ತಾಕತ್ತಿದ್ರೆ ಬೇಗ್‍ರನ್ನು ಪಕ್ಷದಿಂದ ಉಚ್ಛಾಟನೆ ಮಾಡ್ಲಿ: ಗುಂಡೂರಾವ್‍ಗೆ ಯತ್ನಾಳ್ ಸವಾಲು

Public TV
1 Min Read

– 23ರಂದು ಶೋಕಾಚಾರಣೆ ಮಾಡಬೇಕು

ವಿಜಯಪುರ: ತಾಕತ್ತಿದ್ದರೆ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರನ್ನು ಪಕ್ಷದಿಂದ 6 ವರ್ಷ ಉಚ್ಛಾಟನೆ ಮಾಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಸವಾಲು ಹಾಕಿದ್ದಾರೆ.

ನಗರದಲ್ಲಿ ಮಾತನಾಡಿದ ಶಾಸಕರು, ರೋಷನ್ ಬೇಗ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರನ್ನು ಹೀನಾಯವಾಗಿ ತೆಗಳಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಛಿದ್ರವಾಗುವ ಲಕ್ಷಣಗಳು ಕಾಣುತ್ತಿವೆ. ನಾವು ಆಪರೇಷನ್ ಕಮಲ ಮಾಡುವುದಿಲ್ಲ. ಮೈತ್ರಿ ಸರ್ಕಾರವು ತಾನಾಗಿಯೇ ಉರುಳುತ್ತದೆ ಎಂದು ತಿಳಿಸಿದರು.

ಮೈತ್ರಿ ಸರ್ಕಾರ ಬೀಳುತ್ತದೆ ಎಂಬ ಭಯ ಸಿಎಂ ಕುಮಾರಸ್ವಾಮಿ ಅವರಿಗೆ ಶುರುವಾಗಿದೆ. ಹೀಗಾಗಿ ಅವರು ಜನರಿಂದ ದೂರ ಉಳಿದು, ಕೇವಲ ರೆಸಾರ್ಟಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರಿಗೆ ಯೋಜನೆ, ಅಭಿವೃದ್ಧಿ ಕಾರ್ಯಗಳನ್ನು ನೀಡಲು ವಿಫಲವಾದ ಮೈತ್ರಿ ಸರ್ಕಾರ ಗೌರವಯುತವಾಗಿ ರಾಜೀನಾಮೆ ನೀಡಬೇಕು. ಮುಂದೆ ಯಾರು ಸರ್ಕಾರ ರಚನೆ ಮಾಡಬೇಕು ಎನ್ನುವುದನ್ನು ರಾಜ್ಯಪಾಲರು ಹೇಳುತ್ತಾರೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿಯು ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುತ್ತದೆ ಎಂದು ಹೇಳಿದರು.

ಎಕ್ಸಿಟ್ ಪೋಲ್ ನಂಬಲೇ ಬೇಕು. ಈಗ ಸಿಕ್ಕಿರುವ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಇನ್ನು ಮುಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೇವಲ ಟ್ವೀಟ್ ಮಾಡುತ್ತಾ ಕುಳಿತುಕೊಳ್ಳಬೇಕು. ಮಹಾಮೈತ್ರಿಯ 26 ಅಭ್ಯರ್ಥಿಗಳು 23ರಂದು ಶೋಕಾಚಾರಣೆ ಮಾಡಬೇಕು. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾದ ಮುಂದಿನ ಐದು ವರ್ಷಗಳಲ್ಲಿ ಭ್ರಷ್ಟರ ಯುಗಾಂತ್ಯವಾಗುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *