಲ್ಲಿ ಬಿಬಿಎಂಪಿ ಬೊಕ್ಕಸವನ್ನು ಬರಿದು ಮಾಡುವುದಕ್ಕೆ ಅಧಿಕಾರಿಗಳು ಮುಂದಾದ್ರಾ ಎನ್ನುವ ಶಂಕೆ ವ್ಯಕ್ತವಾಗಿದೆ.
ಬಿಬಿಎಂಪಿ ಅಧಿಕಾರಿಗಳು ನಾಳೆ(ಶನಿವಾರ) ಹೈಕೋರ್ಟ್ಗೆ ಎಷ್ಟು ಗುಂಡಿ ಮುಚ್ಚಿದ್ದಾರೆ ಅಂತಾ ಲೆಕ್ಕ ನೀಡಲಿದ್ದಾರೆ. ಈ ವೇಳೆ ಗುಂಡಿ ಮುಚ್ಚಲು ಮುಂದಿನ ಎರಡು ವರ್ಷಕ್ಕೆ ಬೇಕಾಗುವ ವೆಚ್ಚದ ಕುರಿತು ಪ್ರಸ್ತಾಪ ಮಾಡಲಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಎಲ್ಲಲ್ಲಿ ಎಷ್ಟು ಗುಂಡಿಗಳು?:
ರಸ್ತೆ ಗುಂಡಿಗಳ ಕುರಿತು ಕೋರ್ಟ್ ಲೆಕ್ಕ ಕೇಳುತ್ತಿದ್ದಂತೆಯೇ ಆತುರವಾಗಿ ಅಧಿಕಾರಿಗಳು ಕೇವಲ 52 ಅಂತಾ ತಿಳಿಸಿದ್ದರು. ಆದರೆ ಅವುಗಳ ಸಂಖ್ಯೆ ಈಗ 798ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ಸೆಪ್ಟೆಂಬರ್ 24ರಿಂದ ಅಕ್ಟೋಬರ್ 1ರವರೆಗೆ ಗುರುತಿಸಿದ ಹೊಸ ಪಟ್ಟಿಯ ಪ್ರಕಾರ ನಗರದಲ್ಲಿ ಹಳೇ ಗುಂಡಿ ಸೇರಿದಂತೆ ಒಟ್ಟು 850 ಗುಂಡಿಗಳಿವೆ.
ಬೆಂಗಳೂರು ಪೂರ್ವ, ಪಶ್ಚಿಮ, ಬೊಮ್ಮನಹಳ್ಳಿ, ದಾಸರಹಳ್ಳಿ, ಮಹದೇವಪುರ ವಲಯದಲ್ಲಿ ರಸ್ತೆ ಗುಂಡಿಗಳೇ ಇಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ದಕ್ಷಿಣ ವಲಯದಲ್ಲಿ 183, ರಾಜರಾಜೇಶ್ವರಿ ನಗರ ವಲಯದಲ್ಲಿ 350, ಯಲಹಂಕ ವಲಯದಲ್ಲಿ 71, ಮುಖ್ಯ ರಸ್ತೆಗಳಲ್ಲಿ 194 ಗುಂಡಿಗಳಿವೆ ಅಂತಾ ಬಿಬಿಎಂಪಿ ಲೆಕ್ಕ ಹಾಕಿದೆ. ಈವರೆಗೆ ಕೇವಲ 314 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, 536 ರಸ್ತೆ ಗುಂಡಿಗಳನ್ನು ಮುಚ್ಚಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
ಹೈಕೋರ್ಟ್ ಹೇಳಿದ್ದೇನು?:
ಬೆಂಗಳೂರು ನಗರದಲ್ಲಿರುವ ರಸ್ತೆ ಗುಂಡಿಗಳನ್ನು ಸೆಪ್ಟೆಂಬರ್ 24ರೊಳಗೆ ಮುಚ್ಚಬೇಕು ಅಂತಾ ಹೈಕೋರ್ಟ್ ಬಿಬಿಎಂಪಿಗೆ ಖಡಕ್ ಎಚ್ಚರಿಕೆ ನೀಡಿತ್ತು. ಬಿಬಿಎಂಪಿ ಮೇಲೆ ಛೀಮಾರಿ ಹಾಕಿದ್ದ ಹೈಕೋರ್ಟ್ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಬಿಬಿಎಂಪಿಯನ್ನೇ ಮುಚ್ಚಿ ಎಂದು ಚಾಟಿ ಬೀಸಿತ್ತು. ಕಾಂಟ್ರಾಕ್ಟರ್ ಮತ್ತು ಎಂಜಿನಿಯರ್ ಗಳ ಹೆಸರು ಕೊಡಿ ಎಂದು ಕೂಡ ನ್ಯಾಯಾಲಯ ಹೇಳಿತ್ತು. ಇದರಿಂದ ಎಚ್ಚೆತ್ತ ಬಿಬಿಎಂಪಿ ರಾತ್ರಿ-ಹಗಲು ಎನ್ನದೆ ರಸ್ತೆ ಗುಂಡಿಗಳನ್ನು ಮುಚ್ಚಲು ಹರಸಾಹಸ ಪಟ್ಟಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv