ಚಿಲ್ಲರೆ ವ್ಯಕ್ತಿ, ಬೀದಿ ನಾಯಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ- ನಿರಾಣಿಗೆ ಯತ್ನಾಳ್ ತಿರುಗೇಟು

Public TV
2 Min Read

– ಬಾಯಿ ಹರಿಬಿಟ್ಟರೆ ಜಾತಕ ಬಿಚ್ಚಿಡುತ್ತೇನೆ
– ಮೋದಿ ಕಾಲು ಹಿಡಿಯದಂತೆ ಮೊದಲೇ ಹೇಳಿದ್ದಾರೆ

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಮನೆ ಬೆಕ್ಕು, ನಾಯಿಯ ಕಾಲು ಹಿಡಿದಿದ್ದ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ ಸೋದರ ಸಂಗಮೇಶ್ ನಿರಾಣಿ ಹೇಳಿಕೆಗೆ ಯತ್ನಾಳ್ ತಿರುಗೇಟು ನೀಡಿದ್ದಾರೆ. ಚಿಲ್ಲರೆ ವ್ಯಕ್ತಿ, ಬೀದಿ ನಾಯಿಗಳ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಅವರು, ನಾನು ರೋಡ್ ಚಾಪ್ (ಬೀದಿ ಬದಿ ಹೋಗುವವರು) ಗಳಿಗೆ ಉತ್ತರ ಕೊಡುವುದಿಲ್ಲ. ಅವರಿವರ ಆಹ್ವಾನ ಸ್ವೀಕರಿಸಲು ನಾನೇನು ರೋಡ್ ಚಾಪ್ ಲೀಡರ್ ಅಲ್ಲ. ಅಲ್ಲದೇ ನಾನು ಬೀದಿ ನಾಯಿಗಳಿಗೆಲ್ಲ ಉತ್ತರ ಕೊಡುವುದಿಲ್ಲ ಎಂದು ಹಿಂದೆಯು ಹೇಳಿದ್ದೆ. ರೋಡ್ ಚಾಪ್‍ಗಳಿಗೆಲ್ಲ ಯತ್ನಾಳ್ ಉತ್ತರ ಕೊಡುತ್ತಾ ಹೋಗಬೇಕಾ? ರೋಡ್ ಚಾಪ್, ಬೀದಿ ನಾಯಿಗಳಿಗೆ ಉತ್ತರ ಕೊಡದಂತೆ ನಮ್ಮ ಹಿರಿಯರು ಹೇಳಿ ಕೊಟ್ಟಿದ್ದಾರೆ ಎಂದರು.

ರಾಜಕಾರಣದಲ್ಲಿ ನನ್ನ ವಿರುದ್ಧ ಬಾಯಿ ಹರಿಬಿಟ್ಟರೇ ನನ್ನ ಬಳಿ ಜಾತಕವಿದ್ದು, ಅವರ ಬಹುದೊಡ್ಡ ಜಾತಕ ಹರಿಬಿಡುತ್ತೇನೆ. ಬಾಯಿಗೆ ಬೀಗ ಹಾಕಿಕೊಂಡಿದ್ದರೆ ಸರಿ ಎಂದು ಎಚ್ಚರಿಕೆ ನೀಡುತ್ತಿದ್ದು, ಇಂತಹ ಮಾತುಗಳು ಮುಂದುವರಿದರೆ ಮುಂದಿನ ದಿನಗಳಲ್ಲಿ ಪರಿಣಾಮ ನೆಟ್ಟರಿಗರಲ್ಲ ಎಂದರು.

ಇದೇ ವೇಳೆ ವಚನಾನಂದ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸ್ವಾಮೀಜಿಗಳ ಅಸಹಾಯಕತೆ ದುರುಪಯೋಗವಾಗುತ್ತಿದೆ. ಸ್ವಾಮೀಜಿಗಳು ಮತ್ತಷ್ಟು ಸುಧಾರಣೆ ಆಗಬೇಕಿದೆ. ಯೋಗದಿಂದ ಚಿತ್ತವನ್ನು ನಿಯಂತ್ರಣ ಮಾಡಬಹುದು ಎಂಬ ಮಾತಿದೆ. ಯೋಗ ಮಾಡುವವರ ಬಳಿ ಒಂದು ತೇಜಸ್ಸು, ಗಾಂಭೀರ್ಯತೆ ಇರುತ್ತೆ. ಮುಂಜಾನೆ ಒಂದು, ಮಧ್ಯಾಹ್ನ ಒಂದು ಮಾತನಾಡೋರಿಗೆ ಇರಲ್ಲ. ಸರಿಯಾಗಿ ಯೋಗ ಮಾಡಿದರೇ ಮಾತು ಒಂದೇ ಆಗಿರುತ್ತೆ. ಆದರೆ ಶ್ರೀಗಳ ಮೇಲೆ ಯಾರು ಒತ್ತಡ ಹಾಕಲು ಆಗುವುದಿಲ್ಲ ಎಂದರು.

ಮೋದಿ ಹೇಳಿದ್ದಾರೆ: ಶೀಘ್ರವೇ ಸಂಪುಟ ವಿಸ್ತರಣೆ ಆಗಲಿದ್ದು, ಆ ಬಳಿಕ ಎಲ್ಲವೂ ಗೊತ್ತಾಗಲಿದೆ. ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕಿದ ಮೇಲೆ ಏನಾಗುತ್ತದೆ ಗೊತ್ತಾಗಲಿದೆ. ಸಚಿವ ಸಂಪುಟ ವಿಸ್ತರಣೆ ಪ್ರತಿಕ್ರಿಯೆ ಮುಗಿದ ಮೇಲೆ ನಾನು ಈ ಬಗ್ಗೆ ಮಾತನಾಡುತ್ತೇನೆ. ಜೀವನದಲ್ಲಿ ನಾನು ಯಾರ ಕಾಲು ಹಿಡಿದಿಲ್ಲ. ನಮ್ಮ ತಂದೆ-ತಾಯಿ, ಮಠಾಧೀಶರು, ವಾಜಪೇಯಿ ಹಾಗೂ ಅಡ್ವಾನಿ ಅವರನ್ನು ಬಿಟ್ಟು ಬೇರೆಯವರ ಕಾಲು ಹಿಡಿದಿಲ್ಲ. ಪ್ರಧಾನಿ ಮೋದಿ ಅವರು ಮೊದಲೇ ಕಾಲ ಮೇಲೆ ಬೀಳಬೇಡಿ ಎಂದು ಹೇಳಿದ್ದಾರೆ. ನಾನು ಕಾಲು ಹಿಡಿದು ರಾಜಕಾರಣ ಮಾಡಿದ್ದರೆ ಮುಖ್ಯಮಂತ್ರಿಯಾಗಿರುತ್ತಿದ್ದೆ ಎಂದು ತಿಳಿಸಿದರು. ಇದನ್ನು ಓದಿ: ನಮ್ಮ ಮನೆ ಬೆಕ್ಕು, ನಾಯಿ ಕಾಲು ಹಿಡಿದಿದ್ದ ಯತ್ನಾಳ್: ಸಂಗಮೇಶ್ ನಿರಾಣಿ

ಸಿಎಂ ಬಿಎಸ್‍ವೈ ಅವರಿಗೆ 50 ವರ್ಷಗಳ ರಾಜಕೀಯ ಅನುಭವವಿದೆ. ಅವರು ಯಾರ ಒತ್ತಡ, ಬ್ಲಾಕ್ ಮೇಲ್‍ಗೂ ಮಣಿಯುವುದಿಲ್ಲ. ಆದರೆ ಕೆಲವರು ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆಯಲು ಮುಂದಾಗಿದ್ದಾರೆ. ಈ ಒತ್ತಡ ಆಟ ನಡೆಯುವುದಿಲ್ಲ. ನಾನು ಮತ್ತು ಸಿಎಂ ಬಿಎಸ್ ವೈ ಹೆಚ್ಚು ಜಗಳ ಮಾಡಿದ್ದೇವೆ. ಆದರೆ ನಮ್ಮ ನಡುವೆ ಮಾತುಕತೆ ನಡೆದು ಒಪ್ಪಂದವಾದ ಬಳಿಕ ಎಲ್ಲವೂ ಸರಿಯಾಗಿದೆ. ಅವರಿಗೆ ಯಾರನ್ನು ಮಣ್ಣಲ್ಲಿ ಇಡಬೇಕು, ಯಾರನ್ನು ಮಣ್ಣಿನಿಂದ ಮೇಲಕ್ಕೆ ಎತ್ತಬೇಕೆಂದು ತಿಳಿದಿದೆ. 16 ಖಾತೆಗಳು ಸಿಎಂ ಬಳಿ ಇವೆ, ಎಲ್ಲವನ್ನು ಅವರೊಬ್ಬರೇ ನಿಭಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಇನ್ನೊಂದು ವಾರದಲ್ಲಿ ಸಂಪುಟ ವಿಸ್ತರಣೆಯಾಗಬಹುದು ಅಥವಾ 2-3 ದಿನಗಳಲ್ಲಿಯೂ ಸಂಪುಟ ವಿಸ್ತರಣೆಯಾದರೂ ಅಚ್ಚರಿ ಇಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *