ಲಂಚ ಸ್ವೀಕರಿಸೋವಾಗ ಬಹಿರಂಗವಾಗಿ ಎಸಿಬಿಗೆ ಸಿಕ್ಕಿ ಬಿದ್ದ ಕೈ ಪಾಲಿಕೆ ಸದಸ್ಯ

Public TV
1 Min Read

ಬೆಂಗಳೂರು: ಬಿಬಿಎಂಪಿ ಪಾಲಿಕೆ ಸದಸ್ಯ, ಸಿಎಂ ಸಿದ್ದರಾಮಯ್ಯ ಆಪ್ತ ಜಿ.ಕೃಷ್ಣಮೂರ್ತಿ ಬಹಿರಂಗವಾಗಿಯೇ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

10 ಲಕ್ಷ ಲಂಚವನ್ನು ತನ್ನ ನಿವಾಸದಲ್ಲಿ ಸ್ವೀಕರಿಸುವ ವೇಳೆ ಜಿ. ಕೃಷ್ಣಮೂರ್ತಿ ಮತ್ತು ಸಹಾಯಕ ಎಂಜಿನಿಯರ್ ಇಬ್ಬರೂ ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಹೇಗಾಯ್ತು?
ರಾಜಾಜಿನಗರ ವಾರ್ಡ್‍ನಲ್ಲಿ ಅಭಿವೃದ್ಧಿಯ ಕಾಮಗಾರಿ ನಡೆಸಿದ್ದಕ್ಕೆ ಗುತ್ತಿಗೆದಾರ ಧನಂಜಯ ನಾಯ್ಡು ಅವರಿಗೆ 3 ಕೋಟಿ ರೂ. ಬಿಲ್ ಬಾಕಿ ಇತ್ತು. ಬಿಲ್ ಪಾವತಿಗೆ ಅನುಮೋದನೆ ಕೊಡಲು ಕೃಷ್ಣಮೂರ್ತಿ 23 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಲಂಚಕ್ಕೆ ಬೇಡಿಕೆ ಇಟ್ಟ ವಿಚಾರವನ್ನು ಧನಂಜಯ್ ಎಸಿಬಿಗೆ ತಿಳಿಸಿದ್ದರು. ಅದರಂತೆ ಇಂದು ಎಸಿಬಿ ಎಸ್‍ಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿ 10 ಲಕ್ಷ ರೂ. ಲಂಚ ಸ್ವೀಕರಿಸುವಾಗ ಪಾಲಿಕೆ ಸದಸ್ಯ ಕೃಷ್ಣ ಮೂರ್ತಿ  ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ವಾರ್ಡ್ 99 ರಲ್ಲಿ ನಡೆದಿದ್ದ ಕಾಮಗಾರಿಯ ಬಿಲ್ ಕ್ಲಿಯರ್ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ದಾಳಿ ವೇಳೆ 15 ಲಕ್ಷ ಹಣ ಪತ್ತೆಯಾಗಿದೆ.  ಕೃಷ್ಣ ಮೂರ್ತಿ ಹಾಗೂ ಬಿಬಿಎಂಪಿ ಎಇ ಕೆಎಂ ಕೃಷ್ಣ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ಧನಂಜಯ್ ಎಸಿಬಿಗೆ ದೂರು ನೀಡಿದ್ದರು. ಮೊದಲ ಕಂತಿನ  ಹಣ ನೀಡುವಾಗ ಇವರು ಸಿಕ್ಕಿ ಬಿದ್ದಿದ್ದಾರೆ ಎಂದು ಎಸಿಬಿ ಐಜಿಪಿ ಶರತ್ ಚಂದ್ರ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *