ಡಿಕೆಶಿಯನ್ನ ಬಿಜೆಪಿಗೆ ಸೆಳೆಯುವ ಪ್ರಯತ್ನ ದೆಹಲಿಯಲ್ಲಿ ನಡೆದಿತ್ತು – ಯತ್ನಾಳ್‌ ಹೊಸ ಬಾಂಬ್‌

2 Min Read

– ದೊಡ್ಡ ಹುದ್ದೆ ಕೊಟ್ರೆ ಮತ್ತೆ ಬಿಜೆಪಿಗೆ ಹೋಗ್ತೇನೆ ಎಂದ ಶಾಸಕ

ಬೆಳಗಾವಿ: ನನ್ನನ್ನ ಪಕ್ಷದಿಂದ ಉಚ್ಛಾಟನೆ ಮಾಡಿದಾಗ ಡಿಕೆ ಶಿವಕುಮಾರ್‌ ಅವರನ್ನ ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆದಿತ್ತು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಹೊಸ ಬಾಂಬ್‌ ಸಿಡಿಸಿದ್ದಾರೆ.

ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು, ನನ್ನನ್ನ ಉಚ್ಛಾಟನೆ ಮಾಡಿದ ಸಂದರ್ಭದಲ್ಲಿ ದೆಹಲಿಯಲ್ಲಿ ಡಿಕೆ ಶಿವಕುಮಾರ್‌ ಅವರನ್ನ ಆಪರೇಷನ್ ಮಾಡುವ ಪ್ರಯತ್ನ ನಡೆದಿತ್ತು. ನಾನು ಪಕ್ಷದಲ್ಲಿದ್ರೆ ಇದು ಆಗಲ್ಲ ಅಂತ ಉಚ್ಚಾಟನೆ ಬಳಿಕ ಪ್ರಯತ್ನ ನಡೆದಿತ್ತು ಎಂದು ಸ್ಫೋಟಕ ಹೇಳಿಕೆ ನೀಡಿದರು.

ವಿಜಯೇಂದ್ರ ಡಿಸಿಎಂ ಆಗಲು ಮೀಟ್‌ ಮಾಡಿದ್ರು
ವಿಜಯೇಂದ್ರ ಅವರು ತಾವು ಡಿಸಿಎಂ ಆಗಲು ದೆಹಲಿಯಲ್ಲಿ ಡಿಕೆ ಶಿವಕುಮಾರ್‌ (DK Shivakumar) ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಬಿಜೆಪಿಯವರೇ ಈ ಮಾತು ನನಗೆ ಹೇಳಿದ್ರು. ಆ ನಂತರ ಜೋಷಿಯವರು ಅಮಿತ್ ಶಾ ಅವರ ಸೂಚನೆ ಮೇರೆಗೆ ನಾವು ಯಾರನ್ನೂ ಸೇರಿಸಿಕೊಳ್ತಿಲ್ಲ ಅಂತ ಹೇಳಿದ್ರು. ಆದ್ರೆ ನಿಜವಾಗಿಯೂ ಡಿಕೆಶಿಯನ್ನ ಬಿಜೆಪಿಗೆ ಕರೆತರುವ ಪ್ರಯತ್ನ ನಡೆದಿತ್ತು ಎಂದು ಹೇಳಿದರು.

ಇದೇ ಡಿಸೆಂಬರ್‌ 19 ಕ್ಕೆ ಕಾಂಗ್ರೆಸ್‌ನವರು ದೆಹಲಿಗೆ ಹೋಗ್ತಿದ್ದಾರೆ. ಈಗ ಇಲ್ಲಿ ಗುಂಪು ಸಭೆಗಳು, ಡಿನ್ನರ್ ಸಭೆಗಳು ನಡೀತಿವೆ. ಬೆಂಬಲ ಯಾಚನೆ ಮಾಡಲು ಪ್ರತ್ಯೇಕ ಸಭೆಗಳು ನಡೀತಿವೆ. ಇನ್ನರ್ ಮತ್ತು ಡಿನ್ನರ್ ಸಭೆಗಳು ನಡೀತಿವೆ ಎಂದು ಕುಟುಕಿದರು.

ದೊಡ್ಡ ಹುದ್ದೆ ಕೊಟ್ರೆ ಮತ್ತೆ ಬಿಜೆಪಿಗೆ ಹೋಗ್ತೀನಿ
ಆರ್‌. ಅಶೋಕ್ ಕೊಠಡಿಯಲ್ಲಿ ಯತ್ನಾಳ್ ಜೊತೆ ಸುನೀಲ್ ಕುಮಾರ್ ಮತ್ತಿತರರು ಕ್ಲೋಸ್ ಡೋರ್ ಮೀಟಿಂಗ್‌ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊನ್ನೆ ಬಿಜೆಪಿಯ ಕೆಲವು ಶಾಸಕರು ನನ್ನ ಜೊತೆ ಮಾತಾಡಿದ್ರು. ಬಿಜೆಪಿಗೆ ನೀವು ಬನ್ನಿ ಅಂದ್ರು, ನಿಮ್ಮಂಥ ನಾಯಕರ ಅಗತ್ಯ ಇದೆ ಬನ್ನಿ ಅಂದ್ರು. ನಾನು ಹಾಗೇ ಬರಲ್ಲ ದೊಡ್ಡ ಸ್ಥಾನ ಕೊಡಿ ಅಂದಿದ್ದೇನೆ. ದೊಡ್ಡ ಸ್ಥಾನ ಅಂದ್ರೆ ರಾಜ್ಯಾಧ್ಯಕ್ಷ ಹುದ್ದೆ ಅಥವಾ ವಿಪಕ್ಷ ನಾಯಕನ ಹುದ್ದೆ ಕೇಳಿದ್ದೇನೆ. ನಾನು ಶಾಸಕನಾಗಿಯೇ ವಾಪಾಸ್ ಹೋಗಲ್ಲ, ಸ್ಥಾನ ಕೊಟ್ರೆ ಹೋಗ್ತೇನೆ ಅಂತ ಹೇಳಿರುವುದಾಗಿ ತಿಳಿಸಿದ್ರು.

Share This Article