21ಕ್ಕೆ ಹೃದಯಾಘಾತ: ಮಾಜಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯಗೆ ಪುತ್ರ ವಿಯೋಗ

Public TV
1 Min Read

ಹೈದರಾಬಾದ್: ಮಾಜಿ ಕೇಂದ್ರ ಸಚಿವ, ಹಾಲಿ ಬಿಜೆಪಿಯ ಸಂಸದ ಬಂಡಾರು ದತ್ತಾತ್ರೇಯ ಅವರ ಪುತ್ರ ಮಂಗಳವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ತೃತೀಯ ವರ್ಷದ ವೈದ್ಯಕೀಯ ವಿದ್ರ್ಯಾಥಿಯಾಗಿದ್ದ ಬಂಡಾರು ವೈಷ್ಣವ್(21) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಹೈದರಾಬಾದಿನ ರಾಮನಗರದಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬದವರೊಂದಿಗೆ ಊಟ ಮಾಡುತ್ತಿದ್ದಾಗ ವೈಷ್ಣವ್ ಹೃದಯಾಘಾತವಾಗಿ ಕುಸಿದು ಬಿದ್ದಿದ್ದರು.

ಕೂಡಲೇ ವೈಷ್ಣವ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು 12.30ರ ನಸುಕಿನ ವೇಳೆ ಮೃತಪಟ್ಟಿದ್ದಾರೆ.

ಮಾಧ್ಯಮಗಳಲ್ಲಿ ವೈಷ್ಣವ್ ಸಾವಿನ ಬಗ್ಗೆ ತಿಳಿದ ಅರ್ಧ ಗಂಟೆಯಲ್ಲಿ ಹೈದರಾಬಾದ್ ಮೇಯರ್ ಬಾನ್ತು ರಾಮಮೋಹನ್ ಆಸ್ಪತ್ರೆಗೆ ತೆರಳಿದ್ದರು. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಲಕ್ಷ್ಮಣ್ ಮತ್ತು ಅನೇಕ ಬಿಜೆಪಿ ನಾಯಕರು ಸುಮಾರು ಮುಂಜಾನೆ 3 ಗಂಟೆಗೆ ಆಸ್ಪತ್ರೆಗೆ ಹೋಗಿದ್ದರು.

ಬಂಡಾರು ದತ್ತಾತ್ರೇಯ ಅವರು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವ ಕಾರಣ ಇಂದು ಬೆಳಗ್ಗೆ ಮಗ ಮೃತಪಟ್ಟ ವಿಚಾರವನ್ನು ತಿಳಿಸಲಾಗಿದೆ. ಇತ್ತ ವೈಷ್ಣವ್ ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

ಬಂಡಾರು ದತ್ತಾತ್ರೇಯ ಅವರು 2014ರ ನವೆಂಬರ್ ನಿಂದ 2017ರ ಸೆಪ್ಟೆಂಬರ್ ವರಗೆ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *