ಬಟಿಂಡಾ ಸೇನಾ ನೆಲೆಯಲ್ಲಿ ಗುಂಡಿನ ದಾಳಿ – ಮೃತಪಟ್ಟವರಲ್ಲಿ ಇಬ್ಬರು ಕರ್ನಾಟಕದವರು

Public TV
2 Min Read

ಚಂಡೀಗಢ: ಪಂಜಾಬ್‍ನ ಬಟಿಂಡಾ ಸೇನಾ ನೆಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಹುತಾತ್ಮರಾಗಿದ್ದರು. ಅವರಲ್ಲಿ ಇಬ್ಬರು ಕರ್ನಾಟಕದ ಯೋಧರು (Army Soldiers) ಸೇರಿದ್ದಾರೆ.

ಮೃತರನ್ನು ಕರ್ನಾಟಕದ (Karnataka) ಸಾಗರ್ ಬಣ್ಣೆ (25) ಮತ್ತು ಸಂತೋಷ್ ಎಂ ನಾಗರಾಳ್ (25), ತಮಿಳುನಾಡಿನ (Tamil Nadu) ಯೋಗೇಶ್ ಕುಮಾರ್ ಜೆ (24) ಮತ್ತು ಕಮಲೇಶ್ ಆರ್ (24) ಎಂದು ಗುರುತಿಸಲಾಗಿದೆ. ಬುಧವಾರ ನಸುಕಿನ ವೇಳೆಯಲ್ಲಿ ಅನಾಮಿಕ ದಾಳಿಕೋರರು ಪಂಜಾಬ್‍ನ ಬಟಿಂಡಾ ಸೇನಾ ನೆಲೆಯಲ್ಲಿ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಕರ್ನಾಟಕದ ಇಬ್ಬರು ಮತ್ತು ಇನ್ನಿಬ್ಬರು ತಮಿಳುನಾಡಿನ ಮೂಲದವರು ಮೃತಪಟ್ಟಿದ್ದರು.

ಗುಂಡಿನ ಸದ್ದು ಕೇಳಿದೊಡನೆಯೇ ಇಬ್ಬರು ಸೇನಾ ಅಧಿಕಾರಿಗಳು ಬ್ಯಾರೆಕ್‍ನತ್ತ ಧಾವಿಸಿದ್ದರು. ಒಳಗೆ ಹೋಗಿ ನೋಡಿದಾಗ ಸಾಗರ್ ಹಾಗೂ ಯೋಗೇಶ್ ಅವರ ಮೃತದೇಹಗಳು ಕಂಡುಬಂದಿವೆ. ಮತ್ತೊಂದು ಕೋಣೆಯಲ್ಲಿ ಸಂತೋಷ್ ಹಾಗೂ ಕಮಲೇಶ್ ಅವರ ಮೃತದೇಹಗಳು ಪತ್ತೆಯಾಗಿದ್ದವು. ಮೃತದೇಹಗಳ ಮೇಲೆ ಗುಂಡಿನ ಗುರುತುಗಳಿದ್ದವು ಎಂದು ಎಫ್‍ಐಆರ್‌ನಲ್ಲಿ ದಾಖಲಾಗಿದೆ.

ಗುಂಡಿನ ದಾಳಿ ಬಳಿಕ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಬ್ಯಾರೆಕ್‍ನಿಂದ ಹೊರಬರುತ್ತಿದ್ದುದ್ದನ್ನು ಸೈನಿಕರೊಬ್ಬರು ನೋಡಿದ್ದಾರೆ. ಈ ಪೈಕಿ ಒಬ್ಬಾತ ಇನ್ಸಾಸ್ ರೈಫಲ್ ಹಿಡಿದಿದ್ದ. ಮತ್ತೊಬ್ಬನ ಕೈಯಲ್ಲಿ ಕೊಡಲಿ ಇತ್ತು ಎಂಬುದಾಗಿ ಸೈನಿಕರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ತಿಳಿದ ತಕ್ಷಣ ಕ್ಷಿಪ್ರ ಕಾರ್ಯಾಚರಣೆ ಸೇನಾ ಪಡೆಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೊಂಡಿದ್ದವು. ಠಾಣೆಯ ಮೇಲೆ ದಾಳಿ ನಡೆಸಿದವರು ಯಾರು ಎಂದು ಇನ್ನೂ ಪತ್ತೆ ಆಗಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗುಂಡುಗಳನ್ನು ತುಂಬಿದ್ದ ಇನ್ಸಾಸ್ ರೈಫಲ್ ಎರಡು ದಿನಗಳ ಹಿಂದೆ ಕಾಣೆಯಾಗಿತ್ತು. ಇದನ್ನು ಬಳಸಿ ದಾಳಿ ನಡೆಸಿರುವ ಸಾಧ್ಯತೆ ಇದೆ. ತನಿಖಾ ತಂಡವೊಂದು ಇನ್ಸಾಸ್ ರೈಫಲ್ ಹಾಗೂ ಗುಂಡುಗಳನ್ನು ಪತ್ತೆ ಹಚ್ಚಿದೆ. ಪಂಜಾಬ್ ಪೊಲೀಸರ ಜೊತೆಗೆ ವಿಚಾರಣಾ ನ್ಯಾಯಾಲಯವು (ಸಿಒಐ) ಘಟನೆ ಕುರಿತು ತನಿಖೆ ಕೈಗೊಳ್ಳಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೃಷಿಪತ್ತಿನ ಸೊಸೈಟಿಗಳಿಗೆ ಪೆಟ್ರೋಲ್‌, ಎಲ್‌ಪಿಜಿ ಬಂಕ್‌ ಏಜೆನ್ಸಿ

ಸೇನೆಯ ನೈರುತ್ಯ ಕಮಾಂಡ್ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಘಟನೆಯಲ್ಲಿ ಫಿರಂಗಿ ದಳದ ನಾಲ್ವರು ಸೈನಿಕರು ಗುಂಡೇಟುಗಳಿಗೆ ಬಲಿಯಾಗಿದ್ದಾರೆ. ಘಟನೆಯಲ್ಲಿ ಬೇರೆ ಯಾವುದೇ ಸಿಬ್ಬಂದಿ ಗಾಯಗೊಂಡಿಲ್ಲ ಜೊತೆಗೆ ಯಾವುದೇ ಆಸ್ತಿಗೂ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಎಂತಹ ನಾಯಕರಾದರೂ ಸಿದ್ದರಾಮಯ್ಯ ನನ್ನಂತೆ ಒಬ್ಬ ಅಭ್ಯರ್ಥಿ: ಸೋಮಣ್ಣ

Share This Article