ಕಳ್ಳೆತ್ತುಗೆ ವೋಟು ಹಾಕಬೇಡಿ, ಉಳುವ ಎತ್ತಿಗೆ ಮತ ಹಾಕಿ: ಬಾಗಲಕೋಟೆಯಲ್ಲಿ ಸಿದ್ದು ಅಬ್ಬರ

2 Min Read

ಬಾಗಲಕೋಟೆ: ಕಳ್ಳೆತ್ತುಗೆ ವೋಟು ಹಾಕಬೇಡಿ, ಉಳುವ ಎತ್ತಿಗೆ ಮತ ಹಾಕಿ ನಮ್ಮ ಕಾಂಗ್ರೆಸ್‌ (Congress)  ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕರೆ ನೀಡಿದ್ದಾರೆ.

ಬಾಗಲಕೋಟೆ ಉಪಚುನಾವಣೆ(Bagalkot By Election) ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ ಧುಮುಕಿದ್ದಾರೆ. ಇಂದು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ (Umesh Meti) ನಾಯನಗಲಿ ಗ್ರಾಮದಲ್ಲಿ ಪ್ರಚಾರ ನಡೆಸಿದ ಅವರು, ಬಿಜೆಪಿಯವರು ಕಳ್ಳೆತ್ತುಗಳು. ಕಳ್ಳೆತ್ತು ಬಿಜೆಪಿಗೆ ಮತ ಹಾಕಬಾರದು. ದಯಮಾಡಿ ಉಮೇಶ್ ಮೇಟಿಯನ್ನು ಆಶೀರ್ವಾದ ಮಾಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.  ಇದನ್ನೂ ಓದಿ: ಪೈಲ್ವಾನ್ ಬಳಿಕ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಮನವೊಲಿಕೆಗೆ `ಕೈ’ ಕಸರತ್ತು

ನಾನು ಸಿಎಂ ಆಗಿ ಇಲ್ಲಿ ಬಂದಿಲ್ಲ. ಪಕ್ಷದ ಕಾರ್ಯಕರ್ತನಾಗಿ ಇಲ್ಲಿ ಬಂದಿದ್ದೇನೆ. ಮೇಟಿ ಅವರ ಕೆಲಸಗಳನ್ನು ಮುಂದುವರೆಸಲು ಉಮೇಶ್‌ ಅವರಿಗೆ ಮತ ಹಾಕಿ. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಒಂದೇ ಒಂದು ರೂಪಾಯಿ ರೈತರ ಸಾಲ ಮನ್ನಾ ಮಾಡಲಿಲ್ಲ. ಅಧಿಕಾರದಲ್ಲಿದ್ದಾಗ ಜನರಿಗೆ ಸ್ಪಂದಿಸದೆ, ಈಗ ನಮ್ಮ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರಿಗೆ ಮತ ಕೇಳುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.


519 ರಿಂದ 524 ಮೀಟರ್ ವರೆಗೆ ಆಲಮಟ್ಟಿ ಜಲಾಶಯವನ್ನು ಎತ್ತರಿಸಬೇಕು. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಡ್ಯಾಂ ಎತ್ತರಿಸಲಿಲ್ಲ. ಬಾಗಲಕೋಟೆಯಲ್ಲಿ ಮೆಡಿಕಲ್ ಕಾಲೇಜು ಮಾಡಬೇಕೆಂದು ಮೇಟಿಯವರು ಕನಸು ಕಂಡಿದ್ದರು. ವೀರಣ್ಣ ಚರಂತಿಮಠ ಮೆಡಿಕಲ್ ಕಾಲೇಜು ಮಾಡಲಿಲ್ಲ. ವೀರಣ್ಣ ಚರಂತಿಮಠ ತಮ್ಮ ಮನೆಗೆ ಯಾರನ್ನು ಸೇರಿಸಿಕೊಳ್ಳುವುದಿಲ್ಲ. ಅವರು ಜನಪ್ರತಿನಿಧಿಯಾಗಲು ಯೋಗ್ಯತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರಿಗೆ ಸಚಿವರಾದ ಆರ್.ಬಿ. ತಿಮ್ಮಾಪುರ, ಬೈರತಿ ಸುರೇಶ್, ಶಿವಾನಂದ ಪಾಟೀಲ್ ಸೇರಿದಂತೆ ಪಕ್ಷದ ಶಾಸಕರು, ಮುಖಂಡರು ಹಾಗೂ ಸ್ಥಳೀಯ ಮುಖಂಡರುಗಳು ಸಾಥ್‌ ನೀಡಿದರು.

Share This Article